ಎಂ.ಬಿ.ಪಾಟೀಲರಂತಹ ಹತ್ತು ಜನ ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ: ಯತ್ನಾಳ
Team Udayavani, Dec 4, 2022, 5:33 PM IST
ವಿಜಯಪುರ : ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ನನ್ನನ್ನು ಸೋಲಿಸುವ ಭ್ರಮೆಯಲ್ಲಿದ್ದಾರೆ. ಅವರನ್ನೇ ಸೋಲಿಸಲು ಜಿಲ್ಲೆಯಲ್ಲಿ ಅವರದೇ ಕಾಂಗ್ರೆಸ್ ಪಕ್ಷದ ಇಬ್ಬರು ಹಾಲಿ ಶಾಸಕರು ಹಾಗೂ ಓರ್ವ ಮಾಜಿ ಶಾಸಕ ತಂತ್ರ ನಡೆಸಿದ್ದಾರೆ. ಹೀಗಾಗಿ ಎಂ.ಬಿ.ಪಾಟೀಲ ಮೊದಲು ತಮ್ಮ ಸುರಕ್ಷೆ ಮಾಡಿಕೊಳ್ಳಲಿ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಅವರು ಎಂ.ಬಿ.ಪಾಟೀಲ ಅವರಿಗೆ ತಿರುಗೇಟು ನೀಡಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರನ್ನು ಸೋಲಿಸುವ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುವುದಾಗಿ ಎಂ.ಬಿ.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿರುವ ಯತ್ನಾಳ, ನನ್ನನ್ನು ಸೋಲಿಸುವುದು ನನ್ನ ಕ್ಷೇತ್ರದ ಮತದಾರರು ತೀರ್ಮಾನಿಸುತ್ತಾರೆ ಹೊರತು ಎಂ.ಬಿ.ಪಾಟೀಲ ಅಲ್ಲ, ಇಂತಹ ಹತ್ತು ಎಂ.ಬಿ.ಪಾಟೀಲರು ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕುಟುಕಿದರು.
ಬ್ರೋಕರ್ ಸ್ವಾಮಿಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ : ಶಾಸಕ ಯತ್ನಾಳ ಎಚ್ಚರಿಕೆ
ವಿಜಯಪುರ : ಪಂಚಮಸಾಲಿ ಸಮುದಾಯದ ಹೆಸರಿನಲ್ಲಿ ಮಂತ್ರಿ ಸ್ಥಾನ ಕೊಡಿಸುವುದಾಗಿ ಲಾಬಿ ಮಾಡುವ ಹರಿಹರ ಪೀಠದ ವಚನಾನಂದಸ್ವಾಮಿ ಕೋಟಿ ಕೋಟಿ ಹಣ ಪೀಕುವ ಬ್ರೋಕರ್. ಇಂಥ ಬ್ರೋಕರ್ ಸ್ವಾಮಿಗಳ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಛಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಪಂಚಸಾಲಿ ಹೆಸರಿನಲ್ಲಿ ವಚನಾನಂದ ಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದು ತಮ್ಮನ್ನು ಜೋಕರ್ ಎಂದು ಜರಿದುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡುವ ವಿಚಾರದಲ್ಲಿ ಹರಿಹರದ ವಚನಾನಂದಸ್ವಾಮಿ ಮಂತ್ರಿ ಸ್ಥಾನ ಕೊಡಿಸಲು ಬಹಿರಂಗವಾಗಿಯೇ ಬ್ರೋಕರ್ ಕೆಲಸ ಮಾಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಂದ ಹರಿಹರ ಶ್ರೀಗಳು 10 ಕೋಟಿ ವಸೂಲಿ ಮಾಡಿದ್ದಾರೆ. ಅಲ್ಲದೇ ಹರಿಹರ ಪೀಠದಲ್ಲೂ ಭಾರಿ ಅವ್ಯವಹಾರ ಮಾಡಿದ್ದಾರೆ. ಇಂಥ ಎಲ್ಲ ವಿಷಯಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇನೆ ಎಂದರು.
ಸಮಾಜವನ್ನು ತನ್ನ ಕಪಿಮುಷ್ಠಿಯಲ್ಲಿ ಇರಿಸಿಕೊಳ್ಳುವ ಉದ್ದೇಶದಿಂದ ಸಚಿವನೊಬ್ಬ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದಾರೆ. ಮಠ ಕಟ್ಟಿದ್ದು ಪಂಚಮಸಾಲಿ ಸಮಾಜದ ಉದ್ದಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ. ಯಾರು, ಯಾರ ಬೆನ್ನಿಗೇ ಚೂರು ಹಾಕಿದರು, ಯಾವ ಮಠ ಕಟ್ಟಿದ್ದಾರೆ, ಯಾಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಸಚಿವ ಮುರುಗೇಶ ನಿರಾಣಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗೋವಾಕ್ಕೆ ಮುಂದಿನ ಆರು ತಿಂಗಳು ನಿರ್ಣಾಯಕ: ಸಚಿವ ರೋಹನ್ ಖಂವಟೆ