ವೀರಭದ್ರೇಶ್ವರ ನೆಲೆನಿಂತ ಕ್ಷೇತ್ರ ಮತ ಕಾಳಗ
Team Udayavani, Apr 3, 2018, 12:12 PM IST
ಹುಮನಾಬಾದ: ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಹುಮನಾಬಾದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕ್ಷೇತ್ರ. ವೀರಶೈವ- ಲಿಂಗಾಯತ ಕುಟುಂಬಗಳ ಮನೆ ದೇವರು ಶ್ರೀ ವೀರಭದ್ರೇಶ್ವರ ನೆಲೆನಿಂತ ಪುಣ್ಯ ಕ್ಷೇತ್ರ ಹಾಗೂ ಸಕಲಮತ ಸಂಪ್ರದಾಯ ಸಮಾಜಕ್ಕೆ ಸಾರಿದ ಮಾಣಿಕನಗರದ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿ ಇರುವ ದೇವಸ್ಥಾನದಿಂದ ಹುಮನಾಬಾದ ಪ್ರಖ್ಯಾತಿ ಹೊಂದಿದೆ. ಸದ್ಯ ರಾಜಶೇಖರ ಪಾಟೀಲ ಈ ಕ್ಷೇತ್ರದ ಶಾಸಕರಾಗಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಕೂಡ ಹೌದು. ಒಟ್ಟು 83 ಗ್ರಾಮ ಮತ್ತು 5 ತಾಂಡಾಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 2.33 ಲಕ್ಷ ಮತದಾರರಿದ್ದಾರೆ.
ಮೂರು ಪುರಸಭೆಗಳನ್ನು ಹೊಂದಿದ ಕೀರ್ತಿ ಈ ಕ್ಷೇತ್ರಕ್ಕಿದೆ. ಮೂರು ಪಟ್ಟಣಗಳಿಗೆ ಕುಡಿಯುವ ನೀರಿನ ಮೂಲಕ್ಕೆ ಕಾರಂಜಾ ಜಲಾಶಯವೇ ಆಸರೆಯಾಗಿದೆ. ಕ್ಷೇತ್ರದ ಮುಲ್ಲಾಮಾರಿ ನಿಗದಿತ ಕಾಲುವೆಗಳ ಮೂಲಕ ಕಲಬುರಗಿ ಜಿಲ್ಲೆ ಸ್ವಂತ ಗ್ರಾಮದವರೆಗೂ ಹರಿದು ಹೋಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿದರೂ ಉದ್ದೇಶ ಮಾತ್ರ ಈವರೆಗೂ ಈಡೇರಿಲ್ಲ.
1952ರಿಂದ 2013ರವರೆಗೆ ನಡೆದ 15 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಜಯಗಳಿಸಿದೆ. 1978ರಿಂದ ಚುನಾವಣೆ ಸ್ಪರ್ಧೆ ನಡೆಸಿದ ಮಾಜಿ ಸಚಿವ ದಿ| ಬಸವರಾಜ ಪಾಟೀಲ ಎರಡು ಬಾರಿ ರಾಜ್ಯ ಸಚಿವರಾಗಿ, 4 ಬಾರಿ ಶಾಸಕರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕ್ಷೇತ್ರದಲ್ಲಿ ಪ್ರಬಲ ಹಿಡಿತ ಸಾಧಿಸಿದ್ದರು. ಕಾಂಗ್ರೆಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡ ಈ ಕ್ಷೇತ್ರದಲ್ಲಿ 1994ರ ಚುನಾವಣೆಯಲ್ಲಿ ಹೊಸ ಮುಖ ಜನರ ಮುಂದೆ ಬಂದಿದ್ದು ಜನತಾದಳದಿಂದ ದಿ| ಮಿರಾಜೋದ್ದಿನ್ ಪಟೇಲ್.
1999 ಚುನಾವಣೆಯಲ್ಲಿ ಮೊದಲ ಬಾರಿಗೆ ಬಸವರಾಜ ಪಾಟೀಲ ಪುತ್ರ ರಾಜಶೇಖರ ಪಾಟೀಲ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲನುಭವಿಸಿದರು. ಅಂದು ಗೆಲುವು ಕಂಡ ಬಿಜೆಪಿಯ ಸುಭಾಷ ಕಲ್ಲೂರ, ಲಾಭದಾಯಕ ಹುದ್ದೆ ಹಿನ್ನೆಲ್ಲೆಯಲ್ಲಿ 2003ರಲ್ಲಿ ಶಾಸಕ ಸ್ಥಾನ ಕಳೆದುಕೊಂಡರು. ಮರು ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ನಡೆಸಿದ ರಾಜಶೇಖರ ಪಾಟೀಲ ಜಯಗಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡರು. ನಂತರ ನಡೆದ 2004ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿ ಮಿರಾಜೋದ್ದಿನ್ ಪಟೇಲ್ ಜಯ ಗಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಿರಾಜೋದ್ದಿನ್ ಪಟೇಲ ಆಯ್ಕೆಗೊಂಡರು. 2008ರ ಚುನಾವಣೆಯಲ್ಲಿ ಗೆದ್ದ ರಾಜಶೇಖರ ಪಾಟೀಲ, 2013ರ ಚುನಾವಣೆಯಲ್ಲಿ ಕೂಡ ಅತಿ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿ ಕ್ಷೇತ್ರದ ಮೇಲೆ ತಂದೆಯಂತೆ ಹಿಡಿತ ಸಾಧಿ ಸಿದ್ದಾರೆ. ತಾಲೂಕಿನ ಹೆಚ್ಚು ರೈತರು ಕಬ್ಬು ಬೆಳೆಯುತ್ತಿದ್ದು, ಈ ವರ್ಷ ಬಿಎಸ್ಎಸ್ಕೆ ಕಾರ್ಖಾನೆ ಆರ್ಥಿಕ ದುಸ್ಥಿತಿ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿದೆ. ಅಲ್ಲದೇ ಕಾರ್ಖಾನೆಯ ಎಲ್ಲಾ ಸಿಬ್ಬಂದಿಯನ್ನು ಕೂಡ ಸೇವೆಯಿದ ಬಿಡುಗಡೆ ಮಾಡಲಾಗಿದೆ.
ಇದರಿಂದ ಕಬ್ಬು ಬೆಳೆಸುವ ರೈತರಿಗೆ ನುಂಗಲಾರದ ತುತ್ತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜಿಲ್ಲೆಯಲ್ಲಿ ಮೂರು ಜನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಇದ್ದರೂ ಕೂಡ ಕಾರ್ಖಾನೆಯ ಸ್ಥಿತಿಗತಿ ಸರಿಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಡಳಿತದ ವಿರುದ್ಧ ರೈತರ ಆಕ್ರೋಶವಿದೆ.
ನೆರೆ ರಾಜ್ಯ ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ನೇರವಾಗಿ ಬಸ್ ಸೌಕರ್ಯ ಇಲ್ಲಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ. ಹುಮನಾಬಾದ, ಚಿಟಗುಪ್ಪ ಮತ್ತು ಹಳ್ಳಿಖೇಡ(ಬಿ) ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ 12 ಗ್ರಾಮಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿ¨
ಕ್ಷೇತ್ರದ ಬೆಸ್ಟ್ ಏನು?
ರಾಜ್ಯದಲ್ಲಿಯೇ ಮಾದರಿ ತಾಂಡಾ ನಿರ್ಮಾಣ ಹಿನ್ನೆಲೆಯಲ್ಲಿ ಸುಮಾರು ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ಟ್ರೈಬಲ್ ಪಾರ್ಕ್ ನಿರ್ಮಾಣ ಕಾರ್ಯ ಕಠಳ್ಳಿ ಸಮೀಪದಲ್ಲಿ ನಡೆಯುತ್ತಿದೆ. ಹುಮನಾಬಾದ ಹಾಗೂ ಚಿಟಗುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಎಸ್ಸಿಪಿ- ಟಿಎಸ್ಪಿ, 14ನೇ ಹಣಕಾಸು ಯೋಜನೆ ಹಾಗೂ ನಗರೋತ್ಥಾನ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಚಿಟಗುಪ್ಪ ಪಟ್ಟಣದಲ್ಲಿ ಅಲೆಮಾರಿ ಅರೆ ಅಲೆಮಾರಿ ಜನಾಗಂದ ಬಡವಾಣೆ ನಿರ್ಮಾಣ, ಚಿಟಗುಪ್ಪ ಬಸ್ ನಿಲ್ದಾಣ, 10 ಕೋಟಿ ವೆಚ್ಚದಲ್ಲಿ ಬಿಸಿಎಂ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ, ಶಾಸಕರ ಭವನ ಸೇರಿದಂತೆ ಇತೆರ ಅಭಿವೃದ್ಧಿ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆದಿವೆ
ಕ್ಷೇತ್ರದ ದೊಡ್ಡ ಸಮಸ್ಯೆ?
ಕಳೆದ ನಾಲ್ಕು ವರ್ಷಗಳ ಹಿಂದೆ ಪಟ್ಟಣದಲ್ಲಿ ಆರಂಭಗೊಂಡ ಒಳಚರಂಡಿ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಸಿಸಿ ರಸ್ತೆಗಳು ದುರಸ್ತಿ ಕಂಡಿಲ್ಲ. ಮಳೆಗಾಲದಲ್ಲಿ ಡಾಕುಳಗಿ ಗ್ರಾಮಸ್ಥರು ಕಾರಂಜಾ ಹಿನ್ನೀರಿನಿಂದ ಸಮಸ್ಯೆ ಎದುರಿಸುತ್ತಿದ್ದು, ಊರು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಇಂದಿಗೂ ನನೆಗುದ್ದಿಗೆ ಬಿದ್ದಿದೆ. ಯುವಕರಿಗಾಗಿ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳು ಕಳೆದಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ಪಟ್ಟಣದಲ್ಲಿ ಮಾದರಿ ಉದ್ಯಾನ ವನ ನಿರ್ಮಾಣದ ಕಾರ್ಯ ಪ್ರಾರಂಭಗೊಂಡಿಲ್ಲ. ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಯಾವ ದೊಡ್ಡ ಕೈಗಾರಿಕಾ ಕಾರ್ಖಾನೆ
ಸ್ಥಾಪನೆಗೊಂಡಿಲ್ಲ
ಶಾಸಕರು ಏನಂತಾರೆ?
ಜನರ ನೀರಿಕ್ಷೆಯಂತೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಚಿಟಗುಪ್ಪ ತಾಲೂಕು ಕೇಂದ್ರ, ಹಳ್ಳಿಖೇಡ(ಬಿ) ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ಆ ಭಾಗದ ಜನರಲ್ಲಿ ಸಂಸತವಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, 13 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಹಳೇ ಹುಲಸೂರ ಭಾಗದ ಗ್ರಾಮಗಳಿಗೆ ಇಂದು ಎಲ್ಲಾ ಸೌಕರ್ಯಗಳು ದೊರೆತಿವೆ. ಡಾಕುಳಗಿ ಗ್ರಾಮ ಸ್ಥಳಾಂತರಕ್ಕೆ ಸರ್ಕಾರ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದು, ಅಧಿಕಾರಿಗಳು ಮುಂದಿನ ಕೆಲಸ ಮಾಡಬೇಕಿದೆ. ನನ್ನ ಅಧಿಕಾರ ಅವಧಿಯ ಆಡಳಿತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಎಲ್ಲಾ ಕಾರ್ಯಗಳಿಗೂ ಜನರು ಸಹಕಾರ ನೀಡಿದ್ದು ಹಾಗೂ ಶಾಸಕನಾಗಿ ಕೆಲಸ ಮಾಡಿದ ತೃಪ್ತಿ ನನಗೂ ಇದೆ.
ರಾಜಶೇಖರ ಪಾಟೀಲ, ಶಾಸಕ
ಕ್ಷೇತ್ರ ಮಹಿಮೆ
ಹುಮನಾಬಾದ ಪಟ್ಟಣದಲ್ಲಿ ಪುರಾತನ ಕಾಲದ ವೀರಭದ್ರೇಶ್ವರ ದೇವಸ್ಥಾನ ಇದೆ. ಪ್ರತಿವರ್ಷ ಲಕ್ಷಾಂತರ ಜನ ದೇವರ ದರ್ಶಕ್ಕೆ ಬರುತ್ತಾರೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ನಡೆಯುವ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳುತ್ತಾರೆ. ಭಕ್ತಾದಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ನೀಲ ನಕ್ಷೆ ತಯಾರಿಸಲಾಗಿದೆ. ಮಾಣಿಕ ನಗರದ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿ ಮಂದಿರವಿದ್ದು, ಸಕಲಮತ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಚಿಟಗುಪ್ಪ ಭವಾನಿ ಮಂದಿರ, ಹುಡಗಿ ಕರಿಬಸವೇಶ್ವರ ದೇವಸ್ಥಾನ ಪ್ರಸಿದ್ದಿ ಪಡೆದಿವೆ.
ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಚರಂಡಿಗಳು ನಿರ್ಮಾಣಗೊಂಡಿಲ್ಲ. ಇದು ಗ್ರಾಮೀಣ ಭಾದಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿದೆ. ಕುಡಿಯುವ ನೀರು ಸೇರಿದಂತೆ ಇತರೆ ಸೌಕರ್ಯಗಳು ಲಭ್ಯವಾಗಿವೆ. ಕೆಲ ಸಮಾಜಗಳಿಗೆ ಸಮುದಾಯ ಭವನಗಳನ್ನು ಮಂಜೂರಿ ಮಾಡಿಲ್ಲ. ಇನ್ನು ಬೇಡಿಕೆ ಇರುವ ಸಮಾಜದ ಭವನಗಳು ನಿರ್ಮಾಣಗೊಂಡಿಲ್ಲ.
ಅಶೋಕ ಹಣಕುಣಿ
ಕನಕಟ್ಟಾ ಭಾಗದ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ದೊರೆತಿದೆ. ಗ್ರಾಮದಲ್ಲಿ ಬೀದಿ ದೀಪ ಹಾಗೂ ವಿದ್ಯುತ್ ಸಮಸ್ಯೆಗೆ ಸ್ಪಂದನೆ ನೀಡಿ ರೈತರಿಗೆ ಅನುಕೂಲದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥತರು ಹೇಳಿದ ಕೆಲಸಗಳಿಗೂ ಅಧಿಕ ಕಾರ್ಯಗಳನ್ನು ಮಾಡಲಾಗಿದ್ದು, ಸತತ 24 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಲಾಗಿತ್ತು. ಕೆಲಸ ಕೂಡ ಪ್ರಾರಂಭಗೊಂಡಿತ್ತು. ಆದರೆ ಈವರೆಗೂ ಪೂರ್ಣಗೊಂಡಿಲ್ಲ.
ಮನೋಜಕುಮಾರ ಸಿತಾಳೆ
ದುಬಲಗುಂಡಿ ಗ್ರಾಮದಲ್ಲಿ 110 ಕೆ.ವಿ. ವಿದ್ಯುತ್ ಘಟಕದ ಕಾಮಗಾರಿ ನಡೆಯುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಹರ ಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿದವರು ಕೂಡ ಕಡಿವಾಣ ಹಾಕಲು ಮುಂದಾಗಿಲ್ಲ.
ವೀರಶೆಟ್ಟಿ ಕಾಶಪ್ಪನೂರ್
ಗ್ರಾಮಕ್ಕೆ ಮೂಲ ಸೌಕರ್ಯಗಳು ದೊರೆತಿವೆ. ಆದರೆ, ಗ್ರಾಮಕ್ಕೆ ಕಾಡುತ್ತಿರುವ ರಾಸಾಯನಿಕ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಡಳಿತ ವಿಫಲಗೊಂಡಿದೆ. ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಗಡವಂತಿ ಗ್ರಾಮಸ್ಥರು ಜಲ ಹಾಗೂ ವಾಯು ಮಾಲಿನ್ಯದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಗುಂಡು ಗಡವಂತಿ
ದುರ್ಯೋಧನ ಹೂಗಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA