ಬಡವರ ಅನ್ನ; ಕಾಳ ಧನಿಕರ ಕನ್ನ
ಸರ್ಕಾರ ಕಠಿಣ ಕಾಯ್ದೆ ಮೂಲಕ ಈ ದಂಧೆ ನಿಯಂತ್ರಣಕ್ಕೆ ತರಬೇಕಿದೆ.
Team Udayavani, Sep 6, 2021, 5:47 PM IST
ಬೀದರ:ಬಡವರ ಹಸಿವು ನೀಗಿಸುವ “ಅನ್ನ ಭಾಗ್ಯ’ ಯೋಜನೆ ಅಕ್ಕಿಗೆ ಗಡಿ ಜಿಲ್ಲೆಯಲ್ಲಿ ಕನ್ನ ಹಾಕುವ ಕಳ್ಳ ದಂಧೆ ಎಗ್ಗಿಲ್ಲದೇ ಸಾಗಿದ್ದು, ಮಧ್ಯವರ್ತಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಈ ದಂಧೆ ಪೋಷಿಸುತ್ತಿದ್ದಾರೆ. ಇದರಿಂದ ಬಡವರ ಚೀಲತುಂಬಬೇಕಿದ್ದ ಪಡಿತರಅಕ್ಕಿಕಾಳಸಂತೆಯಲ್ಲಿ ದುಬಾರಿ ಹಣಕ್ಕೆ ಬಿಕರಿಯಾಗುತ್ತಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಪ್ತಿ ಮಾಡಿರುವಆಹಾರಧಾನ್ಯಅಂಕಿ-ಅಂಶಗಳೇ ಈ ಅಕ್ರಮಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯಲ್ಲಿ 2018ರ ಏಪ್ರಿಲ್ನಿಂದ 2021ರ ಜೂನ್ವರೆಗೆ 58 ಪಡಿತರ ಅಕ್ಕಿ ಸಾಗಾಟ-ಮಾರಾಟ ತಡೆದು ಎಫ್ಐಆರ್ ದಾಖಲಿಸಿದ್ದು, ಬರೋಬ್ಬರಿ 2.22 ಕೋಟಿ ರೂ. ಗಳ 7 ಸಾವಿರಕ್ಕೂ ಅಧಿಕ ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿಕೊಂಡಿದೆ. ಇನ್ನೂ ಇಲಾಖೆಯ ಕಣ್ತಪ್ಪಿಸಿ ಕೋಟ್ಯಂತರ ಮೌಲ್ಯದ ಅಕ್ಕಿ ಸಾಗಾಟ ನಡೆದಿದೆ. ಬೀದರ ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಒಂದೆರಡು ದಾಳಿ ನಡೆಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.
ಕಾಳಧನಿಕರಿಗೆ “ಭಾಗ್ಯ’: ಜನಸ್ನೇಹಿ ಅನ್ನ ಭಾಗ್ಯ ಯೋಜನೆ ಬಡವರ ಹಸಿವು ನೀಗಿಸುವುದಕ್ಕಿಂತ ಹೆಚ್ಚಾಗಿ ಕೆಲವು ಕಾಳಧನಿಕರಿಗೆ “ಭಾಗ್ಯ’ ತಂದಂತಾಗಿದೆ. ಯೋಜನೆಯಡಿ ಸರ್ಕಾರ ಉಚಿತವಾಗಿ ವಿತರಿಸುವ 10 ಕೆಜಿ ಅಕ್ಕಿ ಮಿಲ್ಗಳ ಪಾಲಾಗುತ್ತಿವೆ. ನಂತರ ಇದೇ ಅಕ್ಕಿ ಪಾಲಿಶ್ ರೂಪ ಪಡೆದುಕೊಂಡು ಹೊಸ ಬ್ರ್ಯಾಂಡ್ನೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದು, ಅಲ್ಲಿಂದ ಗ್ರಾಹಕರು ಖರೀದಿಸುತ್ತಿದ್ದಾರೆ. ಇನ್ನೊಂದೆಡೆ ಇದೇ ಅಕ್ಕಿ ಮಂಡಕ್ಕಿ ಭಟ್ಟಿ ಮತ್ತು ಹೋಟೆಲ್ಗಳಿಗೂ ರವಾನೆಯಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ಪಡೆಯುವ ಫಲಾನುಭವಿಗಳು ದಿನಸಿ ಅಂಗಡಿ ಮತ್ತು ಮಧ್ಯವರ್ತಿಗಳಿಗೆಕೆಜಿಗೆ10ರಿಂದ12 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ದಂಧೆಕೋರರು ಇದೇ ಅಕ್ಕಿಯನ್ನು ಕೆಲವೊಮ್ಮೆ ಸ್ಥಳೀಯ ಮಿಲ್ ಗಳಿಗೆ ಇಲ್ಲವೇ ಅನ್ಯ ರಾಜ್ಯಗಳಿಗೆ ಕಳುಹಿಸಿ 20ರಿಂದ 25ರವರೆಗೆ ಮಾರುತ್ತಾರೆ. ಮಿಲ್ಗಳಲ್ಲಿ ಪಾಲಿಷ್ ಆಗುವ ಈ ಅಕ್ಕಿ 35ರಿಂದ 40 ರೂ. ವರೆಗೂ ಜನರ ಬಳಿಗೆ ಬರುತ್ತಿವೆ. ಪಡಿತರಆಹಾರವನ್ನುಮುಕ್ತಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಮತ್ತು ಖರೀದಿಸುವುದು ಕಾನೂನು ಬಾಹಿರವಾಗಿದ್ದರೂ ಈ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅಧಿಕಾರಿಗಳ ಸಹಕಾರ ಇಲ್ಲದೇ ಈ ದಂಧೆ ನಡೆಯಲು ಸಾಧ್ಯವೇ ಇಲ್ಲ.
ಮೇಲ್ನೋಟಕ್ಕೆ ದಾಳಿ ನಡೆಸಿ ಜಾಣ ಮೌನರಂತೆ ವರ್ತಿಸುತ್ತಿದ್ದಾರೆಂಬ ಆರೋಪಗಳಿದ್ದು, ಸರ್ಕಾರ ಕಠಿಣ ಕಾಯ್ದೆ ಮೂಲಕ ಈ ದಂಧೆ ನಿಯಂತ್ರಣಕ್ಕೆ ತರಬೇಕಿದೆ.
ಅಕ್ರಮ ದಂಧೆ ನಡೆದದ್ದೆಷ್ಟು?
ಬೀದರ ಜಿಲ್ಲೆಯಲ್ಲಿ 2018ರ ಮಾರ್ಚ್ ನಿಂದ 2019ರ ಮಾರ್ಚ್ವರೆಗೆ ವಾಹನ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಪಡಿತರ ಅಕ್ಕಿ ಸಾಗಾಟದ 13 ಎಫ್ಐಆರ್ ದಾಖಲಿಸಿ 69.23 ಲಕ್ಷ ರೂ. ಮೌಲ್ಯದ 2423 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದೆ.
2019ರ ಏಪ್ರಿಲ್ನಿಂದ 2020ರ ಮಾರ್ಚ್ ವರೆಗೆ 31 ಪ್ರಕರಣದಾಖಲಿಸಿ 1.13 ಕೋಟಿ ರೂ. ಮೌಲ್ಯದ 4062 ಕ್ವಿಂಟಲ್ ಮತ್ತು 40-50 ಕೆಜಿ ತೂಕದ 430 ಚೀಲ ಅಕ್ಕಿ, 2020ರಲ್ಲಿ 21 ಎಫ್ಐಆರ್ ದಾಖಲಿಸಿ 92 ಲಕ್ಷ ರೂ. ಮೌಲ್ಯದ 3302 ಕ್ವಿಂಟಲ್ ಅಕ್ಕಿ ಹಾಗೂ 2021ರ ಏಪ್ರಿಲ್ನಿಂದ ಜೂನ್ವರೆಗೆ 3 ಎಫ್ ಐಆರ್ ದಾಖಲಿಸಿ 49 ಸಾವಿರ ಮೌಲ್ಯದ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿದೆ. ಜತೆಗೆ ಎರಡು ವರ್ಷದಲ್ಲಿ 13 ಲಕ್ಷ ಮೌಲ್ಯದ ಗೋವುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ಬೀದರ ಗಡಿ ಜಿಲ್ಲೆಯಾಗಿರುವ ಕಾರಣ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣಗಳು ಪತ್ತೆಯಾಗುತ್ತಿವೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮತ್ತು ಖರೀದಿ ನಿಯಂತ್ರಣಕ್ಕೆಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧಕ್ರಮ ಕೈಗೊಳ್ಳಲಾಗುತ್ತಿದೆ. ಜಪ್ತಿಯಾದ ಆಹಾರ ಧಾನ್ಯವನ್ನು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಕ್ಷರ ದಾಸೋಹಕ್ಕೆ ನೀಡಲಾಗುತ್ತಿದೆ.
ಬಾಬು ರೆಡ್ಡಿ, ಉಪ ನಿರ್ದೇಶಕರು,
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೀದರ
*ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ