ಸಮನ್ವಯತೆ ಬೀಡಾಗಲಿ ಉತ್ಸವ
Team Udayavani, Jan 29, 2018, 2:43 PM IST
ನಾಲತವಾಡ: ಜಾನಪದ ಸಂಸ್ಕೃತಿಯ ಅಳಿವು ಹಾಗೂ ಉಳಿವು ಕನ್ನಡ ಭಾಷೆಯನ್ನು ಅವಲಂಬಿಸಿದೆ. ನಾಡಿನಲ್ಲಿ ಕನ್ನಡಾಭಿಮಾನದ ಕೊರತೆಯಿಂದ ಈಚೆಗೆ ಗ್ರಾಮೀಣ ಭಾಗದಲ್ಲಿ ಜಾನಪದ ಕಲಾವಿದರನ್ನು ಗುರುತಿಸಲು
ಸಾಧ್ಯವಾಗುತ್ತಿಲ್ಲ ಎಂದು ಬೆಳಗಾವಿಯ ಜಾನಪದ ವಿದ್ವಾಂಸ ಜ್ಯೋತಿರ್ಲಿಂಗ ಹೊನಕಟ್ಟಿ ಹೇಳಿದರು.
ಅಯ್ಯನಗುಡಿಯಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಹೇಮರಡ್ಡಿ ಮಲ್ಲಮ್ಮ ಯುವಕ ಸಂಘದಡಿ ಹಮ್ಮಿಕೊಂಡಿದ್ದ ಅಯ್ಯನಗುಡಿ ಉತ್ಸವದಲ್ಲಿ ದಿ| ಶಂಕರರಾವ್ ನಾಡಗೌಡ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲೇ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಪ್ರತಿ ಕನ್ನಡ ಅಕ್ಷರದಲ್ಲೂ ಜಾನಪದ ಸೊಗಡು ಅಡಗಿದೆ.
ಬಲದಿನ್ನಿ ಧಣಿಗಳು ನಶಿಸುವ ಜಾನಪದ ಕಲೆಯನ್ನು ಅಯ್ಯನಗುಡಿ ಉತ್ಸವ ಆಚರಿಸುವ ಮೂಲಕ ಜೀವಂತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಅಯ್ಯನಗುಡಿ ಉತ್ಸವ ಸರ್ವ ಧರ್ಮಗಳ ಸಮನ್ವಯತೆ ಬೀಡು ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮುನ್ನಾ ನಾಡಗೌಡ, ಡಾ| ಬಲವಂತ ಉಣ್ಣಿಭಾವಿ ಮಾತನಾಡಿದರು.
ಕಲೆ ಪ್ರದರ್ಶನ: ಸಂಗೀತಗಾರ ಯಶು ಬಸಪ್ಪ ಪ್ರಸ್ತುತ ಪಡಿಸಿದ ಗೀತೆಗಳು ಮನ ರಂಜಿಸಿದವು. ಸೊಲ್ಲಾಪುರ ಜೈಭವಾನಿ ಗೊಂದಳಿ ಸಂಘದ ಸಾಗರ ಮಾನೆ ತಂಡದ ಗೊಂದಲಿಗರ ಹಾಡುಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಾಲೆ ಮಕ್ಕಳ ಭರತ ನಾಟ್ಯ, ಬಲದಿನ್ನಿಯ ಮಾರುತೇಶ್ವರ ಸಂಘದಿಂದ ಭಜನೆ, ನಾಲತವಾಡದ ಹನುಮಂತ
ಗೊಂದಳೆ ಅವರ ಹಂತಿ ಪದಗಳು, ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳ ಹಂತಿ ಪದಗಳು ಮನಸೊರೆಗೊಂಡವು.
ಸನ್ಮಾನ: ಜಾನಪದ ವಿದ್ವಾಂಸ, ಜ್ಯೋರ್ತಿಲಿಂಗ ಹೊನಕಟ್ಟಿ, ಹಿರಿಯ ಪತ್ರಕರ್ತ ಡಿ.ಬಿ. ವಡವಡಗಿ, ಶಂಕರ ಹೆಬ್ಟಾಳ ಸೇರಿದಂತೆ ಮಾದ್ಯಮ, ಜಾನಪದ, ಕ್ರೀಡೆ, ಕಲೆ, ಭಜನಾ, ಹಂತಿ, ಗೊಂದಳಿ, ಭರತನಾಟ್ಯ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಕಳಸೋತ್ಸವದಲ್ಲಿ 18ಕ್ಕೂ ಹೆಚ್ಚು ಸ್ತಬ್ದ ಚಿತ್ರ ಸಿದ್ಧಗೊಳಿಸಿದ ನಾಲತವಾಡ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಬಹುಮಾನ ವಿತರಿಸಲಾಯಿತು.
ಪಪಂ ಅಧ್ಯಕ್ಷ ಪೃಥ್ವಿರಾಜ್ ನಾಡಗೌಡ, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಮಂಕಣಿ, ಉಪಾಧ್ಯಕ್ಷ ಶರಣಗೌಡ ಬಿರಾದಾರ, ರಾಯನಗೌಡ ತಾತರಡ್ಡಿ, ಡಾ| ಬಲವಂತ ಉಣ್ಣಿಬಾವಿ ಇದ್ದರು.