ಅವಕಾಶ ವಂಚಿತ ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ: ಅಶ್ವತ್ಥ ನಾರಾಯಣ
Team Udayavani, Jun 3, 2022, 5:19 PM IST
ವಿಜಯಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ನೇಮಕದಲ್ಲಿ ಸರ್ಕಾರ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದೆ. ಇದರ ಹೊರತಾಗಿಯೂ ಅವಕಾಶ ವಂಚಿತ ಕೆಲವರಿಗೆ ಬೇರೆಡೆ ಅವಕಾಶ ಕಲ್ಪಿಸುವುದಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ 13,500 ಅತಿಥಿ ಉಪನ್ಯಾಸಕರಲ್ಲಿ 11,500 ಅತಿಥಿ ಉಪನ್ಯಾಸಕರಿಗೆ ಪೂರ್ಣಾವಧಿ ಕೆಲಸ ಹಾಗೂ ಗೌರವಯುತ ವೇತನ ನೀಡುತ್ತಿದ್ದೇವೆ. ಅವಕಾಶ ವಂಚಿತರಿಗೆ ಬೇರೆ ಬೇರೆ ಕಡೆ ಅವಕಾಶ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇನ್ನು ವಿಜಯಪುರ ನಗರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯ ಮಾಡುವ ವಿಷಯದಲ್ಲಿ ಸರ್ಕಾರ ಸ್ಥಳೀಯರ ಅಭಿಪ್ರಾಯ ಗೌರವಿಸಲಿದೆ. ಸ್ಥಳೀಯರ ಭಾವನೆಯಂತೆ ಮುನ್ನಡಿ ಇಡಲಿದೆ ಎಂದರು.
ಇದನ್ನೂ ಓದಿ:ರಾಜ್ಯಸಭಾ ಚುನಾವಣೆಗೆ ಈಗ ಮತದಾನ ಅನಿವಾರ್ಯ; ವಿಪ್ ಜಾರಿ ಮಾಡಿದ ಕಾಂಗ್ರೆಸ್
ಇನ್ನು ಜಿಲ್ಲೆಗೊಂದು ನೂತನ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯಲ್ಲಿ ಈಗಾಗಲೇ 6 ವಿಶ್ವವಿದ್ಯಾಲಯ ಸ್ಥಾಪಿಸಲಾಗಿದ್ದು, ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಚರ್ಚೆಯೂ ಇದೆ. ಗುಣಮಟ್ಟ ಶಿಕ್ಷಣ ನೀಡುವ ವಿಷಯದಲ್ಲಿ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಪಠ್ಯ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಚಿವರ ವರದಿ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಮೇಲ್ಮನೆಯ ಈಶಾನ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ ಪುನರಾಯ್ಕೆ ಖಚಿತವಾಗಿದೆ. ಈ ಇಬ್ಬರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಡಿರುವ ಕೆಲಸಗಳೇ ಅವರನ್ನು ಮರು ಆಯ್ಕೆ ಮಾಡಲಿವೆ. ಇನ್ನೂ ಉತ್ತಮವಾಗಿ ಮಾಡಲು ಮತದಾರರ ಸಂಪೂರ್ಣ ಸಹಕಾರ ಅಗತ್ಯ. ಹೀಗಾಗಿ ಪ್ರತಿಯೊಬ್ಬ ಮತದಾರರೂ ಶಿಕ್ಷಕರ ಹಾಗೂ ಪದವೀಧರರ ಹಿತ ರಕ್ಷಣೆಗಾಗಿ ಬಿಜೆಪಿ ಅಭ್ಯರ್ಥಿಗೆ ನೀಡಿವ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಬಿಜೆಪಿ ಬದ್ದವಾಗಿದೆ. ತಂತ್ರಜ್ಞಾನ ಬಳಕೆ, ಶಿಕ್ಷಕರ ನೇಮಕದಲ್ಲಿ ಪಾರದರ್ಶಕತೆ ಅನುಸರಿಸಲಾಗಿದೆ. ದೇಶದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತಂದಿರುವ ಮೊದಲ ರಾಜ್ಯ ಕರ್ನಾಟಕ. ಹೀಗಾಗಿ ಬಡವ ಬಲ್ಲಿದ ವ್ಯತ್ಯಾಸವಿಲ್ಲದೆ ಗುಣಮಟ್ಟದ ಹಾಗೂ ಉದ್ಯೋಗ ಸೃಷ್ಟಿಸುವ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ.
ಇನ್ನು ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ನೀರಾವರಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರಗಳು ಆದ್ಯತೆ ನೀಡಿವೆ. ವಿಮಾನ ನಿಲ್ದಾಣ, ನೀರಾವರಿ, ಕೃಷಿ, ಪ್ರವಾಸೋದ್ಯಮ ನೀತಿ, ಕೈಗಾರಿಕೆ ನೀತಿಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯೋಜಿಸಲಾಗಿದೆ ಎಂದರು.
ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.