ಜನರ ಮನೆ ಬಾಗಿಲಿಗೆ ಆಡಳಿತ: ಗಡಾದೆ
Team Udayavani, Mar 20, 2022, 5:49 PM IST
ಇಂಡಿ: ಗ್ರಾಮದ ಜನರ ಸಮಸ್ಯೆ ಸ್ಥಳದಲ್ಲೇ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಅಧಿ ಕಾರಿಗಳಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನರ ಮನೆ ಬಾಗಿಲಿಗೆ ಆಡಳಿತವನ್ನು ತರುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪೂರಕವಾಗಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಹೇಳಿದರು.
ಶನಿವಾರ ಮಿರಗಿ ಗ್ರಾಮದ ಯಲ್ಲಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಅಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಚಾಲನೆ ಅರ್ಜಿ ಸಲ್ಲಿಸುವ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕಳೆದ ತಿಂಗಳ ಲಚ್ಯಾಣದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಗ್ರಾಮಗಳಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಷ್ಟ ಹೇಳಿಕೊಂಡ ಜನ
ಕಾರ್ಯಕ್ರಮದಲ್ಲಿ ನದಿ ಪಾತ್ರದಲ್ಲಿ ಜಮೀನು ಹೊಂದಿದ ಕೆಲ ರೈತರು, ಭೀಮಾ ನದಿಯಿಂದ 2015ರಲ್ಲಿ ಮಹಾಪುರ ಬಂದಾಗ ಬೆಳೆ ಪರಿಹಾರ ಸರಿಯಾಗಿ ಬಂದಿಲ್ಲ. ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರೆತಿಲ್ಲ, ಸ್ಥಳಾಂತರದಲ್ಲಿ ಕೆಲವರಿಗೆ ಮನೆ ದೊರೆತಿಲ್ಲ, ಗ್ರಾಮದ ನವಲಿ ಹಳ್ಳಕ್ಕೆ ಕೃಷ್ಣಾ ಕಾಲುವೆಯಿಂದ ನೀರು ಹರಿಸುವ ಕುರಿತು ಕೆಬಿಜೆಎನ್ಎಲ್ ಗೆ ಮನವಿ, ಮಿರಗಿ ಗ್ರಾಮದ ಆಲಮೇಲ ವಸತಿಗೆ ವಿದ್ಯುತ್ ಸಂಪರ್ಕ, ಆಧಾರ್ ಕಾರ್ಡ್ ತಿದ್ದುಪಡಿ ಸೇರಿದಂತೆ ಹಲವಾರು ಸಮಸ್ಯೆ ಹೇಳಿಕೊಂಡರು. ವೇದಿಕೆಯಲ್ಲಿಯೇ ಸಂಧ್ಯಾ ಸುರಕ್ಷಾ ಯೋಜನೆಯಡಿ ಕಾರ್ಡ್ ವಿತರಿಸಲಾಯಿತು.
ತಹಶೀಲ್ದಾರ ಆರ್.ಎಸ್. ರೇವಡಿಗಾರ, ಇಒ ಸುನೀಲ ಮದ್ದೀನ, ಶಿರಸ್ತೇದಾರ್ ಎಸ್.ಆರ್. ಮುಜಗೊಂಡ, ಗ್ರಾಮ ನಿರೀಕ್ಷಕ ಬಸವರಾಜ ರಾವೂರ, ರವಿ ಮಡಿವಾಳ, ಸಂತೋಷ ಹಿರೇಬೇವನೂರ, ಮುನ್ನಾ ತಾಂಬೋಳಿ ವಿವಿಧ ಇಲಾಖೆ ಅಧಿ ಕಾರಿಗಳು, ಗ್ರಾಪಂ ಅಧ್ಯಕ್ಷ ಚನ್ನು ಶ್ರೀಗಿರಿ, ಉಪಾಧ್ಯಕ್ಷ ಬೋರಮ್ಮ ಖಸ್ಕಿ, ಅಕ್ಷರ ದಾಸೋಹದ ಎಂ.ಎಚ್. ಯಲಗುದ್ರಿ, ಶಿಕ್ಷಣ ಇಲಾಖೆಯ ಎಂ.ಎಸ್. ಮಾಡ್ಯಾಳ, ಮುಖ್ಯ ಗುರುಗಳಾದ ಸಿ.ಕೆ. ಬಡಿಗೇರ, ಶಿವಾನಂದ ರಾವೂರ, ಚಂದ್ರು ಆಲಮೇಲ, ಶ್ರೀಮಂತ ಖಸ್ಕಿ, ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ಬಂದರವಾಡ, ಮಲ್ಲಿಕಾರ್ಜುನ ಚಾಕುಂಡಿ, ಮಲ್ಲು ಆತನ್ನೂರ, ಭೀಮನಗೌಡ ರೋಡಗಿ, ದೇವೇಂದ್ರ ಬರಡೊಲ, ಶ್ರೀಶೈಲ ಮದರಿ, ಮಲ್ಲು ರಾವೂರ, ನಿಂಗು ಕಲಶೆಟ್ಟಿ, ಜಿ.ಎಸ್. ದೇವರ ಸೇರಿದಂತೆ ಅನೇಕರು ಇದ್ದರು.