ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಸಂಚಾರಿ ಜಾಗೃತಿ ವಾಹನಕ್ಕೆ ಚಾಲನೆ
Team Udayavani, Apr 3, 2022, 1:16 PM IST
ವಿಜಯಪುರ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಜಾಗೃತಿಗಾಗಿ ಸಂಚಾರಿ ವಾಹನಕ್ಕೆ ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ಚಾಲನೆ ನೀಡಿದರು.
2ನೇ ವೃತ್ತದ ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಬಾಲಕಾರ್ಮಿಕ ಕಾಯ್ದೆ 1986 ರಡಿ- 14 ವರ್ಷದೊಳಗಿನ ಮಕ್ಕಳು ಹೊಟೇಲ್, ಗ್ಯಾರೇಜ್ ಸೇರಿದಂತೆ ಇನ್ನೀತರ ಯಾವುದೇ ಉದ್ದಿಮೆ ಹಾಗೂ ವ್ಯವಹಾರಿ ಸಂಸ್ಥೆಗಳಲ್ಲಿ ಮಕ್ಕಳು ದುಡಿಯುವಂತಿಲ್ಲ ಹಾಗೂ ಮಾಲೀಕರು ದುಡಿಸಿಕೊಳ್ಳುವಂತಿಲ್ಲ. ಕಿಶೋರ ಕಾರ್ಮಿಕ ತಿದ್ದುಪಡಿ ಕಾಯ್ದೆ-2016 ರಡಿಯಲ್ಲಿ 14ರಿಂದ 18 ವರ್ಷದೊಳಗಿನ ಮಕ್ಕಳು ಕಿಶೋರ ಕಾರ್ಮಿಕರಾಗಿದ್ದು, ಅವರು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವಂತಿಲ್ಲ ಎಂದು ವಿವರಿಸಿದರು.
ಒಂದೊಮ್ಮೆ ಈ ಕಾಯ್ದೆನಗಳನ್ನು ಮೀರಿ ಬಾಲ ಕಾರ್ಮಿಕರನ್ನು ದುಡಿಸಿಕೊಂಡಲ್ಲಿ ಮಾಲೀಕರಿಗೆ ಹಾಗೂ ಕೆಲಸಕ್ಕೆ ಕಳುಹಿಸಿಕೊಟ್ಟ ಪಾಲಕರಿಗೆ ಕಾನೂನಿನ್ವಯ 50 ಸಾವಿರ ರು. ದಂಡ, 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ವಿದ್ಯೆ ಕಲಿಯುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಹಚ್ಚುವುದು ಅವರ ಶೈಕ್ಷಣಿಕ ಹಕ್ಕಿನ ವಂಚನೆಯಾಗಲಿದೆ ಎಂದು ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ನಿರ್ದೇಶಕಿ ನೀಲಮ್ಮ ಖೇಡಗಿ, ಪಾರ್ವತಿ ಶಿವನಾಳ, ಬಾಳಪ್ಪ ಇದ್ದರು.