ಜೆಡಿಎಸ್ ಸರ್ಕಾರ ಬಂದರೆ ಬೇಡಿಕೆ ಈಡೇರಿಕೆ: ದೇವೇಗೌಡ
Team Udayavani, Oct 14, 2021, 12:47 PM IST
ಇಂಡಿ: ಕಳೆದ ನಲವತ್ನಾಲ್ಕು ದಿನದಿಂದ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸದಿರುವುದು ದುರ್ದೈವದ ಸಂಗತಿ. ಈ ಸರ್ಕಾರಕ್ಕೆ ರೈತರ ಋಣ ತೀರಿಸುವ ಭಾಗ್ಯವಿಲ್ಲ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಮ್ಮ ಎಲ್ಲ ಬೇಡಿಕೆ ಈಡೀರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಾಲೂಕು ಸಮಗ್ರ ನೀರಾವರಿಗೆ ಆಗ್ರಹಿಸಿ ಮಿನಿ ವಿಧಾನಸೌಧ ಮುಂಭಾಗ ಜೆಡಿಎಸ್ ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ನಾನು ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ನಾನೂ ರೈತನ ಮಗನಾಗಿದ್ದು ನಿಮಗೆ ಸ್ಪೂರ್ತಿ ತುಂಬಲು ಬಂದಿದ್ದೇನೆ ಎಂದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ರಾಜ್ಯದ ರೈತರ 25 ಲಕ್ಷ ಕೋಟಿ ರೂ. ಮನ್ನಾ ಮಾಡಿದ್ದಾರೆ. ನಾವು ಯಾವಾಗಲೂ ರೈತರ ಪರವಾಗಿದ್ದೇವೆ. ಇಂಡಿ ಶಾಂತೇಶ್ವರ ದೇವತೆ ಮೇಲೆ ಪ್ರಮಾಣ ಮಾಡುವೆ, ಮುಂದೆ ಕುಮಾರಸ್ವಾಮಿ ಅಧಿಕಾರ ಹಿಡಿದರೆ ನಿಮ್ಮ ನೀರಾವರಿ ಯೋಜನೆಯ ಎಲ್ಲ ಬೇಡಿಕೆಗಳನ್ನು ಈಡೇರಿಸುವೆ ಎಂದು ಭರವೆ ನೀಡಿದರು. ನನ್ನನ್ನು ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಲು ದೇವೇಗೌಡರು ವೀರಶೈವ ಲಿಂಗಾಯತರ ವಿರೋಧಿಗಳು, ಉತ್ತರ ಕರ್ನಾಟಕದ ವಿರೋಧಿಗಳು ಎಂದು ಬಿಂಬಿಸಿದ್ದಾರೆ. ಆದರೆ ನಾನು ಯಾರ ವಿರೋಧಿ ಯೂ ಇಲ್ಲ. ನಾನು ಸಮಸ್ತ ಜನಾಂಗವನ್ನು ಮತ್ತು ಇಡಿ ದೇಶವನ್ನು ಒಂದೇ ರೀತಿಯಾಗಿ ಕಾಣುತ್ತೇನೆ ಎಂದರು.
ಬಿ.ಡಿ. ಪಾಟೀಲರ ಹಿಂದೆ ನಾವಿದ್ದೇವೆ. ಮುಂದಿನ ಚುನಾವಣೆಯವರೆಗೂ ನಾನು ಸಾಯಲ್ಲ, ಇರುತ್ತೇನೆ. ನಿಮ್ಮ ಭಾಗಕ್ಕೆ ಅರ್ಧದಷ್ಟು ನೀರಾವರಿ ಮಾಡಿದ್ದೇನೆ. ಬಿ.ಡಿ. ಪಾಟೀಲ ಪರ ಮತಯಾಚನೆಗೆ ಬಂದು ಮತಯಾಚನೆ ಮಾಡಿತ್ತೇನೆ. ಇಂತಹ ಮುಗ್ದ ಮತ್ತು ನಿಲ್ಕಷ್ಮಷ ವ್ಯಕ್ತಿಗೆ ಆರಿಸಿದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದರು.
ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ ಸುದ್ದಿ ಪ್ರಸಾರ ಬಗ್ಗೆ ನಿಗಾಕ್ಕೆ ಸೂಚನೆ
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶಂಪುರ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮುಖಂಡರಾದ ರಾಜು ಕೆಂಭಾಗಿ, ಮಲ್ಲಿಕಾರ್ಜುನ ಯಂಡಿಗೇರಿ, ಬಿ.ಜಿ. ಪಾಟೀಲ, ಮೋಹನ ಮೇಟಿ ಮಾತನಾಡಿದರು.
ಜೆಡಿಎಸ್ ತಾಲೂಕಾಧ್ಯಕ್ಷ, ಹೋರಾಟದ ಮುಖಂಡ ಬಿ.ಡಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಹುಲಜಂತಿಯ ಮಾಳಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರು. ರಾಜುಗೌಡ ಪಾಟೀಲ, ಮಂಜುನಾಥ ಕಾಮಗೊಂಡ, ಮಂಗಳಾದೇವಿ ಬಿರಾದಾರ, ವಿಜಯಕುಮಾರ ಭೋಸಲೆ, ಸಿದ್ದು ಡಂಗಾ, ಮಹಿಬೂಬ ಬೇನೂರ, ಶ್ರೀಶೈಲಗೌಡ ಪಾಟೀಲ, ಬಸವರಾಜ ಹಂಜಗಿ, ರಾಜುಗೌಡ ಪಾಟೀಲ, ಭೀಮಶಿ ಕಲಾದಗಿ, ಅಯೂಬ ನಾಟೀಕಾರ, ಗುರಣ್ಣಗೌಡ ಪಾಟೀಲ, ರಾಮು ರಾಠೊಡ, ಭಾರತಿ ವಾಲಿ, ಮರೆಪ್ಪ ಗಿರಿಣಿವಡ್ಡರ, ನಾನಾಗೌಡ ಪಾಟೀಲ ಇದ್ದರು.