ಕನಿಷ್ಠ ಪರಿಹಾರಕ್ಕೆ ಬೇಕು 12 ಸಾವಿರ ಕೋಟಿ
ಈವರೆಗೆ 17 ಸಾವಿರ ಎಕರೆಯೂ ವಶಪಡಿಸಿಕೊಂಡಿಲ್ಲ ವಾಸ್ತವ ಬೆಲೆಗೆ 36 ಸಾವಿರ ಕೋಟಿ ಅಗತ್ಯ
Team Udayavani, Mar 2, 2020, 1:37 PM IST
ಬಾಗಲಕೋಟೆ: ರಾಜ್ಯದ ಬಹುಭಾಗ ಭೌಗೋಳಿಕ ನೀರಾವರಿ ಕ್ಷೇತ್ರ ಹೊಂದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಡಿ ಸ್ವಾಧೀನಗೊಳ್ಳುವ ಭೂಮಿಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ಕನಿಷ್ಠ ಪರಿಹಾರ ನೀಡಲು ಬರೋಬ್ಬರಿ 12 ಸಾವಿರ ಕೋಟಿ ಅನುದಾನ ಬೇಕು. ಇನ್ನು ರೈತರು ಕೇಳುವ ಯೋಗ್ಯ ಭೂಮಿ ಬೆಲೆಗೆ ಸರ್ಕಾರ ದಯೆ ತೋರುತ್ತದೆಯೇ ಎಂದು ಕೃಷ್ಣೆಯ ರೈತರು ಬೆಟ್ಟದಷ್ಟು ನಿರೀಕ್ಷೆಯಲ್ಲಿ ಕಾತರರಾಗಿದ್ದಾರೆ.
ಹೌದು, ಯುಕೆಪಿ 1 ಮತ್ತು 2ನೇ ಹಂತದಲ್ಲಿ ಈಗಾಗಲೇ 2,61,610 ಎಕರೆ ಭೂಮಿ, 75,755 ಕಟ್ಟಡಗಳು ಸ್ವಾಧೀನಗೊಂಡಿವೆ. ಇದೀಗ ಆರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆ ಪೂರ್ಣಗೊಳ್ಳಲು 3ನೇ ಹಂತದ ಭೂಸ್ವಾಧೀನ, ಪುನರ್ವಸತಿ, ಪುನರ್ನಿರ್ಮಾಣ ಹಾಗೂ ನೀರಾವರಿ ಯೋಜನೆ ಕೈಗೊಳ್ಳಬೇಕಿದೆ. ಇದಕ್ಕಾಗಿ ಒಟ್ಟು 1.23 ಲಕ್ಷ ಎಕರೆ ಭೂಮಿ ಮತ್ತೆ ಸ್ವಾಧೀನಪಡಿಸಿ
ಕೊಳ್ಳಲೇಬೇಕಾದ ಅಗತ್ಯವಿದೆ.ಇದಕ್ಕಾಗಿ ಯೋಗ್ಯ ಪರಿಹಾರ ಕೊಡಿ ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ಎಂಬ ಕಾತುರ ಎಲ್ಲರಲ್ಲಿದೆ.
1.23 ಲಕ್ಷ ಎಕರೆ ಅಗತ್ಯ: ಯುಕೆಪಿ 3ನೇ ಹಂತದಡಿ ಆಲಮಟ್ಟಿ ಜಲಾಶಯವನ್ನು 524.256 ಮೀಟರ್ಗೆ ಎತ್ತರಿಸಿದಾಗ 20 ಗ್ರಾಮ ಮುಳುಗಡೆಗೊಳ್ಳಲಿದ್ದು, ಇದರ ಜತೆಗೆ 94,640 ಎಕರೆ ಭೂಮಿಯೂ ಹಿನ್ನೀರ ವ್ಯಾಪ್ತಿಯಡಿ ಮುಳುಗಡೆಯಾಗಲಿದೆ. 20 ಗ್ರಾಮಗಳ ಜನರಿಗೆ ಪುನರ್ವಸತಿ ಕಲ್ಪಿಸಲು 20 ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ 4,315 ಎಕರೆ, 9 ವಿವಿಧ ನೀರಾವರಿ ಉಪ ಯೋಜನೆಗಳ ಕಾಲುವೆಗಾಗಿ 24,685 ಎಕರೆ ಸಹಿತ ಮುಳುಗಡೆ, ಕಾಲುವೆ ನಿರ್ಮಾಣ, ಪುನರ್ ವಸತಿ ನಿರ್ಮಾಣಕ್ಕಾಗಿ ಒಟ್ಟು 1,23,640 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. 2013ರಲ್ಲಿ ಜಾರಿಗೊಂಡ ಹೊಸ ಭೂಸ್ವಾಧೀನ ಕಾಯ್ದೆಯಡಿ ಈವರೆಗೆ 17 ಸಾವಿರ ಎಕರೆ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡಿಲ್ಲ.
ನೋಂದಣಿ ಬೆಲೆಗೆ ನಾಲ್ಕು ಪಟ್ಟು ಪರಿಹಾರ: ಹೊಸ ಕಾಯ್ದೆಯಡಿ ಆಯಾ ತಾಲೂಕಿನ ಉಪ ನೋಂದಣಿ ಕಚೇರಿಗಳಲ್ಲಿ ಒಂದು ಎಕರೆ ಭೂಮಿಯನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದು ನೋಂದಣಿಯಾಗಿರುತ್ತದೆಯೋ (ವಾಸ್ತವ ಮಾರಾಟ ಬೆಲೆ ಅಲ್ಲ) ಅದಕ್ಕೆ ನಾಲ್ಕು ಪಟ್ಟು ಗ್ರಾಮೀಣ ಪ್ರದೇಶದ ಭೂಮಿಗೆ, ಅದೇ ಮಾದರಿಯಲ್ಲಿ ಎರಡು ಪಟ್ಟು ನಗರ ಪ್ರದೇಶದ ಭೂಮಿಗೆ ಬೆಲೆ ನಿಗದಿ ಮಾಡಿ, ಪರಿಹಾರ ನೀಡಲು ಅವಕಾಶವಿದೆ. ಯಾವುದೇ ರೈತರು ಅಥವಾ ಭೂಮಿ ಮಾರಾಟ ಮಾಡಿದ ವ್ಯಕ್ತಿಗಳು ವಾಸ್ತವ ಬೆಲೆಗೆ ಮಾರಾಟ ಮಾಡಿದ ಬೆಲೆ ನಮೂದಿಸದೇ, ಆಯಾ ಪ್ರದೇಶದ ಭೂಮಿಯ ಕನಿಷ್ಠ ನೋಂದಣಿ ಬೆಲೆ ಮಾತ್ರ ನೋಂದಿಸಿ, ಖರೀದಿ ಮಾಡುತ್ತಾರೆ. ಹೀಗಾಗಿ ವಾಸ್ತವದಲ್ಲಿ ಮಾರಾಟದ ಬೆಲೆಗೆ ನಾಲ್ಕು ಪಟ್ಟು ಬೆಲೆ ರೈತರಿಗೆ ದೊರೆಯುತ್ತಿಲ್ಲ. ನೋಂದಣಿ ಮಾಡಿಸಿದ ಬೆಲೆಗೆ, ಯಾವ ಪ್ರದೇಶದಲ್ಲೂ ಭೂಮಿ ಸಿಗುವುದೂ ಇಲ್ಲ.
ಕನಿಷ್ಠ ಪರಿಹಾರಕ್ಕೇ ಬೇಕು 12 ಸಾವಿರ ಕೋಟಿ: ಸ್ವಾಧೀನಗೊಳ್ಳುವ ಭೂಮಿಗೆ ಕಾನೂನು ಪ್ರಕಾರ ಪರಿಹಾರ ಕೊಟ್ಟರೂ ಬರೋಬ್ಬರಿ 12 ಸಾವಿರ ಕೋಟಿ ಬೇಕು. ಇನ್ನು ರೈತರು ಕೇಳುವ ವಾಸ್ತವ ಬೆಲೆ, ಖುಷ್ಕಿ ಭೂಮಿಗೆ 30 ಲಕ್ಷ, ನೀರಾವರಿ ಭೂಮಿಗೆ 40 ಲಕ್ಷ ಪರಿಹಾರ ನೀಡಲು 36 ಸಾವಿರ ಕೋಟಿ ಬೇಕಾಗುತ್ತದೆ. ಮಾರುಕಟ್ಟೆ ವಾಸ್ತವದ ಬೆಲೆ ಕೊಡಲೇಬೇಕು ಎಂದು ರೈತರು ಪಟ್ಟು ಹಿಡಿದು, ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಮೆಟ್ರೋಗೆ ಕೊಟ್ಟ ಅನುದಾನ ಕೊಡಿ: ಉತ್ತರಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಯುಕೆಪಿಗೆ ಸರ್ಕಾರ, ಅಗತ್ಯ ಅನುದಾನ ನೀಡಿ, ಬೇಗ ಪೂರ್ಣಗೊಳಿಸಬೇಕು. ಕಳೆದ 1962ರಿಂದಲೂ ಈ ಯೋಜನೆ ಕುಂಟುತ್ತ ಸಾಗಿದ್ದು, ಬೆಂಗಳೂರಿನ ಮೆಟ್ರೋ ಯೋಜನೆಗೆ ಒಂದು ಹಂತದಲ್ಲಿ 14,052 ಕೋಟಿ (0ರಿಂದ 43 ಕಿ.ಮೀ) ಹಾಗೂ 2ನೇ ಹಂತದಲ್ಲಿ 32 ಸಾವಿರ ಕೋಟಿ (43 ಕಿ.ಮೀಯಿಂದ 76 ಕಿ.ಮೀ ಮೆಟ್ರೋ ರೈಲು ಮಾರ್ಗ ನಿರ್ಮಾಣ) ಅನುದಾನ ನೀಡಲಾಗಿದೆ. ಅದೇ ಮಾದರಿಯಲ್ಲಿ ಯುಕೆಪಿ ಯೋಜನೆಗೆ ಎರಡು ಹಂತದಲ್ಲಿ 36 ಸಾವಿರ ಕೋಟಿ (ಪರಿಹಾರಕ್ಕೆ) ನೀಡಿ, ರೈತರಿಗೆ ಯೋಗ್ಯ ಪರಿಹಾರ ನೀಡಬೇಕು. ಯೋಗ್ಯ ಪರಿಹಾರ ಕೊಟ್ಟಾಗ, ರೈತರು ಭೂಮಿ ಕೊಡುತ್ತಾರೆ. ಭೂಮಿ ಕೊಟ್ಟರೆ ಯೋಜನೆ ಪೂರ್ಣಗೊಳ್ಳುತ್ತದೆ. ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎಂಬುದು ಹೋರಾಟಗಾರರ ಒತ್ತಾಯ.
ನಮ್ಮ ಸರ್ಕಾರದ ಅವಧಿಯಲ್ಲೇ ಯುಕೆಪಿ ಯೋಜನೆ ಪೂರ್ಣಗೊಳಿಸುವುದು ನಮ್ಮ ಆದ್ಯತೆ. ರೈತರು ಕೇಳುವ ವಾಸ್ತವ
ಮಾರುಕಟ್ಟೆ ಬೆಲೆಗೆ ನಾಲ್ಕುಪಟ್ಟು ಪರಿಹಾರ ನೀಡುವುದು ಕಷ್ಟ. ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲಾಗುತ್ತದೆ.
ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ
ಯುಕೆಪಿ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಪರಿಹಾರ ದೊರೆಯಲೇಬೇಕು. ವಾಸ್ತವ ಬೆಲೆಯ ನಾಲ್ಕು ಪಟ್ಟು ಪರಿಹಾರ ಯಾರೂ ಕೇಳುತ್ತಿಲ್ಲ. ಖುಷ್ಕಿ ಭೂಮಿಗೆ 30 ಲಕ್ಷ, ನೀರಾವರಿಗೆ 40 ಲಕ್ಷ ಬೆಲೆ ನಿಗದಿ ಮಾಡಬೇಕು ಎಂಬ ಒತ್ತಾಯಕ್ಕೆ ನಾನು ಈಗಲೂ ಬದ್ಧನಿದ್ದೇನೆ. ಈ ಕುರಿತು ಅಧಿವೇಶನದ ವೇಳೆ ಪ್ರಸ್ತಾಪಿಸುತ್ತೇನೆ.
ಮುರುಗೇಶ ನಿರಾಣಿ
ಬೀಳಗಿ ಶಾಸಕ
ರೈತರಿಗೆ ಯೋಗ್ಯ ಪರಿಹಾರ ನೀಡದಿದ್ದರೆ ಅವರ ಬದುಕು ಬೀದಿಗೆ ಬರಲಿದೆ. ಹೊಸ ಕಾಯ್ದೆ ಪ್ರಕಾರ ಒಂದು ಎಕರೆ ಭೂಮಿಗೆ ಕೇವಲ 6ರಿಂದ 8 ಲಕ್ಷ ಪರಿಹಾರ ದೊರೆಯುತ್ತಿದೆ. ಈ ಪರಿಹಾರದಲ್ಲಿ ಒಂದು ಎಕರೆ ಭೂಮಿ ಖರೀದಿಸಲೂ ಸಾಧ್ಯವಿಲ್ಲ. ಒಟ್ಟು 1.23 ಲಕ್ಷ ಎಕರೆ ಭೂಮಿಗೆ ಕಾಯ್ದೆ ಪ್ರಕಾರ 12 ಸಾವಿರ ಕೋಟಿ, ಮಾರುಕಟ್ಟೆ ಬೆಲೆಯ ಪ್ರಕಾರ 36 ಸಾವಿರ ಕೋಟಿ ಅಂದಾಜು ಪರಿಹಾರ ಬೇಕಾಗುತ್ತದೆ. ಎರಡು ಹಂತದಲ್ಲಿ ವಾಸ್ತವದ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಈ ಬಜೆಟ್ನಲ್ಲಿ ಗರಿಷ್ಠ ಅನುದಾನ ನಿಗದಿ ಮಾಡಬೇಕು.
ಪ್ರಕಾಶ ಅಂತರಗೊಂಡ
ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡ
ಎಸ್.ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ