ಅನಗತ್ಯ ಸುತ್ತಾಡುವರಿಗೆ ಪೊಲೀಸರಿಂದ ದಂಡ
Team Udayavani, Jan 10, 2022, 11:12 PM IST
ತಾಳಿಕೋಟೆ: ಒಮಿಕ್ರಾನ್ ಸಾಂಕ್ರಾಮಿಕ ರೋಗ ಹತೋಟೆಗೆ ತರುವ ಸಲುವಾಗಿ ಸರ್ಕಾರ ಹೊರಡಿಸಿರುವ ವೀಕೆಂಡ್ ಕರ್ಫ್ಯೂಗೆ ಎರಡನೇ ದಿನ ರವಿವಾರ ತಾಳಿಕೋಟೆ ಪಟ್ಟಣ ಸ್ತಬ್ಧಗೊಂಡಿತ್ತು. ಅನಗತ್ಯ ಸುತ್ತಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ದಂಡವನ್ನು ವಿಧಿ ಸಿದರು.
ಪಟ್ಟಣದ ವಿಜಯಪುರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಮಹಾರಾಣಾ ಪ್ರತಾಪ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿಗಳ ತಂಡಗಳನ್ನು ನಿಯೋಜಿಸಲಾಗಿತ್ತು. ಮಾಸ್ಕ್ ಧರಿಸದೇ ಅಗತ್ಯ ಸೇವೆಗೆ ಬಂದವರಿಗೂ ಪೊಲೀಸರು ದಂಡವನ್ನು ವಿ ಧಿಸಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದರು.
ಅಗತ್ಯ ವಸ್ತುಗಳಾದ ದಿನಸಿ, ಕಾಯಪಲ್ಲೆ, ಹಾಲು, ಆಸ್ಪತ್ರೆ, ಮೆಡಿಕಲ್ ಶಾಫ್, ಹೋಟೆಲ್ಗಳು ಎಂದಿನಂತೆ ತೆರೆದಿದ್ದರೂ ಕೂಡಾ ವ್ಯಾಪಾರವಿಲ್ಲದೇ ಬಿಕೋ ಎನ್ನುವ ದೃಶ್ಯ ಕಂಡುಬಂತು. ಬಸ್ ನಿಲ್ದಾಣದಲ್ಲಿ ದಿನನಿತ್ಯ ಜನ ಜಂಗುಳಿಯಿಂದ ಕೂಡಿರುತ್ತಿತ್ತು. ಆದರೆ ಜನರೇ ಇಲ್ಲದ್ದರಿಂದ ಬಸ್ಗಳ ಓಡಾಟವು ಕಂಡು ಬರಲಿಲ್ಲ.
ಬೆರಳೆಣಿಕೆಯಷ್ಟು ಜನರನ್ನೇ ತುಂಬಿಕೊಂಡು ಮುಖ್ಯ ಗ್ರಾಮ, ಪಟ್ಟಣಗಳತ್ತ ಬಸ್ಗಳ ಓಡಾಟ ಕಂಡು ಬಂತು. ಪಟ್ಟಣದ ಹೋಟೆಲ್ಗಳಲ್ಲಿ ಕೇವಲ ಪಾರ್ಸಲ್ಗೆ ಅವಕಾಶ ನೀಡಲಾಗಿತ್ತಾದರೂ ಕೆಲವು ಹೋಟೆಲ್ ಗಳು ತೆಗೆಯದೇ ಬಂದ್ ಮಾಡಲಾಗಿತ್ತು. ಕಾಯಪಲ್ಲೆ ಮತ್ತು ಹಣ್ಣು ಹಂಪಲುಗಳ ಮಾರಾಟಕ್ಕೆ ತಳ್ಳುವ ಗಾಡಿಗಳಲ್ಲಿ ಬಡಾವಣೆಗಳತ್ತ ತೆರಳಲು ಪೊಲೀಸರು ಸೂಚಿಸಿದರು.
ಜನರು ಅನಗತ್ಯ ತಿರುಗಾಡದಂತೆ ಪಿಎಸೈ ವಿನೋದ ದೊಡಮನಿ ಅವರ ನೇತೃತ್ವದಲ್ಲಿ ಎಸ್. ಎಂ. ಪಡಶೆಟ್ಟಿ, ಪುಂಡಲೀಕ ಪವಾರ, ಶಿವು ಕಾರಜೋಳ, ಗೀರಿಶ ಚಲವಾದಿ, ಚಪ್ಪರಬಂದ, ದಿಡ್ಡಿಮನಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.