ಅಕ್ರಮ ಬಿಪಿಎಲ್ ಕಾರ್ಡ್ದಾರರಿಗೆ ಶಾಕ್! ಬಡವರ “ಅನ್ನಭಾಗ್ಯ’ ಶ್ರೀಮಂತರ ಪಾಲು
3 ಹೆಕ್ಟೇರ್ಗೂ ಅಧಿಕ ಕೃಷಿ ಭೂಮಿ ಹೊಂದಿದ 2,850 ಕಾರ್ಡ್ಗಳು ಸೇರಿವೆ.
Team Udayavani, Sep 15, 2021, 5:03 PM IST
ಬೀದರ: ಆರ್ಥಿಕವಾಗಿ ಸದೃಢವಾಗಿದ್ದರೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಮಾಡಿಸಿಕೊಂಡು ಅನ್ನಭಾಗ್ಯ ಯೋಜನೆ ದುರ್ಲಾಭ ಪಡೆಯುತ್ತಿದ್ದವರಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ಬೀದರ ಜಿಲ್ಲೆಯಲ್ಲಿ 6,531 ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದ್ದು, ಅದರಲ್ಲಿ ಸರ್ಕಾರಿ ಶಾಲಾ ಶಿಕ್ಷಕರು, ತೆರಿಗೆ ಪಾವತಿದಾರರು ಇರುವುದು ವಿಶೇಷ.
ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಸಮಗ್ರ ತನಿಖೆಯನ್ನು ತೀವ್ರಗೊಳಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರನ್ವಯ ಇಲಾಖಾ ಅಧಿಕಾರಿಗಳು ನಡೆಸಿದ ಭೌತಿಕ ತನಿಖೆಯಿಂದ ಅನಧಿಕೃತ ವ್ಯಕ್ತಿಗಳು ಪಡಿತರ ಧಾನ್ಯ ಪಡೆಯಲು ಬಿಪಿಎಲ್/ ಅಂತ್ಯೋದಯ ಕಾರ್ಡ್ ಗಳನ್ನು ಹೊಂದಿರುವುದು ದೃಢಪಟ್ಟಿದೆ.
ಅಕ್ರಮವಾಗಿ ಹೊಂದಿದ್ದ ಪಡಿತರ ಕಾರ್ಡ್ಗಳನ್ನು ದಂಡ ರಹಿತ ವಾಪಸ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಆಹಾರ ಇಲಾಖೆಯೇ ಕಾರ್ಯಾಚರಣೆ ನಡೆಸಿದೆ. ಚೀಟಿದಾರರ ಆಧಾರ್, ಪ್ಯಾನ್, ಆದಾಯ ತೆರಿಗೆ ಸಲ್ಲಿಕೆ ಮತ್ತು ಎಚ್ಆರ್ ಎಂಎಸ್ ಸೇರಿ ಅಗತ್ಯ ದಾಖಲೆಗಳನ್ನು ಜಾಲಾಡಿದಾಗ ಬಡವರ ಪಾಲಿನ ಅನ್ಯಭಾಗ್ಯ ಉಳ್ಳವರ ಪಾಲಾಗುತ್ತಿರುವುದು ಬಹಿರಂಗವಾಗಿದೆ.
ಆಹಾರ ಇಲಾಖೆ ಕೇಂದ್ರ ಕಚೇರಿ ರಾಜ್ಯದ ಆಯಾ ಜಿಲ್ಲೆಗಳಲ್ಲಿರುವ ಅನರ್ಹ ಕಾರ್ಡ್ಗಳ ಪಟ್ಟಿ ರವಾನಿಸಿದೆ. ಅದರಂತೆ ಬೀದರ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಅಕ್ರಮ ಕಾರ್ಡ್ ಪತ್ತೆಯಾಗಿದ್ದು, ಪರಿಶೀಲನೆ ಇನ್ನೂ ಮುಂದುವರೆದಿದೆ. ಇದರಲ್ಲಿ ಈಗಾಗಲೇ 6,531 ಚೀಟಿಗಳನ್ನು ರದ್ದು/ ಪರಿವರ್ತನೆ ಮಾಡಲಾಗಿದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಸೇರಿ ಸರ್ಕಾರಿ ನೌಕರರು 333, ತೆರಿಗೆ ಪಾವತಿದಾರರು 1,456 ಮತ್ತು 1.20 ಲಕ್ಷಕ್ಕೂ ಅಧಿಕ ಕುಟುಂಬದ ಆದಾಯ ಹೊಂದಿದವರು ಮತ್ತು 3 ಹೆಕ್ಟೇರ್ಗೂ ಅಧಿಕ ಕೃಷಿ ಭೂಮಿ ಹೊಂದಿದ 2,850 ಕಾರ್ಡ್ಗಳು ಸೇರಿವೆ. ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಅಕ್ರಮ ಬಿಪಿಎಲ್, ಅಂತ್ಯೋದಯ ಕಾರ್ಡ್ ಇರುವ ಬಗ್ಗೆ ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನೂ ಅಹಾರ ಇಲಾಖೆ ಕಾರ್ಯಾಚರಣೆ ಹೊರತಾಗಿ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಸಹ ಪಡಿತರ ಚೀಟಿಯಲ್ಲಿನ ಅವ್ಯವಹಾರ ಪತ್ತೆ ಕ್ರಮ ವಹಿಸುತ್ತಿದೆ. ಬಿಪಿಎಲ್/ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬಗಳಲ್ಲಿ ಮೃತಪಟ್ಟಿರುವ 12,352 ಜನರ ಹೆಸರನ್ನು ತೆಗೆದು ಹಾಕಲಾಗಿದೆ. ಅನರ್ಹ ಪಡಿತರ ಚೀಟಿ ರದ್ದು ಪ್ರಕ್ರಿಯೆಯನ್ನು ಇನ್ನೂ ಮುಂದುವರೆದಿದ್ದು, ಮಾನದಂಡ ಉಲ್ಲಂಘಿಸಿ ಕಾರ್ಡ್ ಪಡೆದಲ್ಲಿ ಸ್ವಯಂ ಪ್ರೇರಿತರಾಗಿ ಹಿಂದುರುಗಿಸಬೇಕಿದೆ.
ಕಾರ್ಡ್ಗೆ ಮಾನದಂಡಗಳೇನು?
ವೇತನ ಗಣನೆಗೆ ತೆಗೆದುಕೊಳ್ಳದೆ ಎಲ್ಲ ಕಾಯಂ ನೌಕರರು (ಸರ್ಕಾರ, ಸರ್ಕಾರಿ ಸಂಸ್ಥೆ, ಸರ್ಕಾರಿ ಪ್ರಾಯೋಜಿತ ಸಂಸ್ಥೆ, ಮಂಡಳಿ-ನಿಗಮ, ಸ್ವಾಯತ್ತ ಸಂಸ್ಥೆ ಇತ್ಯಾದಿ) ಒಳಗೊಂಡಂತೆ, ಆದಾಯ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಜೀವನೋಪಾಯಕ್ಕಾಗಿ ಸ್ವಂತ ಒಂದು ವಾಣಿಜ್ಯ ವಾಹನ (ಟ್ರಾಕ್ಟರ್, ಮ್ಯಾಕ್ಟಿಕ್ಯಾಬ್, ಟ್ಯಾಕ್ಸಿ ಇತ್ಯಾದಿ) ಹೊಂದಿರುವ ಕುಟುಂಬ ಹಾಗೂ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತ ಹೆಚ್ಚಿರುವ ಕುಟುಂಬ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹಿಂದುರುಗಿಸಬೇಕು.
ಅನರ್ಹ ಬಿಪಿಎಲ್ ಕಾರ್ಡ್ಗಳು ಹೊಂದಿರುವವರಿಗೆ ಹಿಂತಿರುಗಿಸಲು ಗಡುವು ನೀಡಲಾಗಿತ್ತು. ಆದರೆ, ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಆಹಾರ ಇಲಾಖೆಯೇ 15 ಸಾವಿರಕ್ಕೂ ಹೆಚ್ಚು ಅಕ್ರಮ ಕಾರ್ಡ್ಗಳ ಪಟ್ಟಿ ನೀಡಿದ್ದು, ಅದರಲ್ಲಿ ಈಗಾಗಲೇ 6,531 ಚೀಟಿ ರದ್ದುಗೊಳಿಸಲಾಗಿದೆ. ಇನ್ನೂ ದಾಖಲೆಗಳ ಪರಿಶೀಲಿಸುವ ಪ್ರಕ್ರಿಯೆ ಮುಂದುವರೆದಿದ್ದು, ಮಾನದಂಡ ಉಲ್ಲಂಘಿಸಿ ಪಡೆದವರ ಕಾರ್ಡ್ ರದ್ದುಗೊಳ್ಳಲಿವೆ.
ಬಾಬುರೆಡ್ಡಿ, ಆಹಾರ ಇಲಾಖೆ, ಉಪ
ನಿರ್ದೇಶಕರು ಬೀದರ
*ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್