ಬೆಳಕಿನ ಹಬ್ಬಕ್ಕೆ ಕೋವಿಡ್ ಕರಿನೆರಳು
ಕೆಜಿ ಚೆಂಡು ಹೂವು 100 ರಿಂದ 300ರೂ. ವರೆಗೂ ಮಾರಾಟ
Team Udayavani, Nov 15, 2020, 4:36 PM IST
ಮುದ್ದೇಬಿಹಾಳ: ಕೋವಿಡ್ ಸಂಕಷ್ಟದ ನಡುವೆ ಬಂದಿರುವ ಹಿಂದುಗಳ ದೊಡ್ಡ ಹಬ್ಬ ದೀಪಾವಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜೊತೆಗೆ ಆರ್ಥಿಕ ಸಂಕಷ್ಟ ಬಡವರನ್ನು ಹೈರಾಣು ಮಾಡಿದೆ. ಆದರೆ ಕೋವಿಡ್ ದಿಂದಾದ ಆರ್ಥಿಕ ನಷ್ಟ ಭರ್ತಿ ಮಾಡಿಕೊಳ್ಳಲು ಸಣ್ಣ, ದೊಡ್ಡ ವ್ಯಾಪಾರಸ್ಥರು ತಮ್ಮ ಖಜಾನೆ ತುಂಬಿಕೊಳ್ಳುವ ಧಾವಂತದಲ್ಲಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ದೀಪಾವಳಿ ಬಡವರ ಸಂಭ್ರಮಕ್ಕೆ ತಣ್ಣೀರು ಎರಚಿದ್ದು ಇಲ್ಲೆಲ್ಲ ಎದ್ದು ಕಾಣುತ್ತಿದೆ. ಲಕ್ಷ್ಮೀ ಪೂಜೆಗೆ, ಪಾಡ್ಯಕ್ಕೆ, ಮನೆ ಅಲಂಕರಿಸಲು ಅಗತ್ಯ ಎನ್ನಿಸಿಕೊಂಡಿರುವ ಚೆಂಡು ಹೂವು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಕಳೆದ ವರ್ಷ ಕೆಜಿಗೆ 30-40 ರೂ. ಇದ್ದ ಚೆಂಡು ಹೂವಿನ ದರ ಈ ಬಾರಿ ಕೇಜಿಗೆ ಹೂವಿನ ಗಾತ್ರ, ಗುಣಮಟ್ಟಆಧರಿಸಿ 100 ರಿಂದ 300ವರೆಗೂ ಮಾರಾಟ ಮಾಡಲಾಗುತ್ತಿರುವುದು ಬಡವರಿಗೆ ಹೊರೆ ಎನ್ನಿಸಿಕೊಂಡಿದೆ.
ಈ ಬಾರಿ ಅತಿವೃಷ್ಟಿಯಿಂದಾಗಿ ಬಹಳಷ್ಟು ರೈತರು ಚೆಂಡು ಹೂವನ್ನು ಬೆಳೆದಿಲ್ಲ. ಇದರಿಂದಾಗಿ ಸಹಜವಾಗಿ ಉತ್ಪನ್ನ ಕಡಿಮೆ ಆಗಿರುವುದು ಬೇಡಿಕೆ ಹೆಚ್ಚಲು, ಬೆಲೆ ಏರಲು ಕಾರಣ ಎನ್ನಲಾಗುತ್ತಿದೆ. ರೈತರು ತಮ್ಮ ಹೊಲದಲ್ಲಿ ಬೆಳೆದ ಹೂವನ್ನು ಇಲ್ಲಿನಮಾರುಕಟ್ಟೆಗೆ ತಂದಾಗ ದಲ್ಲಾಳಿಗಳು ಅದನ್ನು ಸವಾಲು ಮಾಡುತ್ತಾರೆ. ಸವಾಲು ಕೂಗುವಾಗಲೇ ದಲ್ಲಾಳಿಗಳು ಬೆಲೆ ಏರಿಸುವುದು, ತಮ್ಮವರಲ್ಲೇ 4-5 ಜನರನ್ನು ಬಿಟ್ಟು ಹೆಚ್ಚಿನ ದರಕ್ಕೆ ಸವಾಲು ಕೂಗುವ ತಂತ್ರಗಾರಿಕೆ ಬಳಸುತ್ತಾರೆ. ಇದರಿಂದಾಗಿ ಕಿರುಕುಳ ಮಾರಾಟಗಾರರು ಅನಿವಾರ್ಯವಾಗಿ ಮೋಸ ಹೋಗಬೇಕಾಗುತ್ತದೆ. ತಾವು ಮೋಸ ಹೋಗಿ ಕಳೆದುಕೊಂಡ ಹಣವನ್ನು ಗ್ರಾಹಕರ ತಲೆಗೆ ಕಟ್ಟಿ ಲಾಭ ಮಾಡಿಕೊಳ್ಳುವ ತರಾತುರಿ ಅವರಲ್ಲಿ ಎದ್ದು ಕಾಣುತ್ತಿದೆ.
ಲಕ್ಷ್ಮೀ ಪೂಜೆಗೆ ಅಗತ್ಯವಾಗಿರುವ ಬಾಳೆ ಕಂಬ, ಕಬ್ಬಿನ ಜಲ್ಲೆ, ವಿವಿಧ ರೀತಿಯ ಹಣ್ಣು, ಕಾಯಿ, ನಿಂಬೆಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆಯಂತು ಗಾಬರಿ ಬೀಳಿಸುವಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದು ಶೇ. 50-60 ಏರಿಕೆಆಗಿರುವುದು ಬಡವರ ದೀಪಾವಳಿಗೆ ಮಂಕು ಕವಿಯುವಂತೆ ಮಾಡಿದೆ.
ಕಾಣದ ಉತ್ಸಾಹ: ಕೋವಿಡ್ ದಿಂದಾಗಿ ಕೆಲಸ ಇಲ್ಲದೆ ಸಂಕಷ್ಟಕ್ಕೀಡಾಗಿರುವ ಬಡ ಮತ್ತುಮಧ್ಯಮವರ್ಗದ ಜನರು ಈ ಬಾರಿ ಖರೀದಿಗೆ ನಿರುತ್ಸಾಹ ತೋರಿರುವುದರಿಂದ ಮಾರುಕಟ್ಟೆಯಲ್ಲಿ ಕಳೆದ ವರ್ಷಗಳಲ್ಲಿ ಕಂಡು ಬರುತ್ತಿದ್ದ ಜನಸಂದಣಿ ಈ ಬಾರಿ ಇಲ್ಲದಾಗಿದೆ. ಈ ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹವೂ ಕಂಡು ಬರುತ್ತಿಲ್ಲ. ಹೇಗೋ ದೀಪಾವಳಿಯನ್ನು ಆಚರಿಸಿದರಾಯಿತು ಎನ್ನುವ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿದೆ. ಪ್ರತಿ ವರ್ಷ ಇಲ್ಲಿನ ಬಸವೇಶ್ವರ ವೃತ್ತದಿಂದ ದ್ಯಾಮವ್ವನಕಟ್ಟೆಯವರೆಗಿನ ಮುಖ್ಯ ರಸ್ತೆ ವ್ಯಾಪಾರಿಗಳು, ಸಾರ್ವಜನಿಕರಿಂದ ತುಂಬಿ ಗಿಜಿಗುಡುತ್ತಿತ್ತು.
ಪೊಲೀಸರು ಟ್ರಾಫಿಕ್ ನಿಯಂತ್ರಿಸುವಲ್ಲಿ ಸಾಕಷ್ಟು ಹೆಣಗಾಡುತ್ತಿದ್ದರು. ಆದರೆ ಈ ಬಾರಿಅಂತಹ ಯಾವುದೇ ಗಿಜಿಗಿಜಿ, ಧಾವಂತ ಕಂಡು ಬರದಿರುವುದು ಪೊಲೀಸರ ಟ್ರಾಫಿಕ್ ನಿಯಂತ್ರಣದ ತಲೆನೋವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದಂತಾಗಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯ ಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮಾರಾಟದ ಭರಾಟೆ ಎಂದಿನಂತಿದ್ದರೂ ಜನರ ಕೊರತೆ ಅವರ ಮುಖದಲ್ಲೂ ಚಿಂತೆಯ ಗೆರೆಗಳನ್ನು ಮೂಡಿಸಿದ್ದು ಕಂಡು ಬಂತು.
ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ: ಕೋವಿಡ್ ದಿಂದ 3-4 ತಿಂಗಳು ವ್ಯಾಪಾರ ಇಲ್ಲದೆ ಬಟ್ಟೆ ಅಂಗಡಿಯವರು ಕಂಗಾಲಾಗಿದ್ದರು. ಹಬ್ಬದನೆಪದಲ್ಲಾದರೂ ಬಟ್ಟೆ ಖರೀದಿಗೆ ಜನ ಬರುತ್ತಾರೆಎನ್ನುವ ನಿರೀಕ್ಷೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಟ್ಟೆಬರೆ ತರಿಸಿ ಸ್ಟಾಕ್ ಇಟ್ಟುಕೊಂಡಿದ್ದರು. ಆದರೆ ಆರ್ಥಿಕ ಹೊಡೆತದಿಂದ ಕಂಗಾಲಾಗಿರುವ ಬಡ, ಮಧ್ಯಮ ವರ್ಗದವರು ಮೊದಲಿನಂತೆ ಬಟ್ಟೆ ಖರೀದಿಸಲು ಈ ಬಾರಿ ಹೆಚ್ಚಿನ ಉತ್ಸಾಹ ತೋರಿಸಿಲ್ಲ. ಹೀಗಾಗಿ ಎಲ್ಲೆಡೆ ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ ಎದ್ದು ಕಾಣುತ್ತಿತ್ತು. ಆದರೂ ಹಬ್ಬ ಆಚರಿಸಲೇಬೇಕು ಎನ್ನುವ ಧಾವಂತದಲ್ಲಿ ದುಡಿಯುವ ವರ್ಗದವರುತಮ್ಮ ಮಕ್ಕಳಿಗೆ ಬಟ್ಟೆ ಕೊಡಿಸಿ ಅವರ ಸಂಭ್ರಮದಲ್ಲಿ ತಮ್ಮ ಸಾರ್ಥಕತೆ ಕಂಡು ಕೊಳ್ಳುತ್ತಿರುವುದು ಅಲ್ಲಲ್ಲಿ ಕಂಡುಬಂತು.
ಮೊದಲೆಲ್ಲ ಖರೀದಿದಾರದಿಂದ ಗಿಜಿಗುಡುತ್ತಿದ್ದ ಬಟ್ಟೆ ಅಂಗಡಿಗಳು ಈ ಬಾರಿ ಮಾತ್ರ ಅಂಥ ಯಾವುದೇ ಒತ್ತಡ ಇಲ್ಲದೆ ವ್ಯಾಪಾರ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದರು. ಹೀಗಾಗಿ ಕೊಳ್ಳುವವರ ಕೊರತೆ ಇದ್ದ ಹಿನ್ನೆಲೆ ಕೊಳ್ಳುವವರ ಮೇಲೆಯೇ ಹೆಚ್ಚಿನ ಬೆಲೆಯ ಭಾರ ಹಾಕಿ ಲಾಭ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಕೆಲ ಅಂಗಡಿಕಾರರು ನೇರವಾಗಿ ಒಪ್ಪಿಕೊಂಡರೂ ಅದನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿತ್ತು.
ವ್ಯಾಪಾರ ಈ ಬಾರಿ ಶೇ. 50ರಷ್ಟು ಕುಸಿತ ಕಂಡಿದೆ. ಜನ ಆರ್ಥಿಕ ಸಂಕಷ್ಟದಿಂದಾಗಿ ಮೊದಲೆಲ್ಲ ಖರ್ಚು ಮಾಡುತ್ತಿದ್ದ ಹಣದಷ್ಟು ಅರ್ಧ ಹಣ ಖರ್ಚಿಗೆ ಮುಂದಾಗಿದ್ದಾರೆ. ಅಂದರೆ ಸಾವಿರ ರೂ. ಬಟ್ಟೆ ಖರೀದಿಸುತ್ತಿದ್ದವರು 500ಕ್ಕೆ ಖರೀದಿ ಸೀಮಿತಗೊಳಿಸಿದ್ದಾರೆ. ಈ ದೀಪಾವಳಿಯಲ್ಲಿ ವ್ಯಾಪಾರಸ್ಥರು ಕೋವಿಡ್ ದಿಂದಾಗಿ ಸಾಕಷ್ಟು ಹೊಡೆತ ಅನುಭವಿಸುವಂತಾಗಿದೆ. –ಅಶೋಕ ರೇವಡಿ, ಮಾಲೀಕರು, ಅಶೋಕ ಕ್ಲಾಥ್ ಸ್ಟೋರ್ಸ್, ಮುದ್ದೇಬಿಹಾಳ
ನಿರಂತರ ಮಳೆಯಿಂದಾಗಿ ಚೆಂಡು ಹೂವು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಇದ್ದಷ್ಟೇ ಮಾಲನ್ನು ಮಾರುಕಟ್ಟೆಗೆ ತಂದರೆ ದಲ್ಲಾಲಿಗಳ ಮೂಲಕ ಮಾರಾಟವಾಗಬೇಕು. ದಲ್ಲಾಳಿಗಳು ನಿಗದಿಪಡಿಸುವ ದರವೇ ಅಂತಿಮ. ಹೀಗಾಗಿ ಈ ಬಾರಿ ಹೂವಿನ ಬೆಲೆ ಗಗನಕ್ಕೇರಿದೆ. ನಮಗೂ ಲಾಭ, ದಲ್ಲಾಳಿಗಳಿಗೂ ಲಾಭ. –ಮಲ್ಲಪ್ಪ, ಢವಳಗಿ, ಚೆಂಡು ಹೂವು ಬೆಳೆದ ರೈತ
ಈ ಬಾರಿಯ ದೀಪಾವಳಿ ನಮ್ಮ ಪರಿಸ್ಥಿತಿ ಪರೀಕ್ಷಿಸುವಂತಿದೆ. ನಿತ್ಯ ದುಡಿದು ತಿನ್ನುವ ನಮಗೆ ಎಲ್ಲರಂತೆ ಖರೀದಿಸುವ ಶಕ್ತಿ ಇಲ್ಲ. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವಂತಾಗಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಹಬ್ಬ ಆಚರಿಸಬೇಕು ಎನ್ನುವುದನ್ನು ಅರಿತು ಕಷ್ಟದಲ್ಲೂ ಸಾಲ ಸೂಲ ಮಾಡಿ ಹಬ್ಬ ಆಚರಿಸುತ್ತಿದ್ದೇವೆ. –ತಿಮ್ಮಪ್ಪ ಬಿರಾದಾರ, ಗೌಂಡಿ ಕೆಲಸ ಮಾಡುವ ಕುಟುಂಬದ ಯಜಮಾನ
–ಡಿ.ಬಿ. ವಡವಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು