ಶತಮಾನ ಕಂಡ ಚಡಚಣ ಸಹಕಾರಿಗೆ ಚುನಾವಣೆ!
109ನೇ ವರ್ಷಕ್ಕೆಕಾಲಿಟ್ಟಚಡಚಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ
Team Udayavani, Jan 18, 2020, 1:15 PM IST
ಚಡಚಣ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಚಡಚಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 109 ವರ್ಷ ಗತಿಸಿದರೂ ಇಲ್ಲಿಯವರೆಗೆ ನಡೆದ ಚುವಾವಣೆ ಮಾತ್ರ ಒಂದು ಬಾರಿ. ಎರಡನೇ ಚುನಾವಣೆಗೆ ಸಿದ್ಧವಾಗಿದೆ ಚಡಚಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.
ಸಂಘದ ಹಾಲಿ ಅಧ್ಯಕ್ಷ ಬಾಬುಗೌಡ ಪಾಟೀಲ ಈ ಕುರಿತು ಪ್ರತಿಕ್ರಿಯೆ ನೀಡಿ, ಶತಮಾನ ಕಂಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಚುನಾವಣೆ ನಡೆದಿರಲಿಲ್ಲ. ಪ್ರಾರಂಭವಾಗಿ 109 ವರ್ಷ ಗತಿಸಿದರೂ ಇಲ್ಲಿಯವರೆಗೆ ಸರ್ವ ಸದಸ್ಯರು ಅವಿರೋಧ ಆಯ್ಕೆ ಆಗುತ್ತಾ ಬಂದಿದ್ದರು. 45 ವರ್ಷಗಳ ಹಿಂದೆ ಒಮ್ಮೆ ಚುನಾವಣೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಅದರಿಂದ ಈ ಬಾರಿ ನಡೆಯುವ ಚುನಾವಣೆ ಎರಡನೇ ಬಾರಿ ಆಗಿದೆ. ಚುನಾವಣೆ ನಡೆಯುವುದರಿಂದ, ಖರ್ಚು ವೆಚ್ಚ ಸಂಘಕ್ಕೆ ಹೊರೆ ಎಂದರು.
ಜ.19ಕ್ಕೆ ಚುನಾವಣೆ: ಪಟ್ಟಣದ ಪ್ರಾಥಮಿಕ ಕೃಷಿ
ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗಾಗಿ ಜ.19ರಂದು ಚುನಾವಣೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯುವ ಕೊನೆ ದಿನ ಜ.13ರಂದು 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ ಸ್ಥಾನಗಳಿಗೆ ಜ.19ರಂದು ಚುನಾವಣೆ ನಡೆಯಲಿದೆ ಎಂದು ರಿಟರ್ನಿಂಗ್ ಅಧಿಕಾರಿ ಮಹಾದೇವ ಪಾಂಡ್ರೆ ತಿಳಿಸಿದ್ದಾರೆ.
ಒಟ್ಟು 12 ಸ್ಥಾನಗಳಲ್ಲಿ 5 ಸಾಮಾನ್ಯ ಕ್ಷೇತ್ರಗಳು ಹಾಗೂ 1
ಪ.ಜಾ ಮೀಸಲು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಸಾಮಾನ್ಯ ಕ್ಷೇತ್ರಕ್ಕೆ ಹಾಲಿ ಅಧ್ಯಕ್ಷ ಬಾಬುಗೌಡ ಪಾಟೀಲ, ದುಂಡಪ್ಪ ನಿರಾಳೆ, ಶೆಟ್ಟೆಪ್ಪ ತಳವಾರ, ಮಹಾದೇವ ಮೇಲ್ಮಳ, ಏಕನಾಥ ಕಟ್ಟಿ ಹಾಗೂ ಪ.ಜಾ ಸ್ತಾನಕ್ಕೆ ಜಟ್ಟೆಪ್ಪ ಬನಸೋಡೆ ಅವಿರೋಧ ಆಯ್ಕೆಯಾಗಿದ್ದಾರೆ.
ಹಿಂದುಳಿದ ಅ.ವರ್ಗಕ್ಕೆ ಬಾಬುಲಾಲ ಕೊಂಕಣಿ, ಲಾಲಸಾಬ್ ಅತ್ತಾರ ಹಾಗೂ ಅಣ್ಣಪ್ಪ ಪೂಜಾರಿ, ಮಹಿಳಾ ಮೀಸಲು ಕ್ಷೇತ್ರಕ್ಕೆ ಧಾನಮ್ಮ ಬಡಿಗೇರ, ಮಂದಾಗಿನಿ ಹೊನಮೋರೆ, ಸಾವಿತ್ರಿ ಪವಾರ ಹಾಗೂ ಬಿನ್ ಸಾಲಗಾರರ ಕ್ಷೇತ್ರಕ್ಕೆ ಅಣ್ಣಯ್ಯ ಹಿರೇಮಠ ಹಾಗೂ ರಾಜಶೇಖರ ಡೋಣಗಾಂವ ಕಣದಲ್ಲಿದ್ದು, ಜ.19 ರ ಬೆಳಗ್ಗೆ 9 ರಿಂದ ಸಂಜೆ 4ವರೆಗೆ ಚುನಾವಣೆ ನಂತರ ಅಲ್ಲಿಯೇ ಮತ ಎಣಿಕೆ ನಡೆಯಲಿದೆ ಎಂದು ರಿಟರ್ನಿಂಗ್ ಅಧಿಕಾರಿ ಮಹಾದೇವ ಪಾಂಡ್ರೆ ತಿಳಿಸಿದ್ದಾರೆ.