ರೈತರ ವಹಿವಾಟು ದಾರಿ ಸಮಸ್ಯೆ ಪರಿಹಾರಕ್ಕೆ ಆಗ್ರಹ
Team Udayavani, Dec 12, 2021, 3:58 PM IST
ಬಸವನಬಾಗೇವಾಡಿ: ರಾಜ್ಯದ ರೈತರ ಜಮೀನುಗಳಿಗೆ ಹೋಗುವ ವಹಿ ವಾಟು ದಾರಿ ಸಮಸ್ಯೆ ನಿವಾರಿಸಲು ಬೆಳಗಾವಿ ಯಲ್ಲಿ ನಡೆಯುವ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತರಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷé ವಹಿಸಿದಲ್ಲಿ ಡಿ. 16ರಂದು ಸುವರ್ಣ ಸೌಧದ ಮುಂದೆ ರೈತರೊಂದಿಗೆ ಧರಣಿ ಮಾಡಲಾಗುವುದು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆ ರಾಜ್ಯವಾಪ್ತಿ ಇದ್ದು ಜಿಲ್ಲೆಯ ಶಾಸಕರು ಸೋಮವಾರ ಜರುಗುವ ಅಧಿವೇಶನದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಿ ರೈತರ ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ದಾರಿಗಾಗಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಈಗಾಗಲೇ ಹಲವಾರು ಬಾರಿ ದಾರಿ ಸಮಸ್ಯೆ ಕುರಿತು ಅನೇಕ ಹಂತಗಳಲ್ಲಿ ಹೋರಾಟ ಮಾಡಲಾಗಿದೆ. ಜಿಲ್ಲೆಯ ಅನೇಕ ಶಾಸಕರಿಗೆ ಅಧಿವೇಶನದಲ್ಲಿ ಧ್ವನಿ ಎತ್ತುವ ಬಗ್ಗೆ ಮನವಿ ಕೂಡಾ ಮಾಡಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡದಿದ್ದರೆ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು. ಈರಣ್ಣ ದೇವರಗುಡಿ, ಸೋಮನಗೌಡ ಪಾಟೀಲ, ಸಂಗನಗೌಡ ಚಿಕ್ಕೊಂಡ ಇದ್ದರು.