ಯುವಕರಿಂದಲೇ ದೇಶದ ಪರಿವರ್ತನೆ: ಪಾಟೀಲ
Team Udayavani, Jan 27, 2018, 12:31 PM IST
ಭಾಲ್ಕಿ: ಅತಿ ಹೆಚ್ಚು ಯುವಶಕ್ತಿ ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಯುವಕರಿಂದಲೇ ದೇಶದ ಪರಿವರ್ತನೆ ಸಾಧ್ಯ. ಹೀಗಾಗಿ ನಮ್ಮ ಯುವಕರು ದುಶ್ಚಟಗಳಿಗೆ ಬಲಿಯಾಗದೇ ದೇಶಕಟ್ಟುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಗಣತಂತ್ರ ವ್ಯವಸ್ಥೆಯು ವಿಶ್ವಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಇಂತಹ ವ್ಯವಸ್ಥೆಯಲ್ಲಿ ಪ್ರಜೆಗಳಿಗಾಗಿ ಸರ್ಕಾರ ರೂಪಿಸುವ ಯೋಜನೆಗಳ ಸದುಪಯೋಗ ವಾಗಬೇಕು ಎಂದು ಹೇಳಿದರು.
ಉಪನ್ಯಾಸಕ ಪ್ರೊ| ಶಂಭುಲಿಂಗ ಕಾಮಣ್ಣ ವಿಶೇಷ ಉಪನ್ಯಾಸ ನೀಡಿ, ಗಣತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ನಮಗೆ ಇಂತಹ ಸಂವಿಧಾನ ಕೊಟ್ಟ ಡಾ| ಬಿ.ಆರ್. ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಕರು ಅವರ ತತ್ವಗಳನ್ನು ತಿಳಿದುಕೊಂಡಲ್ಲಿ ಬಡತನ ಎನ್ನುವುದೇ ಇರುವುದಿಲ್ಲ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಶ್ರೀ ಮಹಾಲಿಂಗ ಸ್ವಾಮಿಗಳು ಮಾತನಾಡಿ, ಭಾರತ ದೇಶವನ್ನು ಒಪ್ಪಿಕೊಳ್ಳುವಂತಹ ಗ್ರಂಥ ಅದ್ಯಾವುದಾದರೂ ಇದ್ದರೆ, ಅದು ಭಾರತೀಯ ಸಂವಿಧಾನ ಮಾತ್ರ. ಜಾತಿ, ಧರ್ಮಗಳನ್ನು ಮೀರಿ ನಿಂತ ಗ್ರಂಥ ಭಾರತೀಯ ಸಂವಿಧಾನವಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪ್ರಭಾತ ಫೇರಿಯಲ್ಲಿ ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳ
ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ತಹಶೀಲ್ದಾರ ಕಚೇರಿಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ ಮನೋಹರ ಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪುರಸಭೆ ಅಧ್ಯಕ್ಷ ವಿಶಾಲ ವಿಶ್ವಂಬರಪುರಿ ಅಧ್ಯಕ್ಷತೆ ವಹಿಸಿದ್ದರು. ಸೋಮನಾಥಪ್ಪ ಅಸ್ಟೂರೆ, ಮಾಣಿಕಪ್ಪ ರೇಷ್ಮೆ, ತಾಪಂ ಸಹಾಯಕ ನಿರ್ದೇಶಕಿ ಶಿವಲೀಲಾ ರೆವಣಪ್ಪ, ಪುರಸಭೆ ಸದಸ್ಯ ಶಿವಶರಣಪ್ಪ ಛತ್ರೆ, ಜೈಹಿಂದ ಕುಲಾಲ, ಗೋವಿಂದರಾವ್ ಪಾಟೀಲ, ಪ್ರಕಾಶ ಭಾವಿಕಟ್ಟೆ, ಮಾರುತಿರಾವ್ ಮಗರ, ಉಪತಹಶೀಲ್ದಾರ ರಮೇಶ ಪೆದ್ದೆ, ಪುರಸಭೆ ಉಪಾಧ್ಯಕ್ಷೆ ಅನಿತಾ ಪಾಂಡುರಂಗ, ಕ್ಷೇತ್ರಶಿಕ್ಷಣಾಧಿಕಾರಿ ಶಿವಗೊಂಡಪ್ಪ ಎಚ್. ಎಸ್., ವಿಲಾಸ ಪಾಟೀಲ ದಾಡಗಿ ಇದ್ದರು.
ತಹಶೀಲ್ದಾರ ಮನೋಹರ ಸ್ವಾಮಿ ಸ್ವಾಗತಿಸಿದರು. ಗಣಪತಿ ಕಲ್ಲೂರೆ ನಿರೂಪಿಸಿದರು. ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ವಂದಿಸಿದರು.