ಅನಾಥ ಮಗುವಿಗೆ ಬೇಕಿದೆ ಆಸರೆ
Team Udayavani, Jun 12, 2021, 10:29 AM IST
ತಾಳಿಕೋಟೆ: ಕೋವಿಡ್ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮೈಲೇಶ್ವರ ಗ್ರಾಮದ 8 ವರ್ಷದ ಬಸವರಾಜ ಎಂಬ ಬಾಲಕ ಅನಾಥವಾಗಿದ್ದು ಅಕ್ಕರೆ ಮಾತುಗಳಿಂದ ಅಪ್ಪಿಕೊಳ್ಳುವವರಿಗಾಗಿ ಕಾಯ್ದು ಕುಳಿತಿದ್ದಾನೆ.
ಮನೆಯಲ್ಲಿ ಬಡತನವಿದ್ದರೂ ಪ್ರೀತಿಗೆ ಬಡತನವಿಲ್ಲ ಎಂಬಂತೆ ಮಾನಪ್ಪ ಬಡಿಗೇರ ಹಾಗೂ ಪತ್ನಿ ಸರೋಜಿನಿ ಮಗ ಬಸವರಾಜನೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ಯಾವ ಕಡೆಯಿಂದ ತಗುಲಿತೋ ಗೊತ್ತಿಲ್ಲ. ಕೇವಲ 20 ದಿನದಲ್ಲಿ ಇಬ್ಬರನ್ನೂ ಬಲಿ ಪಡೆದು ಕುಟುಂಬವನ್ನೇ ಹಿಂಡಿ ಹಿಪ್ಪೆ ಮಾಡಿ ಪುಟ್ಟ ಬಾಲಕನನ್ನು ಅನಾಥವಾಗಿಸಿದೆ.
ಮೊದಲು ಮಾನಪ್ಪನ ಪತ್ನಿ ಸರೋಜಿನಿಗೆ ಸೋಂಕು ಕಾಣಿಸಿಕೊಂಡಿತು. ಇದನ್ನರಿತ ಮಾನಪ್ಪ ತಾಳಿಕೋಟೆ ಸರ್ಕಾರಿ, ಖಾಸಗಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿದಿದ್ದರು. ಮೇ 2ರಂದು ರಾತ್ರಿ ಕಾಣಿಸಿಕೊಂಡ ವಿಪರೀತ ಜ್ವರ, ಕೆಮ್ಮು, ನೆಗಡಿಯಿಂದ ಸರೋಜಿನಿಯನ್ನು ಕೊರೊನಾ ಬಲಿ ಪಡೆಯಿತು.
ಕೋವಿಡ್ ಸೋಂಕು ತನಗೂ ತಗುಲಬಾರದೆಂದು ತಾಳಿಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಗಂಟಲು ದ್ರವ ನೀಡಿ ಗ್ರಾಮಕ್ಕೆ ತೆರಳಿ ಹೆಂಡತಿಯ ಕ್ರಿಯಾ ಕ್ರಮ ಮುಗಿಸಿದ. ನಂತರ ಒಂದು ವಾರದ ನಂತರ ತನಗೂ ಸೋಕು ದೃಢಪಟ್ಟ ಬಗ್ಗೆ ಮಾಹಿತಿ ಬಂದಿದ್ದರಿಂದ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾನಪ್ಪ ಹೆಂಡತಿಯನ್ನು ಕಳೆದುಕೊಂಡ 22ನೇ ದಿನಕ್ಕೆ ತಾನೂ ಕೊರೊನಾಗೆ ಬಲಿದ. ಇದ್ದ ಒಬ್ಬ ಮಗ ಅನಾಥನಾಗಿದ್ದು ನೋಡಿದವರ ಕರುಳು ಕಿವಚುವಂತೆ ಮಾಡುತ್ತಿದೆ.
ತಂದೆ ಕನಸು: ಮಾನಪ್ಪ ಬಡಿಗೇರ ಕರ ಕುಶಲಕರ್ಮಿಯಾಗಿದ್ದು ಕೂಲಿಯಿಂದ ಬಂದ ಹಣದಲ್ಲೇ ಮಗನನ್ನು ಪಟ್ಟಣದ ವಿಪಿಎಂ ಆಗ್ಲ ಮಾಧ್ಯಮ ಶಾಲೆಗೆ ಸೇರಿದಿದ್ದ. ಸದ್ಯ ಮೂರನೇತರಗತಿ ಮುಗಿಸಿ ನಾಲ್ಕನೇ ತರಗತಿಗೆ ಕಾಲಿಡುವ ವೇಳೆ ಬಾಲಕನ ಬದುಕಿನಲ್ಲಿ ವಿಧಿ ಕ್ರೂತವಾಗಿ ನಡೆದುಕೊಂಡಿದೆ. ಸದ್ಯ ಬಾಲಕ ತಾಯಿ ತವರು ಮನೆ ವಡವಡಗಿ ಗ್ರಾಮದ ಅಜ್ಜಿ ಮನೆಯಲ್ಲಿ ಆಸರೆ ಪಡೆದಿದ್ದು ಈ ಕುಟುಂಬ ಸಹ ಕಡು ಬಡತನದಲ್ಲಿದೆ. ಉಳ್ಳವರ ಸಹಾಯ ಹಸ್ತ ಈ ಕುಟುಂಬಕ್ಕೆ ಅವಶ್ಯವಾಗಿ ಬೇಕಿದೆ.
ದತ್ತು ಪಡೆಯಲಿ: ಕೋವಿಡ್ನಿಂದ ಅನಾಥರಾದ ಮಕ್ಕಳಿಗಾಗಿ ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅನಾಥ ಮಕ್ಕಳ ಆರೈಕೆ, ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಳ್ಳುವ ಘೋಷಣೆ ಮಾಡಿದೆ. ಸಂಬಂಧಿಕರ ಮನೆಯಲ್ಲಿ ಮಗು ಆಸರೆ ಪಡೆಯುತ್ತಿದ್ದರೆ ಅಂತ ಮಕ್ಕಳಿಗೆಮಾಸಿಕ 3,500 ರೂ. ನೀಡುವುದರ ಜತೆಗೆದತ್ತು ಪಡೆಯುವುದಾಗಿ ಘೋಷಿಸಿದಂತೆ ಈಪುಟ್ಟ ಬಾಲಕನ ಆಸರೆಗೆ ಸರ್ಕಾರ ಮುಂದೆ ಬರಬೇಕಿದೆ.
ಸಹಾಯ ಮಾಡಿ : ಕೋವಿಡ್ ಕ್ರೌರ್ಯಕ್ಕೆ ಅನಾಥವಾಗಿರುವ ಬಾಲಕ ಬಸವರಾಜ ಮಾನಪ್ಪ ಬಡಿಗೇರ ಪೋಷಣೆಗಾಗಿ ಬಾಲಕ ಬಸವರಾಜನ ಎಸ್ಬಿಐ ಬ್ಯಾಂಕ್ ಖಾತೆ ನಂ. 38727014246(ಐಎಫ್ಎಸ್ಸಿ ಕೋಡ್ ಎಸ್ಬಿಐ ನಂ.40313, ಮೋ. 9902606415 ಉಳ್ಳವರು ಸಹಾಯ ಮಾಡಬಹುದು.
ಕೋವಿಡ್ನಿಂದ ಅನಾಥವಾದ ಮಕ್ಕಳ ಬಗ್ಗೆ ಸರ್ವೇ ಕಾರ್ಯ ನಡೆಯುತ್ತಿದೆ.ಅವಳಿ ತಾಲೂಕಿನಲ್ಲಿ ಎಲ್ಲಯೂ ಕೂಡಾ ಇಂತಹ ಘಟನೆ ನಡೆದಿಲ್ಲ. ಮೈಲೇಶ್ವರ ಗ್ರಾಮದಲ್ಲಿ ಕೋವಿಡ್ನಿಂದ ತಂದೆ ತಾಯಿ ಕಳೆದುಕೊಂಡು 8 ವರ್ಷದ ಬಾಲಕ ಅನಾಥವಾಗಿದ್ದ ಬಗ್ಗೆ ಮಾಹಿತಿಯಿಲ್ಲ. ಇದರಬಗ್ಗೆ ಪರಿಶೀಲಿಸಿ ಅನಾಥವಾದ ಬಾಲಕಬಸವರಾಜನಿಗೆ ಆಸರೆಯಾಗುವ ಕಾರ್ಯ ಮಾಡುತ್ತೇನೆ.– ಸಾವಿತ್ರಿ ಗುಗ್ಗರಿ, ಸಿಡಿಪಿಒ, ತಾಳಿಕೋಟೆ
–ಜಿ.ಟಿ. ಘೋರ್ಪಡೆ