ರಾಜಕೀಯ ಪಕ್ಷಗಳ ಚಟುವಟಿಕೆ ಚುರುಕು
Team Udayavani, Aug 4, 2018, 11:42 AM IST
ಹುಮನಾಬಾದ: ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜ್ಯದ 3ನೇ ಗ್ರಾಮ ಪಂಚಾಯಿತಿ ಎನ್ನುವ ಖ್ಯಾತಿ ಹೊಂದಿರುವ ತಾಲೂಕಿನ ಹಳ್ಳಿಖೇಡ(ಬಿ)ಅನ್ನು ರಾಜ್ಯ ಸರ್ಕಾರ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದ್ದು, ಹೊಸ ಪುರಸಭೆಗೆ ಆ.29ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಚಟುವಟಿಕೆ ಚುರುಗೊಂಡಿವೆ.
ಮೇಲ್ದರ್ಜೆಗಾಗಿ ಹೋರಾಟ: 2011ರ ಜನಗಣತಿ ಪ್ರಕಾರ ಹಳ್ಳಿಖೇಡ(ಬಿ) 20,163 ಜನಸಂಖ್ಯೆ ಹೊಂದಿತ್ತು. ಜನಸಂಖ್ಯೆ ಆಧರಿಸಿ, 2015-16ನೇ ಸಾಲಿನಲ್ಲಿ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥ ನೇತೃತ್ವದಲ್ಲಿ ಗ್ರಾಮಸ್ತರು ಗ್ರಾಮ ಪಂಚಾಯಿತಿಗೆ ಪಟ್ಟಣದ ಮಾನ್ಯತೆ ನೀಡಿ, ಮೇಲ್ದರ್ಜೆಗೇರಿಸುವಂತೆ ಶಾಸಕ ರಾಜಶೇಖರ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರು.
ವಿಷಯವನ್ನು ಗಂಭೀರವಾಗಿ ಪರಗಣಿಸಿದರೂ ಗ್ರಾಮ ಪಂಚಾಯಿತಿಯಿಂದ ಅಗತ್ಯ ದಾಖಲೆ ಸಕಾಲಕ್ಕೆ ಸಲ್ಲಿಕೆಯಾಗದ ಕಾರಣ ಸರ್ಕಾರ ಘೋಷಣೆ ಮಾಡಲಿಲ್ಲ. ತದನಂತರ ಸಲ್ಲಿಸದ ದಾಖಲೆ ಪರಿಶೀಲಿಸಿದ ಸರ್ಕಾರ ಹಳ್ಳಿಖೇಡ(ಬಿ)ಗೆ ಪುರಸಭೆ ಮಾನ್ಯತೆ ನೀಡಿ ಅಧಿಕೃತ ಘೋಷಣೆ ಮಾಡಿತು.
ಎಸಿ ಆಡಳಿತಾಧಿಕಾರಿ: ಗ್ರಾಮ ಪಂಚಾಯಿತಿಗೆ ಆಗಷ್ಟೇ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಹೊಸದಾಗಿ ಆಯ್ಕೆಗೊಂಡಿದ್ದ
ಕೆಲವು ಸದಸ್ಯರು ತಕ್ಷಣ ಚುನಾವಣೆ ನಡೆಸುವುದನ್ನು ವಿರೋಧಿಸಿದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೇ 6ತಿಂಗಳ ಅವಧಿಗಾಗಿ ಪುರಸಭೆ ಹಂಗಾಮಿ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು. ಹೊಸ ಅಧ್ಯಕ್ಷರಿಗೆ ನೀಡಿದ್ದ 6ತಿಂಗಳ ಅವಧಿ ಹಿಂದೆ ಪೂರ್ಣಗೊಂಡ ಹಿನ್ನೆಲೆಯಲ್ಲಿ 6ತಿಂಗಳಿಂದ ಉಪವಿಭಾಗಾಧಿಕಾರಿಗಳೇ ಪುರಸಭೆ ಆಡಳಿತಾಧಿಕಾರಿಯಾಗಿದ್ದರು.
ಆಗಸ್ಟ್ನಲ್ಲೇ ಚುನಾವಣೆ: ಕರ್ನಾಟಕ ಸರ್ಕಾರ ರಾಜ್ಯ ಪತ್ರದ ಆದೇಶದನ್ವಯ ಹಳ್ಳಿಖೇಡ(ಬಿ) ಪುರಸಭೆಯ 23ವಾರ್ಡ್ಗಳಿಗೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳು ಆ.10ರಂದು ಅಧಿಕೃತ ಆದೇಶ ಹೊರಡಿಸುವರು. ಆ.17 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನಾಮಪತ್ರ ಹಿಂದಕ್ಕೆ ಪಡೆಯಲು ಆ.20 ಕಡೆದಿನ.
ಆ.29ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯುವುದು. ಅಗತ್ಯಬಿದ್ದರೇ ಆ.31ಕ್ಕೆ ಮರು ಮತದಾನ
ನಡೆಸಲು ಸೂಚಿಸಿದೆ. ಸೆ.1ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು
ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
ರಾಜಕೀಯ ಚಟುವಟಿಕೆ ಚುರುಕು: ಚುನಾವಣೆ ಘೋಷಣೆ ಬೆನ್ನಲ್ಲೆ ವಿವಿಧ ರಾಜಕೀಯ ಪಕ್ಷಗಳ ಚಟುವಟಿಕೆ ಇಂದಿನಿಂದ
ಚುರುಕುಗೊಂಡಿವೆ. ಸದ್ಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಿಜೆಪಿ, ಈ ಬಾರಿ ಚುನಾವಣೆ ಸ್ಪರ್ಧೆಗಾಗಿ ನಮ್ಮ ಪಕ್ಷದಿಂದ ಪ್ರತೀ ವಾರ್ಡ್ಗಳಲ್ಲಿ ಕನಿಷ್ಟ 3ರಿಂದ 5ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದು ಹೇಳುತ್ತಿದೆ.
ಕ್ಷೇತ್ರದಲ್ಲಿ ನಮ್ಮ ಪಕ್ಷದವರೇ ಶಾಸಕರು ಮಾತ್ರವಲ್ಲ ಸದ್ಯ ಸಚಿವರು ಆಗಿದ್ದಾರೆ. ಮೂರು ಅವಧಿಯಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡ ನಮ್ಮಲ್ಲಿ ಪ್ರತೀ ವಾರ್ಡ್ನಲ್ಲಿ 4ರಿಂದ 8ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎನ್ನುವುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲ ಕಡೆ 2ನೇ ಸ್ಥಾನದಲ್ಲಿರುವ ಕಾರಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಸ್ಥಿತ್ವ ಸರಿ ಇರುವ ಕಾರಣ ನಮ್ಮಲ್ಲೂ ಟಿಕೆಟ್ಗಾಗಿ ಭಾರೀ ಪೈಪೋಟಿ ಇದೆ ಎನ್ನುವುದು ಜೆಡಿಎಸ್ ಮುಖಂಡರ ಅನಿಸಿಕೆ
ಕ್ಷೇತ್ರದಲ್ಲಿ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಎಲ್ಲ 23 ಸ್ಥಾನಗಳಿಂದ ಅಭ್ಯರ್ಥಿಗಳನ್ನು
ಕಣಕ್ಕಿಳಿಸುವುದು ಮಾತ್ರ ಅಲ್ಲ. ಅಧಿಕಾರ ಗದ್ದುಗೆಯನ್ನೂ ನಾವೇ ಹಿಡಿಯುತ್ತೇವೆ.
ಅಪ್ಸರಮಿಯ್ಯ ಹುಮನಾಬಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕ್ಷೇತ್ರದಲ್ಲಿ ಒಂದು ಜಿಲ್ಲಾ ಪಂಚಾಯಿತಿ, ಎರಡು ತಾಲೂಕು ಪಂಚಾಯಿತಿ ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಎಲ್ಲ 23 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಿಕ್ಕಿಸುತ್ತೇವೆ. ಅಲ್ಲದೇ ಅಧಿಕಾರ ಗದ್ದುಗೆ ಹಿಡಿಯುವುದು ಕೂಡ ನಾವೆ.
ವಿಶ್ವನಾಥ ಪಾಟೀಲ ಮಾಡ್ಗುಳ್, ಬಿಜೆಪಿ ತಾಲ್ಲೂಕು ಅಧ್ಯಕ್ಷರು
ಹಳ್ಳಿಖೇಡ(ಬಿ) ಕ್ಷೇತ್ರದಲ್ಲಿ ಜೆಡಿಎಸ್ ಯಾವತ್ತೂ ಪ್ರಬಲವಾಗಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ
ಸರ್ಕಾರ ಅಸ್ತಿತ್ವದಲ್ಲಿದೆ. ರೈತರ ಸಾಲಮನ್ನಾ ಮೊದಲಾದ ಜನಪರ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ನಾವು
23 ಸ್ಥಾನಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಅಧಿಕಾರ ಗದ್ದುಗೆ ಹಿಡಿಯಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ.
ಮಹೇಶ ಅಗಡಿ, ಅಧ್ಯಕ್ಷರು, ತಾಲ್ಲೂಕು ಜೆಡಿಎಸ್
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್