ದೇವದಾಸಿಯರ ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, Mar 26, 2022, 6:02 PM IST
ವಿಜಯಪುರ: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ದೇವದಾಸಿ ಮಹಿಳೆಯರ ಮಾಶಾಸನದ ಹೆಚ್ಚಳ, ಪುನರ್ವಸತಿ ಯೋಜನೆ ಬಲಪಡಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಶುಕ್ರವಾರ ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದೇವದಾಸಿ ಮಹಿಳೆಯರು, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ರಾಜ್ಯದ ಎಲ್ಲ ದೇವದಾಸಿ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಸಹಾಯ ಧನ ಕನಿಷ್ಠ 3 ಸಾವಿರ ರೂ. ಗೆ ಹೆಚ್ಚಿಸಬೇಕು. ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ದೇವದಾಸಿ ಮಹಿಳೆಯರ ಪರಿತ್ಯಕ್ತ ಮಕ್ಕಳಿಗೂ ಮಾಸಿಕ ಸಹಾಯಧನ ನೀಡುವ ಜೊತೆಗೆ ಇಂಥ ಮಕ್ಕಳ ಗಣತಿ ಮಾಡಬೇಕು. ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸೇರ್ಪಡೆ ಮಾಡಿ ಎಲ್ಲ ನೆರವು ನೀಡಬೇಕು ಎಂದು ಆಗ್ರಹಿಸಿದರು.
ದೇವದಾಸಿ ಮಹಿಳೆಯರ ಮಕ್ಕಳ ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ ಗಣತಿ ಮಾಡಿ ಪುನರ್ವಸತಿ ಕಲ್ಪಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳು ಅಂತರ್ಜಾತಿಯಲ್ಲಾಗಲಿ ಮತ್ತು ಸಜಾತಿಯಲ್ಲಾಗಲಿ ಹಾಗೂ ದೇವದಾಸಿ ಮಹಿಳೆಯರ ಕುಟುಂಬಗಳ ಸದಸ್ಯರ ನಡುವೆಯಾಗಲಿ ಮದುವೆಯಾದಲ್ಲಿ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು. ಮದುವೆಯ ವಿಚಾರದಲ್ಲಿ ಷರತ್ತು ವಿಧಿಸಬಾರದು. ಬರಗಾಲ ಹಾಗೂ ಅತಿವೃಷ್ಟಿ ಪ್ರವಾಹದ ಸಂದರ್ಭದಲ್ಲಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಹಾಗೂ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ಮತ್ತು ನೇರವಾದ ಪ್ರವೇಶಾವಕಾಶ ಒದಗಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಪಡೆಯುವವರೆಗೂ ನಿರುದ್ಯೋಗ ಭತ್ಯೆ ನೀಡಬೇಕು ಎಂದರು.
ದೇವದಾಸಿ ಮಹಿಳೆಯರ ಮಾಸಾಶನ ನೀಡಿಕೆ ವ್ಯಾಪ್ತಿಯನ್ನು ಬದಲಿಸಿದ್ದರಿಂದ ಅನ್ಯಾಯವಾಗಿದೆ. ಕಾರಣ ನಮಗೆ ನಮ್ಮ ದೇವದಾಸಿ ಮಹಿಳೆಯರ ಪುನರ್ವಸತಿ ಕಚೇರಿಯಿಂದಲೇ ಮಾಸಾಶನ ನೀಡಬೇಕು. ದೇವದಾಸಿ ಕಚೇರಿಯಲ್ಲಿ ಸ್ವಯಂ ಸೇವಕರನ್ನು ಮರು ನೇಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಸುರೇಖಾ ರಜಪೂತ, ಕರ್ನಾಟಕ ಪ್ರಾಂತ ರೈತ ಸಂಘದ ಅಣ್ಣಾರಾಯ ಈಳಗೇರ, ಯಲ್ಲವ್ವ ಕತ್ನಳ್ಳಿ, ಕೆಂಚವ್ವ ಬಬಲೇಶ್ವರ, ಸತ್ಯವ್ವ ಸಿಂಗೆ, ಚಿಕ್ಕವ್ವ ಮಾದರ, ಶಿವಮ್ಮ ಗುಂಡೆನಮನಿ, ನಾಗಮ್ಮ ಬ್ಯಾಕೋಡ, ನಾಗಮ್ಮ ಸಂದಿಮನಿ, ಲಕ್ಕವ್ವ ಯಕ್ಕುಂಡಿ, ಮಾಲವ್ವ ಹಲಗಣಿ, ರೇಣುಕಾ ಬಗಲಿ ಸೇರಿದಂತೆ ಇತರರು ಇದ್ದರು.