ವಿಜಯಪುರ ಜಿಲ್ಲೆಯಲ್ಲಿ ಮಳೆಯ ಅಬ್ಬರ: ಪರೀಕ್ಷೆಗೆ ತೆರಳಲು ಪರದಾಡಿದ ವಿದ್ಯಾರ್ಥಿ
Team Udayavani, Jun 29, 2020, 9:59 AM IST
ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದೆಡೆ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು, ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಹೋಗುವ ಓರ್ವ ವಿದ್ಯಾರ್ಥಿ ತುಂಬಿ ಹರಿದ ಹಳ್ಳ ದಾಟಲು ಪರದಾಟ ನಡೆಸಿದ ಘಟನೆ ಸೋಮವಾರ ಜರುಗಿದೆ.
ಸಮೃದ್ಧ ಮಳೆಯಿಂದ ಜಿಲ್ಲೆಯ ಹಲವೆಡೆ ಜಮೀನುಗಳಲ್ಲಿ ಜಲಾವೃತವಾಗಿವೆ. ಅದರಲ್ಲೂ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಕೆಲ ಕಾಲೋನಿಗಳಲ್ಲಿ ನುಗ್ಗಿದೆ. ಹಳ್ಳಗಳು ತುಂಬಿ ಹರಿಯುತ್ತಿದೆ. ನಾಲತವಾಡ ಸುತ್ತಮುತ್ತಲಿನ ರಸ್ತೆ ಮೇಲೆ ಹರಿಯುತ್ತಿವೆ. ಕಾರಣ ಹಳ್ಳದ ಪಕ್ಕದ ಪರಿಸರದ ಮನೆಯಲ್ಲಿದ್ದ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ಹರ ಸಾಹಸ ಪಟ್ಟು ಹಳ್ಳದಾಟಿ ಪರೀಕ್ಷೆಗೆ ತೆರಳಿದ್ದಾನೆ.
ಮತ್ತೊಂದೆಡೆ ತಾಳಿಕೋಟೆ ತಾಲೂಕಿನಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ಹಡಗಿನಾಳ ಗ್ರಾಮದ ಜಮೀನುಗಳು ಮಳೆ ನೀರಿನಿಂದ ಆವೃತವಾಗಿವೆ. ಪರಿಣಾಮ ಮುಂಗಾರು ಬಿತ್ತನೆಯ ಹಲವು ಬೆಳೆ ನೀರಿನಲ್ಲೇ ನಿಂತಿದ್ದು, ಬೇರು ಕೊಳೆಯುವ ಭೀತಿ ಎದುರಾಗಿದೆ. ಹೀಗಾಗಿ ರೈತರು ಬೆಳೆ ಕಳೆದುಕೊಂಡು ಆರ್ಥಿಕ ನಷ್ಡ ಅನುಭವಸುವ ಆತಂಕ ಎದುರಿಸುತ್ತಿದ್ದಾರೆ.