ಕೆರೆ ನೀರು ಬಳಕೆದಾರರ ಸಂಘ ರಚಿಸಲು ಜಿಲಾಧಿಕಾರಿ ಗಡುವು
ಕೆರೆಗಳ ಒತ್ತುವರಿಯಾಗಿರುವುದು ಕಂಡು ಬಂದರೆ ಕೂಡಲೇ ಅದನ್ನು ತಡೆಯಲು ಗಮನ ಹರಿಸಬೇಕು
Team Udayavani, Feb 19, 2021, 6:25 PM IST
ಬೀದರ: ಜಿಲ್ಲೆಯ ವಿವಿಧೆಡೆಗಳಲ್ಲಿ ಬಾಕಿ ಇರುವ ಏಳು ಕೆರೆಗಳ ನೀರು ಬಳಕೆದಾರರ ಸಂಘಗಳನ್ನು ವಾರದೊಳಗೆ ರಚಿಸಿ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಕೆರೆ ಸಂರಕ್ಷಣೆ-ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮಚಂದ್ರನ್ ಆರ್. ಹೇಳಿದರು.
ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶದಂತೆ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ನಡೆದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಕಡೆಗಳಲ್ಲಿ ಕೆರೆಗಳ ಒತ್ತುವರಿಯಾಗಿರುವುದು ಕಂಡು ಬಂದರೆ ಕೂಡಲೇ ಅದನ್ನು ತಡೆಯಲು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ
ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಡಿಸಿ, ಆಯಾ ಇಲಾಖೆಗಳ ಅಧಿಕಾರಿಗಳು ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಸಭೆ ನಡೆಸಿ ಕೆರೆಗಳ ಸಂರಕ್ಷಣೆ ಬಗ್ಗೆ
ಚರ್ಚಿಸಬೇಕು. ತಮ್ಮ-ತಮ್ಮ ಸುಪರ್ದಿಯಲ್ಲಿ ಬರುವ ಕೆರೆಗಳ ಸುರಕ್ಷತೆ ಬಗ್ಗೆ ಆಯಾ ಇಲಾಖೆಗಳ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕೆರೆಗಳ ಮಾಲೀಕತ್ವವನ್ನು ಆರ್ಟಿಸಿಯಲ್ಲಿ ಸೇರಿಸುವುದು ಸೇರಿದಂತೆ ಕೆರೆಗಳ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಕೆಲಸ, ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್, ತಹಶೀಲ್ದಾರ್ ಸಿ.ಎಚ್. ಗಂಗಾದೇವಿ, ಸಣ್ಣ ನೀರಾವರಿ ವಿಭಾಗದ ಇಇ ಸುರೇಶ ಮೇದಾ, ಪಿಆರ್ಇ ವಿಭಾಗದ ಇಇ ಬಾಬು ಪವಾರ, ಖುರೇಶಿ, ತಾಂತ್ರಿಕ ಸಹಾಯಕ ವಿವೇಕಾನಂದ, ಭೂದಾಖಲೆ ಇಲಾಖೆಯ ಅಧಿ ಕಾರಿ ರವಿಕುಮಾರ ಆರ್., ಕೃಷಿ ಇಲಾಖೆ, ಪುರಸಭೆ, ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಇದ್ದರು.