ಬೂದಿಹಾಳ-ವೀರಾಪುರ ಏತ ನೀರಾವರಿ ಕಾಮಗಾರಿಗೆ ಸಿಎಂ ಬೊಮ್ಮಾಯಿ ಚಾಲನೆ
Team Udayavani, Apr 26, 2022, 12:37 PM IST
ವಿಜಯಪುರ: ಮಳೆ ಆಶ್ರಿತ ವಿಜಯಪುರ ಜಿಲ್ಲೆಯ ತಾಳಿಕೋಟೆ, ದೇವರಹಿಪ್ಪರಗಿ ಭಾಗದ 38 ಹಳ್ಳಿಗಳಿಗೆ ಕೃಷ್ಣಾ ನಿದಿ ನೀರು ಹರಿಸುವ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಮೊದಲ ಹಂತದ ಪೈಪ್ ವಿತರಣಾ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಮಂಗಳವಾರ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೂದಿಹಾಳ- ವೀರಾಪುರ ಏತ ನೀರಾವರಿ ಯೋಜನೆಯ ಪೈಪ್ ವಿತರಣಾ ಕಾಮಗಾರಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ತಾಳಿಕೋಟೆ, ದೇವರಹಿಪ್ಪರಗಿ ತಾಲೂಕಗಳ ಮಳೆ ಆಸ್ರಿತ 38 ಗ್ರಾಮಗಳ 50 ಸಾವಿರ ಎಕರೆ ಪ್ರದೇಶ ನೀರಾವರಿ ಯೋಜನೆಗೆ ಒಳಪಡುವ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ಮೊದಲ ಹಂತರ ಕಾಮಗಾರಿ ಉದ್ಘಾಟನೆ ಹಾಗೂ ಎರಡನೇ ಹಂತತ ಕಾಮಗಾರಿಗೆ ಶಂಕುಸ್ಥಾಪನೆಗಾಗಿ ಭೂಮಿಪೂಜೆ ನೆರವೇರಿಸಿದರು.
ಇದನ್ನೂ ಓದಿ:ಆಹಾರ-ವ್ಯವಹಾರ,ಹಣ ಗಳಿಕೆಯ ಜೀವನ ಕ್ರಮದಿಂದ ಆರೋಗ್ಯ ಅಪಾಯದಲ್ಲಿದೆ: ಸ್ಪೀಕರ್ ಕಾಗೇರಿ
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬಳ್ಳಾರಿಯ ಜಿಂದಾಲ್ ಮಾರ್ಗವಾಗಿ 11.30 ಕ್ಕೆ ಕೊಡಗಾನೂರ ಗ್ರಾಮಕ್ಕೆ ಆಗಮಿಸಿದ ಬೊಮ್ಮಾಯಿ ಅವರು, ಕೃಷ್ಣಾ ಭಾಗ್ಯ ಜಲ ನಿಗಮದಿಂದ 796 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಂಸದ ರಮೇಶ ಜಿಗಜಿಣಗಿ, ಜಿಲ್ಲೆಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಪಿ.ಎಚ್.ಪೂಜಾರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ವಿ.ಬಿ.ದಾನ ಮ್ಮನವರ, ಜಿ.ಪಂ. ಸಿಇಒ ರಾಹುಲ ಶಿಂಧೆ, ಎಸ್ಪಿ ಆನಂದಕುಮಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.