ಸಾಲದ ಋಣ ಭಾರದಲ್ಲಿದೆ ಭೀಮಾಶಂಕರ ಸಕ್ಕರೆ ಕಾರ್ಖಾನೆ
Team Udayavani, Dec 27, 2021, 4:58 PM IST
ಇಂಡಿ: ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಸಾಕಷ್ಟು ಕಷ್ಟ, ಕಾರ್ಪಣ್ಯಗಳನ್ನು ಅನುಭವಿಸಿದ್ದೇನೆ. ಈಗ ಸಕ್ಕರೆ ಉದ್ದಿಮೆ ಹಿಂದಿನಂತೆ ಲಾಭಾಂಶದಲ್ಲಿ ಇಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆ ಸಾಲದ ಋಣ ಭಾರದಲ್ಲಿದೆ ಎಂದು ಕಾರ್ಖಾನೆ ಅಧ್ಯಕ್ಷ, ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಹೇಳಿದರು.
ತಾಲೂಕಿನಮರಗೂರ ಗ್ರಾಮದ ಸಮೀಪವಿರುವಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 2020-21ನೇ ಸಾಲಿನ 3ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಮ್ಮ ಪೂರ್ವಜರ ಕನಸಾಗಿತ್ತು. ಕಳೆದ ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದ ಕಾರ್ಖಾನೆಗೆ ನಾನು ಶಾಸಕನಾದ ಮೇಲೆ ಹೆಚ್ಚಿನ ಕಾಳಜಿವಹಿಸಿ ಸಿಂದಗಿ, ಇಂಡಿ ಭಾಗದ ರೈತರ ಆಸ್ತಿಯನ್ನಾಗಿ ಮಾಡಿರುವೆ ಎಂದರು.
ಇಂದು ಸಹಕಾರಿ ಸಕ್ಕರೆ ಕಾರ್ಖಾನೆ ಸಾಕಷ್ಟು ಸಾಲದ ಋಣ ಭಾರದಲ್ಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಕ್ಕರೆ ಉದ್ದಿಮೆ ಹಿಂದಿನಂತೆ ಇಂದು ಲಾಭಾಂಶದಲ್ಲಿ ಇಲ್ಲ. ನಂದಿ ಸಕ್ಕರೆಕಾರ್ಖಾನೆ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರ ಪರಿಕಲ್ಪನೆಯಿಂದ ಭೀಮಾ ದಡದ ಭಾಗದಲ್ಲಿ ಇದು ಕೂಡಾ ರೈತರಿಗೆ ಮುಕುಟ ಪ್ರಾಯವಾಗಿ ಬೆಳೆಯಲಿ. ಪೂರ್ವಜರ ಕನಸು ಸಹಕಾರಗೊಳ್ಳಲಿ ಎಂಬ ಸದಾಶಯದಿಂದ ಕಾರ್ಯಾರಂಭ ಮಾಡಲಾಗಿದೆ ಎಂದರು.
ಸಾಲದ ಸುಳಿಯಲ್ಲಿದ್ದರೂ ಸಹಕಾರಿ ಸಕ್ಕರೆ ಕಾರ್ಖಾನೆ ಈ ಭಾಗದ ಜನರ ಆಶೋತ್ತರ ಈಡೇರಿಸುವಲ್ಲಿ ಶ್ರಮಿಸುತ್ತಿದೆ. ರೈತರು ಸಾಕಷ್ಟು ಕಷ್ಟ ನಷ್ಟಗಳ ಮಧ್ಯ ಶ್ರಮದಿಂದ ಕಬ್ಬು ಬೆಳೆಯುತ್ತಾರೆ. ತೂಕದಲ್ಲಿ ಮೋಸ ಮಾಡಿದರೆ ತಂದೆ-ತಾಯಿಗಳಿಗೆ ಮೋಸ ಮಾಡಿದಂತಾಗುತ್ತದೆ. ನಮ್ಮಕಾರ್ಖಾನೆಯಲ್ಲಿ ತೂಕದಲ್ಲಿ ಮೋಸವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಖಾನೆ ಮೇಲೆ ಈಗ300 ಕೋಟಿರೂ. ಸಾಲ ಇದೆ. ಪ್ರತಿ ಮಾರ್ಚ್ನಲ್ಲಿ 65 ರಿಂದ70 ಲಕ್ಷ ರೂ. ಕಂತು ಬಡ್ಡಿ ಸಮೇತ ಕಟ್ಟಲಾಗುತ್ತಿದೆ. ತಾಲೂಕಿನ ಹಿರೇಬೇವನೂರ ಗ್ರಾಮದ ಶಿವುಕುಮಾರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ಇದಕ್ಕೆ ಕಾರಣ ಸರಕಾರ ನಿರ್ಧರಿಸಿರುವ ಎಫ್ಆರ್ಪಿ, ಎಸ್ಎಪಿ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಒಂದೇ ನಿಯಮ ಮಾಡಿರುವುದರಿಂದ ಸಕ್ಕರೆ ಕಾರ್ಖಾನೆಗಳು ಸಾಲದಲ್ಲಿ ಸಿಲುಕಿಕೊಂಡಿವೆ. ಇಂತಹ ಅವೈಜ್ಞಾನಿಕ ನೀತಿ ಕೈ ಬೀಡಬೇಕು ಎಂದು ಕೇಂದ್ರ ಸಹಕಾರಿ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರ ಯಥೇನಾಲ್, ಡಿಸ್ಲೇರಿ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿದೆ. ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿರ್ದೇಶಕರಾದ ಎಂ.ಆರ್. ಪಾಟೀಲ, ದಾನಮ್ಮಗೌಡತಿ ಬಿರಾದಾರ, ಜೆಟ್ಟೆಪ್ಪ ರವಳಿ, ಬಿ.ಎಂ. ಕೋರೆ, ಅಶೋಕ ಗಜಾಕೋಶ, ಸುರೇಶಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಮಹಾದೇವ ನಾಗರೆ, ಲಲಿತಾ ನಡಗೇರಿ, ಅರ್ಜುನ ನಾಯ್ದೊಡಿ, ಉಪನಿಬಂಧಕ ಚಿದಾನಂದ ನಿಂಬಾಳ ವೇದಿಕೆಯಲ್ಲಿದ್ದರು.