ಜಿಲ್ಲೆಯಲ್ಲಿ ಪ್ರತಿಭೆಗಿಲ್ಲ ಕೊರತೆ
Team Udayavani, Oct 1, 2019, 3:26 PM IST
ಬೀದರ: ಬೀದರ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ, ಕಲಾವಿದರಿಗೆ ಸೂಕ್ತವಾದ ಪ್ರೋತ್ಸಾಹ ಹಾಗೂ ವೇದಿಕೆ ಸಿಗುತ್ತಿಲ್ಲ ಎಂದು ಪತ್ರಕರ್ತ ಸದಾನಂದ ಜೋಶಿ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗು ಸಂಸ್ಥೆ ಬೀದರ ಜಿಲ್ಲೆಯ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಒದಗಿಸಿಕೊಡುವ ಜತೆ ಜತೆಯಲ್ಲೇ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಹೊಸ ಗಾಯಕರು, ಕಲಾವಿದರನ್ನು ಪರಿಚಯಿಸಿ ವೇದಿಕೆ ಒದಗಿಸುವ ಮಹತ್ವದ ಕೆಲಸ ಮಾಡುತ್ತಿದೆ. ವಿವಿಧ ವೃತ್ತಿಯಲ್ಲಿ ತೊಡಗಿದವರಿಗೆ ಸಂಗೀತದತ್ತ ಸೆಳೆದು ಹಾಡಲು ಪ್ರೇರಣೆ ನೀಡುತ್ತಿದೆ. ಮೇಲಿಂದ ಮೇಲೆ ರಸಮಂಜರಿ ಆಯೋಜಿಸಿ ಜನತೆಗೆ ಸಂಗೀತದ ರಸದೌತಣವನ್ನೇ ಉಣಬಡಿಸುತ್ತಿದೆ ಎಂದು ಬಣ್ಣಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗು ಟ್ರಸ್ಟ್ ಅಧ್ಯಕ ಅನೀಲಕುಮಾರ ದೇಶಮುಖ, ಟ್ರಸ್ಟ್ನಿಂದ ನಿರಂತರ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ. ಅನೇಕ ಕಲಾವಿದರಿಗೆ ವೇದಿಕೆ ಒದಗಿಸಲಾಗುತ್ತಿದೆ.
ಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಸಂಗೀತ ಕಚೇರಿ ಇಲ್ಲಿ ನಡೆಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ ಎಂದು ಹೇಳಿದರು. ಬೆಳಗು ಸಂಸ್ಥೆ ಮುಖ್ಯಸ್ಥ ಹಾಗೂ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ| ವಿ.ವಿ. ನಾಗರಾಜ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ ಅಧ್ಯಕ್ಷ ರವಿ ಮೂಲಗೆ, ಟ್ರಸ್ಟ್ ಉಪಾಧ್ಯಕ್ಷೆ ಮಂಜುಳಾ ರವಿ ಮೂಲಗೆ, ಕಲಾವಿದರಾದ ಗುರುದೇವ, ಆಬೇದ್ ಅಲಿ ಖಾನ್, ಅರುಣ ಕರ್ನಾಡ, ಮಲ್ಲಿಕಾರ್ಜುನ ಶೀಲವಂತ, ಡಾ| ನಾಗರಾಜ, ರವಿ ಮೂಲಗೆ, ನಾಗಶೆಟ್ಟಿ ಲಕೋಟಿ, ಮಹೇಶ್ವರಿ ಪಾಂಚಾಳ, ಪ್ರಿಯಾಂಕಾ ಗುರುದೇವ ಸಂಗೀತ ರಸಮಂಜರಿ ನಡೆಸಿಕೊಟ್ಟರು.