ತಾಲೂಕು ಕರವೇ ಕಾರ್ಯಕರ್ತರಿಂದ 1 ಲಕ್ಷ ನೆರವು
Team Udayavani, Dec 1, 2018, 12:38 PM IST
ತಾಳಿಕೋಟೆ: ಮಗುವಿನ ಲೀವರ್ ನಲ್ಲಿ ಕಾಣಿಸಿಕೊಂಡ ದೋಷದಿಂದ ಅಘಾತಗೊಂಡು ಹಣ ಸಂಗ್ರಹಕ್ಕಾಗಿ ಅಲೆದಾಡುತ್ತಿರುವ ಕುಟುಂಬಕ್ಕೆ ನೆರವು ಒದಗಿಸಲು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಹಣ ಸಂಗ್ರಹಿಸಿ ಕಲ್ಲೂರ ಕುಟುಂಬಕ್ಕೆ 1 ಲಕ್ಷ ರೂ. ನೆರವು ಕಲ್ಪಿಸಿಕೊಟ್ಟಿದ್ದಾರೆ.
ಶುಕ್ರವಾರ ಉಪ ತಹಶೀಲ್ದಾರ್ ಚವ್ಹಾಣ, ಎಎಸ್ಐ ಕೆ.ಬಿ.ರಡ್ಡಿ ಅವರ ಸಮ್ಮುಖದಲ್ಲಿ ಕರವೇ ಕಾರ್ಯಕರ್ತರು ಸಂಗ್ರಹಿಸಿ¨ 1 ಲಕ್ಷ ರೂ. ಹಣವನ್ನು ಲೀವರ್ ಸಮಸ್ಯೆಗೊಳಗಾದ ಸುದರ್ಶನ ಕಲ್ಲೂರ ಅವರ ತಾಯಿ ರೇಣುಕಾ ಕಲ್ಲೂರ ಅವರಿಗೆ ಹಸ್ತಾಂತರಿಸಿದರು. ಈ ಸಮಯದಲ್ಲಿ ಕರವೇ ತಾಲೂಕಾ ಅಧ್ಯಕ್ಷ ನಿಸಾರ ಬೇಪಾರಿ ಮಾತನಾಡಿ, ಸುದರ್ಶನ ಕಲ್ಲೂರಗೆ ಲೀವರ್ನಲ್ಲಿ ಕಾಣಿಸಿಕೊಂಡಿರುವ ದೋಷದಿಂದ ಲೀವರ್ ಬದಲಾವಣೆ ಅವಶ್ಯಕವಾಗಿದೆ.
ತಾಯಿಯೇ ತನ್ನ ಜೀವವನ್ನು ಒತ್ತೆ ಇಟ್ಟು ಲೀವರ್ ನೀಡಲು ಮುಂದಾಗಿದ್ದರೂ ಈ ಬದಲಾವಣೆಗೆ ಸುಮಾರು 15ರಿಂದ 20 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಹಣ ಹೊಂದಿಸುವ ಸಲುವಾಗಿ ಪಾಲಕರು ದಾನಿಗಳ ಮನೆ ಬಾಗಿಲಿಗೆ ತಿರುಗಾಡುತ್ತಿದ್ದರು.
ಅದರ ಜೊತೆಗೆ ಕರವೇ ಸಂಘಟನೆಯಿಂದ ಕೈಲಾದ ಮಟ್ಟಿಗೆ ಸಹಾಯ ನೀಡಬೇಕೆಂಬ ಉದ್ದೇಶದೊಂದಿಗೆ ಸಂಘಟನೆಯ
ಕಾರ್ಯಕರ್ತರೆಲ್ಲರೂ ಸೇರಿ ಬೀದಿ ಬೀದಿಯಲ್ಲಿ ಹಾಗೂ ಫುಟ್ಪಾಥ್ ವ್ಯಾಪಾರಸ್ಥರ ಬಳಿ ತೆರಳಿ ಅವರ ಕೈಲಾದ
ಸಹಾಯವನ್ನು ಅಪೇಕ್ಷಿಸಿದ್ದೇವು.
ಅದರಂತೆ ಈಗ ದಾನಿಗಳಿಂದ 1 ಲಕ್ಷ ರೂ. ಸಂಗ್ರಹವಾಗಿದೆ. ಈ ಒಂದು ಸಂಘಟನೆ ಕಾರ್ಯಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಆಭಾರಿಯಾಗಿದ್ದೇವೆ ಎಂದರು.
ಕರವೇ ಸಂಘಟನೆ ತಾಲೂಕು ಉಪಾಧ್ಯಕ್ಷ ಜೈಭೀಮ ಮುತ್ತಗಿ, ಮಹಿಳಾ ಘಟಕದ ಶ್ವೇತಾ ಯರಗಲ್ಲ ಮಾತನಾಡಿ, ಬಡತನದಲ್ಲಿಯೇ ಬೆಂದು ಹೋಗಿದ್ದ ಕಲ್ಲೂರ ಕುಟುಂಬದ ಬಾಲಕನಿಗೆ ಲೀವರ್ನಲ್ಲಿ ಕಾಣಿಸಿಕೊಂಡಿದ್ದ ದೋಷ ದೇವರ ಸತ್ವ ಪರಿಕ್ಷೆ ಎಂಬುದಾಗಿದೆ.
ಇಂತಹ ಬಡತನದಲ್ಲಿ ಬೆಂದು ಮಗನ ಬದುಕಿಗಾಗಿ ಅಲೆದಾಡುತ್ತಿರುವ ಕುಟುಂಬದ ಕುರಿತು ಪತ್ರಿಕೆಯಲ್ಲಿ ಮನಕುಲಕುವಂತಹ ವರದಿ ಪ್ರಕಟಿಸಿ ಎಲ್ಲರ ಕಣ್ತೆರಿಸುವಂತಹ ಕಾರ್ಯ ಮಾಡಿದೆ. ಮಾಧ್ಯಮಕ್ಕೂ ಹಾಗೂ ಸಹಕರಿಸಿದ ಎಲ್ಲ ವ್ಯಾಪಾರಸ್ಥರಿಗೆ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು.
ಉಪ ತಹಶೀಲ್ದಾರ್ ಚವ್ಹಾಣ ಮಾತನಾಡಿ, ಮಗನನ್ನು ಬದುಕಿಸಿಕೊಳ್ಳಲು ಅಲೆದಾಡುತ್ತಿರುವ ಕಲ್ಲೂರ ಕುಟುಂಬಕ್ಕೆ ನೆರವು ಒದಗಿಸುವ ಸಲುವಾಗಿ ಮಾನವೀಯತೆ ಆಧಾರದ ಮೇಲೆ ಕರವೇ ಕಾರ್ಯಕರ್ತರೆಲ್ಲರೂ ಬೀದಿ ಬೀದಿಯಲ್ಲಿ ದೇಣಿಗೆ ಸಂಗ್ರಹದ ಡಬ್ಬಿಯೊಂದಿಗೆ ಸಂಚರಿಸಿ ಹಣ ಸಂಗ್ರಹಿಸಲು ಮುಂದಾಗಿರುವದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕಾರ್ಯವಾಗಿದೆ ಎಂದರು.
ಕರವೇ ತಾಲೂಕು ಉಪಾಧ್ಯಕ್ಷ ಪ್ರಭು ಪಾಟೀಲ, ಅಬುಬಕರ ಲಾಹೋರಿ, ನಬಿ ಲಾಹೋರಿ, ಮಂಜು ಬಡಿಗೇರ, ನಾಗರಾಜ ಪತ್ತಾರ, ಬಾಷಾ ಕಿತ್ತೂರ, ಬಾಷಾ ಹುಣಸಗಿ, ನಬಿ ಮೇತ್ರಿ, ಪ್ರಭು ಅಣ್ಣೀಗೇರಿ, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ತಳವಾರ, ಟಿಪ್ಪು ಕಾಳಗಿ, ಮನೋಜ ಹಂಚಾಟೆ, ಗಿರೀಶ ಕನಕರಡ್ಡಿ, ಮಡಿವಾಳ ಕೊಂಡಗೂಳಿ, ರಾಜು ಮೂಕಿಹಾಳ ಇದ್ದರು.