ಕೃಷ್ಣೆ ತಟದಲ್ಲಿದ್ದರೂ ನೀರಿಗಾಗಿ ತಪ್ಪಿಲ್ಲಪರದಾಟ
Team Udayavani, Jan 4, 2018, 2:52 PM IST
ಆಲಮಟ್ಟಿ: ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲೊಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯ 2017-18ನೇ ಸಾಲಿನ ಹಿಂಗಾರು ಹಂಗಾಮಿನ ಎರಡನೇ ಬಾರಿಯ ನೀರಾವರಿ ಸಲಹಾ ಸಮಿತಿ ಸಭೆ ಜ. 5ರಂದು ನಡೆಯಲಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬುಧವಾರ 516.450 ಮೀ. ಎತ್ತರದಲ್ಲಿ 77.925 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ಬಾರಿ ಜ. 3ರಂದು 513.81ಮೀ. ಎತ್ತರದಲ್ಲಿ 53.249 ಟಿಎಂಸಿ ಅಡಿ ನೀರು ಸಂಗ್ರಹವಿತ್ತು, ಇದರಲ್ಲಿ 17.620 ಟಿಎಂಸಿ ಅಡಿ ನೀರು ಜಲಚರಗಳಿಗಾಗಿ ಮೀಸಲಿರಿಸುವುದು ಕಡ್ಡಾಯವಾಗಿದ್ದರೂ ಅನಿವಾರ್ಯವಾಗಿ ಅದೇ ನೀರನ್ನು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪೂರೈಸಿದ್ದರೂ ಕೃಷ್ಣೆ ತಟದಲ್ಲಿದ್ದರೂ ಪರದಾಡುವಂತಾಗಿದೆ.
ಇತ್ತೀಚೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಉಮಾಶ್ರೀಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹಿಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ, ಮಾರ್ಚ್ 24ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಇದನ್ನು ನಂಬಿದ ರೈತರು ಅಲ್ಲಿವರೆಗೆ ಫಸಲಿಗೆ ಬರುವ ಬೆಳೆಗಳನ್ನು ಬಿತ್ತಿದ್ದಾರಲ್ಲದೇ ಈ ಭಾಗದಲ್ಲಿ ಉಳ್ಳಾಗಡ್ಡಿಯನ್ನು ಹೆಚ್ಚು ರೈತರು ಹಚ್ಚಿದ್ದಾರೆ.
ಇದರಲ್ಲಿ ನಿಗದಿಪಡಿಸಿದ ದಿನಕ್ಕಿಂತಲೂ ಮುಂಚೆಯೇ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಕಾಲುವೆ ನೀರನ್ನು ನಂಬಿದ ರೈತರ ಗೋಳು ಹೇಳತೀರದಾಗುತ್ತದೆ. ಮಾರ್ಚ್ ನಂತರವೇ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತಾಗಬೇಕು. ಇನ್ನು ಆಲಮಟ್ಟಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡಿರುವ ಅಖಂಡ ಜಿಲ್ಲೆಯ ರೈತರ ಹಿತ ಕಾಪಾಡಲು ಸರ್ಕಾರ ಆಂತರಿಕವಾಗಿ ಜಲಾಶಯ ವ್ಯಾಪ್ತಿಗೆ ಸಂಬಂಧಿ ಸಿದಂತೆ ಮೊದಲು ಈ ಭಾಗಕ್ಕೆ ನೀರು ಕೊಡಬೇಕು ಎನ್ನುತ್ತಾರೆ
ಪ್ರಗತಿಪರ ರೈತ ಶಾಂತಪ್ಪ ಮನಗೂಳಿ.
ನೀರಾವರಿ ಪ್ರದೇಶ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದಿಂದ ಒಟ್ಟು 1,33,300 ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ. ಅದರಲ್ಲಿ 83 ಕಿ.ಮೀ. ಉದ್ದದ ಆಲಮಟ್ಟಿ ಎಡದಂಡೆ ಕಾಲುವೆಯ 40 ವಿತರಣಾ ಕಾಲುವೆಗಳಿಂದ ಸುರಪುರ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 20,235 ಹೆ. ಪ್ರದೇಶ, 62 ಕಿ.ಮೀ. ಉದ್ದದ ಆಲಮಟ್ಟಿ ಬಲದಂಡೆ ಕಾಲುವೆಯ 32 ವಿತರಣಾ ಕಾಲುವೆಗಳಿಂದ ಹುನಗುಂದ ಹಾಗೂ ಬಾಗಲಕೋಟೆ ತಾಲೂಕಿನ 9,900 ಹೆ. ಪ್ರದೇಶ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-1ರ 52 ಕಿ.ಮೀ. ಉದ್ದದ ಕಾಲುವೆಯ 26 ವಿತರಣಾ ಕಾಲುವೆಗಳಿಂದ 12,400 ಹೆ. ಪ್ರದೇಶ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-2ರ 33 ಕಿ.ಮೀ. ಉದ್ದ ಕಾಲುವೆಯ 18 ವಿತರಣಾ ಕಾಲುವೆಯಿಂದ ಬಾಗಲಕೋಟೆ ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶ, ಮುಳವಾಡ ಏತ ನೀರಾವರಿ ಯೋಜನೆಯ 17 ಕಿ.ಮೀ. ಉದ್ದದ ಪೂರ್ವ ಕಾಲುವೆಯ 7 ವಿತರಣಾ ಕಾಲುವೆಗಳಿಂದ ಬ.ಬಾಗೇವಾಡಿ ತಾಲೂಕಿನ 6 ಸಾವಿರ ಹೆ. ಪ್ರದೇಶ, 78 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯ 43 ವಿತರಣಾ ಕಾಲುವೆಯಿಂದ ಬ.ಬಾಗೇವಾಡಿ, ವಿಜಯಪುರ ಹಾಗೂ ಜಮಖಂಡಿ ತಾಲೂಕಿನ 16 ಸಾವಿರ ಹೆ. ಪ್ರದೇಶ, ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯು 54 ಕಿ.ಮೀ. ಉದ್ದದ 24 ವಿತರಣಾ ಕಾಲುವೆಯಿಂದ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 5 ಸಾವಿರ ಹೆ.ಪ್ರ. ಮತ್ತು 3 ಕೆರೆಗಳನ್ನು ತುಂಬಿಸಲಾಗಿದೆ.
ರೊಳ್ಳಿ-ಮನ್ನಿಕೇರಿ ಯೋಜನೆಯ 2,500 ಹೆ. ಪ್ರದೇಶದ ಪೈಕಿ 790 ಹೆ.ಪ್ರ. ಹಾಗೂ ಸೊನ್ನ ಏತ ನೀರಾವರಿ ಯೋಜನೆಯ ಒಂದು ಸಾವಿರ ಹೆ.ಪ್ರ.ದ ಪೈಕಿ 547 ಹೆ.ಪ್ರ, ತೆಗ್ಗಿ-ಸಿದ್ದಾಪುರ ಯೋಜನೆಯ 3 ಸಾವಿರ ಹೆ.ಪ್ರ, ಪೈಕಿ 472 ಹೆ.ಪ್ರದೇಶಗಳು ಬೀಳಗಿ ತಾಲೂಕಿನಲ್ಲಿ ನೀರಾವರಿಗೊಳಪಡುತ್ತಿದೆ.
ರಾಮಥಾಳ ಏತ ನೀರಾವರಿ ಯೋಜನೆಯ 51 ಕಿ.ಮೀ. ಉದ್ದದ ಪೂರ್ವ ಕಾಲುವೆಯ 20 ವಿತರಣಾ ಕಾಲುವೆ ಜಾಲದಿಂದ 6 ಸಾವಿರ ಹೆ.ಪ್ರ, 62 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯ 24 ವಿತರಣಾ ಕಾಲುವೆಗಳ ಮೂಲಕ 6,900 ಹೆ.ಪ್ರ, ಇನ್ನೂ ಹನಿ ನೀರಾವರಿ ಯೋಜನೆಯ ಪೂರ್ವ ಕಾಲುವೆಯಿಂದ 12,300 ಹೆ.ಪ್ರ, ಪಶ್ಚಿಮ ಕಾಲುವೆ ಮೂಲಕ 11,700 ಹೆ. ಪ್ರದೇಶ ಹುನಗುಂದ ತಾಲೂಕಿನಲ್ಲಿ ನೀರಾವರಿಗೆ ಒಳಪಡುತ್ತಿದೆ ಎಂದು ಕೆಬಿಜೆಎನ್ಎಲ್ ತಿಳಿಸಿದೆ.
ಶಂಕರ ಜಲ್ಲಿ