ಕೆಆರ್ ಎಸ್ ಜಲಾಶಯದಲ್ಲಿ ಬಿರುಕು ವಿಚಾರ ಕೇವಲ ಊಹಾಪೋಹ: ಸಚಿವ ನಿರಾಣಿ
Team Udayavani, Jul 8, 2021, 2:44 PM IST
ವಿಜಯಪುರ: ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯವು ಅಕ್ರಮ ಗಣಿಗಾರಿಕೆಯ ಕಾರಣದಿಂದ ಬಿರುಕು ಬಿಟ್ಟಿದೆ ಎನ್ನುವುದು ಕೇವಲ ಊಹಾಪೋಹ ಎಂದು ಗಣಿ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಲಾಶಯ ಬಿರುಕೂ ಬಿಟ್ಟಿಲ್ಲ, ಅಪಾಯದ ಸ್ಥಿತಿಯೂ ಇಲ್ಲ. ಈ ಕುರಿತು ಕೆಆರ್ ಎಸ್ ಮುಖ್ಯ ಅಭಿಯಂತರರ ಜೊತೆ ಮಾತನಾಡಿ, ಅಧಿಕೃತ ಮಾಹಿತಿ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಕುಮಾರಸ್ವಾಮಿ- ಸುಮಲತಾ ‘ಪದಬಳಕೆ’ಗೆ ಸಚಿವ ಈಶ್ವರಪ್ಪ ಅಸಮಾಧಾನ
ಸಚಿವನಾದ ಬಳಿಕ ನಾನೇ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜಲಾಶಯದ ಸುತ್ತಲಿನ ಹತ್ತು ಕಿ.ಮೀ. ಪ್ರದೇಶದಲ್ಲಿ ಕಳೆದ ನಾಲ್ಕು ತಿಂಗಳಿಂದ ಗಣಿಗಾರಿಕೆ ಸಂಪೂರ್ಣ ಸ್ಥಗಿತ ಮಾಡಲಾಗಿದೆ. ತಜ್ಞರ ವೈಜ್ಞಾನಿಕ ಸಮೀಕ್ಷೆಯ ಬಳಿಕ ಗಣಿಗಾರಿಕೆ ನಡೆಸಲಾಗುತ್ತದೆ ಎಂದು ವಿವರಿಸಿದರು.