ಕಾಲುವೆ ಕುಸಿತಕ್ಕೆ ಶಾಶ್ವತ ಪರಿಹಾರ ಎಂದು?
Team Udayavani, Mar 10, 2022, 2:38 PM IST
ಹುಣಸಗಿ: ರೈತರ ಜೀವನಾಡಿಯಾದ ಬಸವಸಾಗರ ಜಲಾಶಯದ ಎಡದಂಡೆ ಮುಖ್ಯಕಾಲುವೆ ಸತತ ನಾಲ್ಕು ಬಾರಿ ಕುಸಿತಗೊಂಡರೂ ಇವರೆಗೆ ಕುಸಿತ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತ ರೈತರ ಆತಂಕವೂ ತಪ್ಪಿಲ್ಲ! ಪದೇ ಪದೆ ಕಾಲುವೆ ಕುಸಿಯುತ್ತಿದೆ. ಇದಕ್ಕೆ ಇನ್ನೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ.
ರೈತರ ಹಿತದೃಷ್ಟಿಯಿಂದ ಈಗಾಗಲೇ ಮರಳು ತುಂಬಿದ ಚೀಲ ಹಚ್ಚಿ ತಾತ್ಕಾಲಿಕ ಕಾಮಗಾರಿಯೂ ನಡೆಸಲಾಗಿದೆ. ನಾಲ್ಕು ದಿನಗಳಲ್ಲಿಯೇ ಪೂರ್ಣಗೊಳಿಸಲಾಗುತ್ತಿದೆ ಎಂದು ಇಂಜಿನಿಯರ್ ಗಳು ಹೇಳುತ್ತಿದ್ದಾರೆ. ಗುಣಮಟ್ಟದ ಮಣ್ಣು ಇಲ್ಲದೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಐಸಿಸಿ ಕಮಿಟಿಯಿಂದ ಪರಿಶೀಲಿಸಿದಾಗ ಮಣ್ಣು ಸರಿ ಇಲ್ಲ ಎಂದು ಮಾಹಿತಿ ನೀಡಿದ್ದರು. ಹಾಗಾಗಿ ಶಾಶ್ವತ ಕೆಲಸ ಆದಾಗಲೇ ಸಮಸ್ಯೆ ತಡೆಗಟ್ಟಬಹುದಾಗಿದೆ ಎನ್ನುತ್ತಿದ್ದಾರೆ ಇಂಜಿನಿಯರ್ ರವಿಕುಮಾರ.
ಎಡದಂಡೆ ಮುಖ್ಯಕಾಲುವೆ ಸುಮಾರು 77.52 ಕಿ.ಮೀ ಉದ್ದವಿದೆ. 10 ಸಾವಿರ ಕ್ಯೂಸೆಕ್ ನೀರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹುಣಸಗಿ ಶಾಖಾ ಕಾಲುವೆ, ಶಹಾಪುರ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ ಹಾಗೂ ಜೇವರ್ಗಿ ಶಾಖಾ ಮತ್ತು ಇಂಡಿ ಶಾಖಾ ಕಾಲುವೆಗಳು ಸೇರಿ ಒಟ್ಟು 4.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹೊಂದಿದೆ.
ಕೈಗೊಂಡ ಕಾಮಗಾರಿ
ಕಾಲುವೆ ಲೈನಿಂಗ್ ಮತ್ತು ಬ್ಯಾಂಕಿಂಗ್ ಕುಸಿತದಿಂದಾಗಿಯೇ 2012ರಲ್ಲಿ ಕ್ಲೋಸರ್ ಅವಧಿಯಲ್ಲಿ 11,437 ಲಕ್ಷ ರೂ. ಅನುದಾನ ತಾಂತ್ರಿಕ ಮಂಜೂರಾತಿ ಪಡೆದು ಮುಖ್ಯಕಾಲುವೆ ಕಿಮೀ 41ರಿಂದ 77 ಕಿಮೀ ವರೆಗೂ(ಪ್ಯಾಕೇಜ್-1) ಅಲ್ಲಲ್ಲಿ ತುರ್ತು 25 ಕಿಮೀ ಕಾಮಗಾರಿ ಮೂರು ಪ್ಯಾಕೇಜ್ಗಳಲ್ಲಿ ನಡೆಸಲಾಗಿತ್ತು. ಪ್ಯಾಕೇಜ್ ಎರಡರಲ್ಲಿ ಎಡದಂಡೆ ಕಾಲುವೆ ಕಿ.ಮೀ 62ರಿಂದ 68ರವರೆಗೂ 5463.91 ಲಕ್ಷ ರೂ. ಅನುದಾನದಲ್ಲಿ ಆಧುನೀಕರಣಗೊಳಿಸಲಾಗಿತ್ತು. ಪ್ಯಾಕೇಜ್ ಮೂರರಲ್ಲಿ ಕಿ.ಮೀ. 70ರಿಂದ 73ರವರೆಗೆ 3180.57 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೊಂಡು ಜೂನ್-2012ರಲ್ಲಿ ಪೂರ್ಣಗೊಳಿಸಲಾಗಿದೆ.
ಮುಖ್ಯವಾಗಿ ಕಾಲುವೆಯ 62ರಿಂದ 68 ಕಿಮೀ ನಡುವೆ ಅಗ್ನಿ ಬಳಿಯೇ ಪದೇ ಪದೆ ಕಾಲುವೆ ಕುಸಿತಗೊಳ್ಳುತ್ತಿದೆ. 2014ರಲ್ಲಿ ಮತ್ತು 2015ರಲ್ಲಿ ಕುಸಿತಗೊಂಡ ನಂತರ 2017ರಲ್ಲಿ ಕುಸಿದಿತ್ತು. ಮತ್ತೆ 2020ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿದು ಅಧಿಕಾರಿಗಳ ನಿದ್ದೆ ಕೆಡಿಸಿತ್ತು. ಸದ್ಯ ಪ್ರಸಕ್ತ 2022ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿತಗೊಂಡಿದೆ. ಮೂರು ಬಾರಿ ಸಂಬಂಧಿಸಿದ ಗುತ್ತಿಗೆದಾರರೇ ಕಾಲುವೆ ರಿಪೇರಿ ಮಾಡಿಸಿದ್ದಾರೆ. ಆದರೆ ನಾಲ್ಕನೆ ಬಾರಿ ಕೆಬಿಜೆಎನ್ಎಲ್ ನಿಗಮದ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಈಗಾ ಕುಸಿತ ಕಾಲುವೆ ತಾತ್ಕಾಲಿಕ ಕಾಮಗಾರಿ ಕೈಗೊಂಡಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ. ಒಟ್ಟಾರೆ ಶಾಶ್ವತ ಪರಿಹಾರ ಹುಡಕಬೇಕು. ಪಕ್ಕದ ಸ್ಥಳದಲ್ಲಿ ಪರ್ಯಾಯ ಕಾಲುವೆ ಕಟ್ಟಿಂಗ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರು ಭೇಟಿ ನೀಡಲಿದ್ದಾರೆ. ನಂತರ ಪರಿಶೀಲಿಸಿ ಅವರ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ರವಿಕುಮಾರ, ಸಹಾಯಕ ಇಂಜಿನಿಯರ್, ಕೆಬಿಜೆಎನ್ಎಲ್ ವಿಭಾಗ-7, ಹುಣಸಗಿ
-ಬಾಲಪ್ಪ ಎಂ. ಕುಪ್ಪಿ