ಆರೋಗ್ಯ ಸಚಿವರ ತವರಲ್ಲೇ ನಕಲಿ ವೈದ್ಯರು
Team Udayavani, Aug 28, 2018, 3:11 PM IST
ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ತವರು ಜಿಲ್ಲೆಯಲ್ಲಿ ದಿನೇ ದಿನೇ ನಕಲಿ ವೈದ್ಯರ ಹಾವಳಿ ಹೆಚ್ಚಿದ್ದು, ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಸ್ಥಳೀಯ ನಕಲಿ ವೈದ್ಯರ ದಾಂಗುಡಿ ಮಿತಿ ಮೀರಿರುವಾಗಲೇ ಉತ್ತರ ಭಾರತದಿಂದ ಬಂದಿರುವ ನಕಲಿ ವೈದ್ಯರು ಬಡ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಮಾತ್ರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದರು ಸಾರ್ವಜನಿಕರು ದೂರುವಂತಾಗಿದೆ.
ಹೆಚ್ಚು ಹಾವಳಿ: ಕಳೆದ ಒಂದು ತಿಂಗಳ ಹಿಂದೆ ನಗರದಲ್ಲಿ ನಕಲಿ ವೈದ್ಯನೊಬ್ಬ ರೋಗಿಗಳಿಗೆ ಬಟ್ಟೆ ಮೇಲೆ ಚುಚ್ಚು ಮದ್ದು ನೀಡಿದ ಘಟನೆ ಜಿಲ್ಲೆಯ ರೋಗಿಗಳನ್ನು ಬೆಚ್ಚಿ ಬೀಳಿಸಿತ್ತು. ಈ ಬೆಳವಣಿಗೆ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ ಎಗ್ಗಿಲ್ಲದೇ ನಕಲಿ ವೈದ್ಯರ ಹಾವಳಿ ಹೆಚ್ಚಿಕೊಳ್ಳಲು ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಸಿಂದಗಿ, ಇಂಡಿ, ದೇವರಹಿಪ್ಪರಗಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕಿನ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ.
ರೋಗಿಗಳ ಜೀವದೊಂದಿಗೆ ಚೆಲ್ಲಾಟ: ಹಳ್ಳಿಗಳಲ್ಲಿ ಬೀಡು ಬಿಟ್ಟಿರುವ ಉತ್ತರ ಭಾರತೀಯ ಮೂಲದ ನಕಲಿ ವೈದ್ಯರ ಹಾವಳಿಯಂತೂ ಹೇಳತೀರದು. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹೀಗೆ ಹಿಂದಿ ಭಾಷೆ ಮಾತನಾಡುವ ಕೆಲವರು
ಕನಿಷ್ಠ ಸಾಮಾನ್ಯ ಪದವಿಯನ್ನೂ ಪಡೆಯದೇ ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುತ್ತ ಅಮಾಯಕ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಅಚ್ಚರಿ ಸಂಗತಿ ಎಂದರೆ ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾದರೂ, ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯರೇ ನಕಲಿ ವೈದ್ಯರ ನೆರವಿಗೆ ನಿಂತು ರಕ್ಷಣೆ ನೀಡುತ್ತಿರುವುದು ನಕಲಿ ವೈದ್ಯರ ಲಾಬಿಗೆ ಸಾಕ್ಷಿ ನೀಡುತ್ತಿದೆ.
ಈ ಮಧ್ಯೆ ಸಿಂದಗಿ ಟಿಎಚ್ಒ ಡಾ| ಆರ್. ಎಸ್. ಇಂಗಳೆ ಹಲವು ಕಡೆಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ನಕಲಿ ವೈದ್ಯರ ಕೇಂದ್ರಗಳ ಮೇಲೆ ದಾಳಿ ನಡೆಸಿದಾಗ ಚಿಕಿತ್ಸೆ ನೀಡುತ್ತಿದ್ದ ವ್ಯಕ್ತಿಗಳ ಬಳಿ ಯಾವುದೇ ವೈದ್ಯಕೀಯ ಶಿಕ್ಷಣ ಪಡೆದ ದಾಖಲೆ ಹೊಂದಿರಲಿಲ್ಲ. ಇನ್ನು ಕೆಲವು ನಕಲಿ ವೈದ್ಯರ ನೆಲೆಗಳಿಗೆ ಭೇಟಿ ನೀಡಿ ಈ ಕುರಿತು ನೋಟಿಸ್ ನೀಡಲಾಗಿದೆ. ಆದರೂ ಅಕ್ರಮ ವೈದ್ಯಕೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಸಿಂದಗಿ ತಾಲೂಕು ಸೋಮಜಾಳದಲ್ಲಿ ಉತ್ತರ ಪ್ರದೇಶದ ಶಂಕರಪುರ ಬಸ್ತಿಯ 32 ವರ್ಷದ ಪಲಶ ದುಲಾಲ್ ಮುಸೌಲಿ ಗೋಸಾಯಿ ಎಂಬ ನಕಲಿ ವೈದ್ಯ ಕಳೆದ ಹಲವು ವರ್ಷಗಳಿಂದ ನಕಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾನೆ. ಪಲಶ ಬಳಿ ಯಾವುದೇ ವೈದ್ಯಕೀಯ ಶಿಕ್ಷಣ ಪಡೆದ ದಾಖಲೆಗಳಿಲ್ಲ. ಆದರೂ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದು ಸ್ಥಳೀಯರು ಈತನ ರಕ್ಷಣೆಗೆ ನಿಂತಿರುವುದು ನಕಲಿ ವೈದ್ಯರ ಲಾಬಿಗೆ ಸಾಕ್ಷಿ ನೀಡುತ್ತಿವೆ.
ಇದು ಕೂಡ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ತೊಡಕಾಗುತ್ತಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ನಕಲಿ ವೈದ್ಯರಿಂದ ದೊಡ್ಡ ದುರಂತ ಸಂಭವಿಸುವ ಮುನ್ನವೇ ಅಕ್ರಮ ವೈದ್ಯಕೀಯ ಚಟುವಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿ¨
ಒಂದು ವಾರದಲ್ಲಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಲು ನೋಡಲ್ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ವೈದ್ಯಕೀಯ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಬರುವ 10 ದಿನಗಳಲ್ಲಿ ನಕಲಿ ವೈದ್ಯರು ತಕ್ಷಣ ಚಟುವಟಿಕೆ ನಿಲ್ಲಿಸಲು ಗಡುವು ನೀಡಲಾಗುತ್ತದೆ. ಆಗಲೂ ತಮ್ಮ ಅಕ್ರಮ ದಂಧೆ ನಿಲ್ಲಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ.
ಡಾ| ಮಹೇಂದ್ರ ಕಾಪ್ಸೆ ಡಿಎಚ್ಒ, ವಿಜಯಪುರ
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು