ಕೋವಿಡ್ ಮುಕ್ತಗೊಳಿಸಲು ಬಿಜೆಪಿ ಸಂಕಲ್ಪ
Team Udayavani, Jun 1, 2021, 12:00 PM IST
ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 15 ದಿನಗಳೊಳಗೆ ಕೋವಿಡ್ ಮುಕ್ತವನ್ನಾಗಿಸಲುಬಿಜೆಪಿ ಪಣ ತೊಟ್ಟಿದ್ದು, ಪ್ರತಿ ಮನೆಗೂ ಮಾಸ್ಕ್ಗಳನ್ನು ವಿತರಣೆ ಮಾಡಿ, ಜನರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿ ಚಿಕಿತ್ಸೆ ಕೊಡಿಸಿ ಸಮರೋಪಾದಿಯಲ್ಲಿ ಕೆಲಸ ಮಾಡೋಣ ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಹೇಳಿದರು.
ತಾಲೂಕಿನ ಅಮಚವಾಡಿ ಹಾಗೂ ಅರಕಲವಾಡಿ ಗ್ರಾಪಂ ಕೇಂದ್ರಗಳಲ್ಲಿ ಮನೆ ಮನೆಗೆ ಮಾಸ್ಕ್ ಹಂಚುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಾ.ನಗರ ಕ್ಷೇತ್ರಾದ್ಯಂತ ಕಳೆದ 2 ತಿಂಗಳಿಂದ ಸತತವಾಗಿ ಪ್ರವಾಸ ಮಾಡುತ್ತಿದ್ದು, ಗ್ರಾಮಾಂತರ ಪ್ರದೇಶ ಜನರಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಪ್ರತಿ ಮನೆ ಮನೆಗೂ ಮಾಸ್ಕ್ಗಳನ್ನು ತಲುಪಿಸಿ, ಕೊರೊನಾದಿಂದ ಮುಕ್ತಿ ಪಡೆಯುವಂತೆ ತಿಳಿವಳಿಕೆ ಮೂಡಿಸುವ ಅಭಿಯಾನಕ್ಕೆ ಚಾಲನೆ ಮಾಡಲಾಗಿದೆ. ಪ್ರತಿ ಗ್ರಾಮಗಳಲ್ಲಿ ಕೊರಾನಾ ವಾರಿಯರ್ಸ್ ಆಗಿ ಓಡಾಡುವ ಗ್ರಾಪಂ ಸದಸ್ಯರು ಮತ್ತು ಯುವಕರಿಗೆ ಎನ್ 95 ಮಾಸ್ಕ್ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಬಟ್ಟೆ ಮಾಸ್ಕ್ ವಿತರಿಸಲಾಗುತ್ತಿದೆ. ಪ್ರತಿ ಪಂಚಾಯಿತಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಮತ್ತು ಸ್ವಯಂ ಸೇವಕರ ಮುಖಾಂತರ ಮಾಸ್ಕ್ಗಳನ್ನು ಮನೆ ಮನೆಗೆ ಹಂಚಿಕೆ ಮಾಡಲಾಗುವುದು. ಅದೇ ರೀತಿ ಪಂಚಾಯಿತಿಯನ್ನುಕೋವಿಡ್ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್. ಸುಂದರ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲಾದ್ಯಂತ ಬಿಜೆಪಿ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಕೊರೊನಾ ವಿರುದ್ಧ ಸೇವಾಹಿ ಸಂಘಟನಾ ಮೂಲಕ ಅನೇಕ ಕಾರ್ಯಕ್ರಮಗಳನ್ನು ಜೋಡಣೆ ಮಾಡಿ, ಯಶಸ್ವಿಗೊಳಿಸಿದ್ದಾರೆ ಎಂದರು.
ಅಭಿಯಾನದಲ್ಲಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೊತ್ತಲವಾಡಿ ಕುಮಾರ್, ಮಂಡಲದ ಅಧ್ಯಕ್ಷ ಎನ್.ಜಿ. ಪ್ರಶಾಂತ್, ಕಾರ್ಯದರ್ಶಿ ಅರಕವಾಡಿ ಮಹದೇವಸ್ವಾಮಿ, ಬಿಸಲವಾಡಿ ಬಸವರಾಜು, ಅಮಚವಾಡಿ ಗ್ರಾಪಂ ಅಧ್ಯಕ್ಷ ಮಹೇಂದ್ರ, ಅರಕಲವಾಡಿ ಗ್ರಾಪಂ ಅಧ್ಯಕ್ಷ ನಾಗೇಂದ್ರ ಉಪಾಧ್ಯಕ್ಷ ಮಹದೇವಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.