ಶಿಕ್ಷಣದಿಂದ ಯಶಸ್ಸು: ಚಂದ್ರಕಾಂತ
Team Udayavani, Nov 19, 2021, 3:37 PM IST
ಗುರುಮಠಕಲ್: ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಗುರಿ ಹೊಂದಿರಬೇಕು ಎಂದು ಡಿಡಿಪಿಯು ಚಂದ್ರಕಾಂತ ಜೆ. ಹೇಳಿದರು.
ಪಟ್ಟಣದ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ನಡೆದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಕಾರಣ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಕುಂಠಿತಗೊಂಡಿತ್ತು. ಶೈಕ್ಷಣಿಕ ವಾರ್ಷಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. ಸಮಯಕ್ಕೆ ತಕ್ಕಂತೆ ತ್ವರಿತವಾಗಿ ಹೊಂದಾಣಿಕೆಯಾಗಿ ಗುಣಮಟ್ಟ ಶಿಕ್ಷಣ ಪಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಳೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಜಾರಿನಾ ಅವರನ್ನು ಗೌರವಿಸಲಾಯಿತು. ಉಪನ್ಯಾಸಕ ನರೇಂದ್ರ ರಚಿಸಿದ ಇಂಗ್ಲಿಷ್ ಭಾಷೆ ಕಲಿಯಿರಿ ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕ ವೆಂಕಟರೆಡ್ಡಿ ಮಿನಾಸಪುರ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಅಖಂಡೇಶ್ವರ ಹಿರೇಮಠ ವಿಶೇಷ ಉಪನ್ಯಾಸ ನೀಡಿದರು. ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಮಲ್ಲಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ ನಿರೇಟಿ, ಕಾಲೇಜಿನ ಎಸ್ಡಿಎಂಸಿ ಪದಾಧಿಕಾರಿಗಳಾದ ನರಸರೆಡ್ಡಿ ಗಡ್ಡೆಸೂಗೂರ್, ಲಕ್ಷ್ಮೀ ನಾರಾಯಣ ಪಂಚಾಲ್, ಕೊಂಕಲ್ ಪಿಯು ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಹೊಸಮನಿ, ಉರ್ದು ಸರಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಗುರು ಹಣಮಂತು ಜಿ. ಇದ್ದರು.