ಕುಡಿಯುವ ನೀರಿನ ಸಮಸ್ಯೆ: ಗ್ರಾಪಂ ಕಚೇರಿಗೆ ಖಾಲಿ ಕೊಡಸಮೇತ ಗ್ರಾಮಸ್ಥರಿಂದ ಮುತ್ತಿಗೆ
Team Udayavani, Feb 9, 2022, 1:04 PM IST
ಮುದ್ದೇಬಿಹಾಳ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನಿರ್ಲಕ್ಷ್ಯ ತೋರುತ್ತಿರುವ ಪಂಚಾಯಿತಿ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿತನ ಖಂಡಿಸಿ ಮುದ್ನಾಳ ಹಳ್ಳದಕೆರಿ ತಾಂಡಾ ನಂಬರ್ 2ರ ಗ್ರಾಮಸ್ಥರು ಖಾಲಿ ಕೊಡಗಳ ಸಮೇತ ಹಡಲಗೇರಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಮ್ಮ ಅಳಲು ಕೇಳಲು, ಪರಿಹಾರ ಕಲ್ಪಿಸಲು ಕಚೇರಿಯಲ್ಲಿ ಪಿಡಿಓ ಸೇರಿ ಯಾರೊಬ್ಬರೂ ಇಲ್ಲದಿರುವುದರಿಂದ ಆಕ್ರೋಶಗೊಂಡು ಪಂಚಾಯಿತಿ ಕಚೇರಿ ಎದುರು ಕುಳಿತು ದರಣಿ ನಡೆಸಿದರು. ವಿಷಯ ತಿಳಿದು ಕಚೇರಿಗೆ ಬಂದ ಪಿಡಿಓ ಶೋಭಾ ಮುದಗಲ್ಲ ಅವರನ್ನೂ ತರಾಟೆಗೆ ತೆಗೆದುಕೊಂಡಾಗ ಸಮಸ್ಯೆ ಬಗೆಹರಿಸಬೇಕಿರುವ ವಾಟರಮನ್ ಬೇಜವಬ್ದಾರಿ ಎಂದು ಹೇಳಿ ಪಿಡಿಓ ನುಣುಚಿಕೊಳ್ಳಲು ಯತ್ನಿಸಿದರು.
ಈ ವೇಳೆ ಪಿಡಿಓ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಗ್ರಾಮದ ಬಹಳಷ್ಟು ಜನ ದುಡಿಯಲು ಮಕ್ಕಳು, ವೃದ್ದರನ್ನು ಊರಲ್ಲೇ ಬಿಟ್ಟು ಗುಳೆ ಹೋಗಿದ್ದಾರೆ. ಊರಲ್ಲೆಲ್ಲೂ ನೀರಿನ ಪರ್ಯಾಯ ವ್ಯವಸ್ಥೆ ಇಲ್ಲ. ಇದ್ದ ಬೋರವೆಲ್ ದುರಸ್ಥಿ ಮಾಡಿಲ್ಲ. ಮಕ್ಕಳು, ವೃದ್ಧರಿಗೆ ದೂರ ಹೋಗಿ ನೀರು ತರುವುದು ಆಗೊಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದು ಪಂಚಾಯಿತಿ ಕಚೇರಿ ಎದುರೇ ಧರಣಿ ನಡೆಸುತ್ತಿದ್ದಾರೆ.