ಪೌರಕಾರ್ಮಿಕ ಮಹಿಳೆಗೆ ರಾಜ್ಯೋತ್ಸವ ಗರಿ
Team Udayavani, Nov 1, 2021, 12:32 PM IST
ಯಾದಗಿರಿ: ಗಿರಿನಾಡು ಯಾದಗಿರಿಯ ಸ್ವತ್ಛ ಭಾರತದ ರಾಯಭಾರಿ, ಪೌರ ಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪ ಬಬಲಾದ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
“ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಕಳೆದ ಮೂರು ದಶಕಗಳಿಂದ ಪೌರ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೇನೆ. ನಗರ ಸ್ವಚ್ಛತೆಯೇ ನನ್ನ ಪರಮ ಕೆಲಸ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಸಾಕಷ್ಟು ನಾಯಕರು, ಅಧಿಕಾರಿಗಳು, ಜನರು ತೋರಿದ ಪ್ರೀತಿಯಿಂದ ಇನ್ನೂ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದು ರತ್ನಮ್ಮ “ಉದಯವಾಣಿ’ಗೆ ತಿಳಿಸಿದರು.
ಮುಂದಿನ ವರ್ಷದ ಮಾರ್ಚ್ಗೆ ಸೇವಾ ನಿವೃತ್ತಿ ಹೊಂದಲಿರುವ ರತ್ನಮ್ಮರಿಗೆ ಐವರು ಮಕ್ಕಳು. ಅವರಲ್ಲಿ ಮೂವರು ಪುತ್ರಿಯರು. ಇಬ್ಬರು ಪುತ್ರರು. ಮಕ್ಕಳಿಗೆಲ್ಲ ಉತ್ತಮ ಶಿಕ್ಷಣ ಕೊಡಿಸಿದ್ದು, ಇವರ ಒಬ್ಬರು ಪುತ್ರಿ ಅರಕೇರಾ ಜೆ ಶಾಲೆಯಲ್ಲಿ ಶಿಕ್ಷಕಿ. ಮತ್ತೊಬ್ಬ ಮಗಳು ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.
ನಿವೃತ್ತಿಯಂಚಿನಲ್ಲಿ ಪ್ರಶಸ್ತಿ
ರತ್ನಮ್ಮಳು ಕಳೆದ 3 ದಶಕಗಳಿಂದ ಇಲ್ಲಿನ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮುಂಬರುವ ಮಾರ್ಚ್ ತಿಂಗಳಲ್ಲಿ ಅವರು ನಿವೃತ್ತಿಯಾಗಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದ್ದಿ ತಿಳಿದ ಅವರ ಮಕ್ಕಳು ಮತ್ತು ಬಂಧುಗಳು ರತ್ನಮ್ಮಳಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು.
ಇದನ್ನೂ ಓದಿ: ಭಾರತ ತಂಡದ ಸೆಮಿ ಪ್ರವೇಶ ಪವಾಡವಲ್ಲದೆ ಬೇರೇನೂ ಅಲ್ಲ:ಟ್ರೋಲ್ ಮಾಡಿದ ಅಫ್ರಿದಿ
2021ರ ಮಾರ್ಚ್ ಅಂತ್ಯಕ್ಕೆ ಇವರ ನಿವೃತ್ತಿಯಾಗಲಿದ್ದು, ನಿವೃತ್ತಿಗೆ ಮುನ್ನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ರತ್ನಮ್ಮ ಅವರ ಪತಿ ಶಿವಪ್ಪ ಬೀಡಿ ಕಾರ್ಮಿಕರಾಗಿದ್ದು, ಎಂಟು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ರತ್ನಮ್ಮ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಗಿರಿನಾಡಿನ ಸ್ವತ್ಛ ಭಾರತದ ರಾಯಬಾರಿ ಪೌರ ಕಾರ್ಮಿಕ ಮಹಿಳೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಇಲ್ಲಿನ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಸಿಬ್ಬಂದಿಗಳಿಗೆ ಅತೀವ ಸಂತೋಷವನ್ನುಂಟು ಮಾಡಿದೆ.
ನಮ್ಮ ತಾಯಿಗೆ ಪ್ರಶಸ್ತಿ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಬಡ ಪೌರಕಾರ್ಮಿಕ ಮಹಿಳೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ನಂಬಲಾಗಲಿಲ್ಲ. ಮೊದ ಮೊದಲು ಸುದ್ದಿ ನಿರಾಕರಿಸಿದೆವು. ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ಫೋನ್ ಬಂದಿತ್ತು. ಅವರು ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ಮೊದಲು ತಿಳಿಸಿದರು. ನಾವು ಆಶ್ಚರ್ಯದಿಂದ ಅವರನ್ನು ಕೇಳಿದಾಗ ಇನ್ನೂ ಖಾತರಿಯಾಗಿಲ್ಲ. ನಿಮಗೆ ಸಿಕ್ಕಿದೆ ಎಂದು ಮಾಹಿತಿ ಇದೆ. ಅದಕ್ಕೆ ನೀವು ಬರುವುದಾದರೆ ಬೆಂಗಳೂರಿಗೆ ಬರಬಹುದು ಎಂದು ತಿಳಿಸಿದರು. ಅವರು ಹೇಳಿದ ಮಾತು ನಂಬಲು ಸಾಧ್ಯವಾಗಲಿಲ್ಲ. ಪರಿಪೂರ್ಣವಾಗಿ ನಿಮಗೆ ರಾಜ್ಯೋತ್ಸವ ಸಿಕ್ಕಿದೆ ಎಂದು ತಿಳಿಸಿದರೆ ನಾವು ಹೋಗುತ್ತಿದ್ದೇವು ನಮಗೆ ಸಿಕ್ಕಿರಲಿಕ್ಕಿಲ್ಲ ಒಂದು ವೇಳೆ ಬೆಂಗಳೂರಿಗೆ ಹೋದ ಮೇಲೆ ನಿಮಗೆ ಸಿಕ್ಕಿಲ್ಲವೆಂದರೆ ಏನು ಮಾಡೋದು ಅಂತ ನಾವು ಬಿಟ್ಟೇವು ಆದರೆ ನಿಮ್ಮಿಂದ ನಮಗೆ ರಾಜ್ಯೋತ್ಸವ ಪ್ರಶಸ್ತಿ ದಕ್ಕಿದೆ ಎಂಬ ಸುದ್ದಿ ತಿಳಿದು ಸಂತೋಷವಾಗಿದೆ. -ಅಂಜನಮ್ಮ, ಕಿರಿಯ ಮಗಳು ಯಾದಗಿರಿ
ನಗರದ ಇಂದಿರಾ ನಗರದ ರತ್ನಮ್ಮ ಶಿವಪ್ಪ ಬಬಲಾದ ಎನ್ನುವ ಪೌರ ಕಾರ್ಮಿಕ ಮಹಿಳೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಸಂತೋಷವಾಗಿದೆ. ಸ್ವತ್ಛ ಮತ್ತು ಸುಂದರ ನಗರವಾಗಿಸಲು ಪೌರ ಕಾರ್ಮಿಕರ ಶ್ರಮ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅದೇ ಪೌರ ಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. -ವೆಂಕಟರೆಡ್ಡಿಗೌಡ ಮುದ್ನಾಳ, ಶಾಸಕ
ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ರತ್ನಮ್ಮ ಎನ್ನುವ ಹಿರಿಯ ಜೀವಕ್ಕೆ ನಿವೃತ್ತಿಯ ಹಂಚಿನಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು, ನಮ್ಮ ನಗರಸಭೆಗೆ ಹೆಮ್ಮೆಯ ಸಂಗತಿಯಾಗಿದೆ. ಕಳೆದ ಹಲವು ವರ್ಷಗಳಿಂದ ಅವರು ಸಲ್ಲಿಸಿದ ನಿಶ್ವಾರ್ಥ ಸೇವೆಗೆ ಇಂದು ರಾಜ್ಯ ಸರ್ಕಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. -ವಿಲಾಸ ಪಾಟೀಲ, ನಗರಸಭೆ ಅಧ್ಯಕ್ಷ
-ಮಹೇಶ ಕಲಾಲ