ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ
Team Udayavani, Oct 29, 2021, 11:20 AM IST
ಗುರುಮಠಕಲ್: ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ಗಳನ್ನು ಕೈಬಿಡಬೇಕು. ಆಶಾ ಅಂಗನವಾಡಿ ಬಿಸಿಯೂಟ ಸ್ಕೀಮ್ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರಂದು ಪರಿಗಣಿಸಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್ ಹೇಳಿದರು.
ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಸಿಬ್ಬಂದಿ ಅನಿಲ್ ಕುಮಾರ ಯರಗಳ್ ಅವರಿಗೆ ಮನವಿ ನೀಡಿ ಮಾತನಾಡಿದ ಅವರು, ಕೇಂದ್ರೀಯ ಸಮಿತಿ ಕರೆ ನೀಡಿರುವ ಅಕ್ಟೋಬರ್ 25ರಿಂದ 31ರ ವರೆಗೆ ಅಖೀಲ ಭಾರತ ಪ್ರತಿಭಟನಾ ಸಪ್ತಾಹ ಅಂಗವಾಗಿ ತಾಲೂಕಿನ ಗಾಜರಕೋಟ, ಚಂಡ್ರಿಕಿ, ಚಪೇಟ್ಲಾ, ಕಾಕಲವಾರ, ಚಿನ್ನಾಕರ್ ಹಾಗೂ ಗುರುಮಠಕಲ್ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪುರಸಭೆ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದು, ಗುತ್ತಿಗೆ-ಹೊರ ಗುತ್ತಿಗೆ ಪದ್ಧತಿ ರದ್ದು ಮಾಡಿ ಸರ್ಕಾರದ “ಸಿ’ ಮತ್ತು “ಡಿ’ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಮಾಸಿಕ ಕನಿಷ್ಟ ವೇತನ 21 ಸಾವಿರ ರೂ. ನಿಗದಿ ಪಡಿಸಬೇಕು, ಕಾರ್ಮಿಕರ ಶಾಸನಬದ್ಧ ಹಕ್ಕುಗಳು ಮತ್ತು ಸೌಲಭ್ಯ ಒದಗಿಸಬೇಕು ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಗಂಗಾಂಭಿಕ, ವರಲಕ್ಷ್ಮೀ, ಮಮತಾ, ಮಂಜುಳಾ, ಗೌರಮ್ಮ, ಜಯಮ್ಮ, ಸುಗಂದಮ್ಮ, ಅರುಣಾ, ಚಂದಮ್ಮ, ರೇಣುಕಾ ಪಾಟೀಲ್, ವಿಜಯಲಲಕ್ಷ್ಮೀ, ಶಾರದಾದೇವಿ, ಶರಣಮ್ಮ, ಚಂದ್ರಕಲಾ ಸೇರಿದಂತೆ ಇದ್ದರು.