ವರದಿ ಜಾರಿಗೆ ಬೆಂಬಲ ನೀಡದ ಶಾಸಕರಿಗೆ ಪಾಠ
Team Udayavani, Oct 7, 2020, 4:29 PM IST
ಹುಮನಾಬಾದ: ಸದಾಶಿವ ವರದಿಗೆ ಬೆಂಬಲ ನೀಡದ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ. ಅಲ್ಲದೇ ಸಮುದಾಯದ ಮತಗಳು ಅವರ ವಿರುದ್ಧ ಚಲಾವಣೆ ಮಾಡುವುದಾಗಿ ನ್ಯಾ| ಎ.ಜೆ. ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಎದುರಿನ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ವರದಿ ವಿಧಾನಸಭೆಯಲ್ಲಿ ಚರ್ಚೆಗೆ ತರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪಭರವಸೆ ನೀಡಿದ್ದಾರೆ. ಚರ್ಚೆ ಸಂದರ್ಭದಲ್ಲಿ ಯಾವ ಶಾಸಕರು ಸದಾಶಿವ ವರದಿ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಾರೋ ಅವರ ವಿರುದ್ಧ ಮುಂದಿನ ದಿನಗಳಲ್ಲಿ ನಾವು ಹಕ್ಕು ಚಲಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ನೀಡಿರುವುದಾಗಿ ಮಾತನಾಡುತ್ತಾರೆ. ಆದರೆ ಸದಾಶಿವ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಸದ್ಯ ಮುಖ್ಯಮಂತ್ರಿ, ಸಂಘ ಪರಿವಾರ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಬೆಂಬಲ ನೀಡುತ್ತಿದ್ದು, ಮುಂದಿನ ಕೆಲದಿನಗಳಲ್ಲಿ ಸಮುದಾಯಕ್ಕೆ ನ್ಯಾಯ ದೊರೆಯುವ ಭರವಸೆ ಇದೇ ಎಂದು ಹೇಳಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಅಶೋಕ ಕಟ್ಟಿ, ಪ್ರಭು ತಾಳಮಡಗಿ, ತುಕಾರಾಮ ಬೇಳಕೇರಾ, ಅಪ್ಪು ಕಟ್ಟಿಮನಿ, ಸುಮಂತ ಕಟ್ಟಿ, ರಾಮಚಂದ್ರ ಕಾಂಬಳೆ, ಶೀರೋಮಣಿ, ನರಸಿಂಗ ಓತಗಿ, ಶೀವಶರಣಪ್ಪ, ದತ್ತು ಇದ್ದರು.