ಪ್ರವಾಹ ಪೀಡಿತ ಭುಯ್ಯಾರ ಗ್ರಾಮದಲ್ಲಿ ಹಗೆ ಕುಸಿತ- ಹಗೆಯಲ್ಲಿ ಬಿದ್ದ ಮಹಿಳೆ ಅಪಾಯದಿಂದ ಪಾರು
Team Udayavani, Oct 20, 2020, 7:19 PM IST
ವಿಜಯಪುರ: ಪ್ರವಾಹ ಪೀಡಿತ ಭೀಮಾ ನದಿ ತೀರದ ಗ್ರಾಮಗಳಲ್ಲಿ ಮನೆ ಕುಸಿತದ ಜೊತೆಗೆ ಧಾನ್ಯ ಸಂಗ್ರಹದ ಪಾರಂಪರಿಕ ಹಗೆಗಳು ಕುಸಿಯಲಾರಂಭಿಸಿವೆ.
ಭೀಮಾ ನದಿ ಪ್ರವಾಹ ತಗ್ಗಿದೆ. ಏತನ್ಮಧ್ಯೆ ಮಹಾನವಮಿ ಹಬ್ಬ ಆರಂಭಗೊಂಡಿದ್ದು, ಭುಯ್ಯಾರ ಗ್ರಾಮದ ಸುನಂದಾ ನಾಟೀಕರ ಎಂಬವರು ದೇವರಿಗೆ ದೀಪ ಹಚ್ಚಲು ಮನೆಗೆ ಮರಳಿದ್ದರು. ಈ ವೇಳೆ ಮನೆ ಸ್ವಚ್ಛಗೊಳಿಸುತ್ತಿದ್ದ ಮಹಿಳೆ ನೀರಿನಿಂದ ಆವೃತವಾಗಿದ್ದ ಕುಸಿದ ಹಗೆಯಲ್ಲಿ ಬಿದ್ದಿದ್ದರು. ಅಪಾಯಕ್ಕೆ ಸಿಲುಕಿದರೂ ಸಕಾಲಿಕ ರಕ್ಷಣೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.
ಸುನಂದಾ ನಾಟೀಕಾರ ಅವರಿಗೆ ತಮ್ಮ ಮನೆಯಲ್ಲಿ ಹಗೆ ಇರುವುದೇ ತಿಳಿದಿರಲಿಲ್ಲ. ಪಾರಂಪರಿಕ ಧಾನ್ಯ ಸಂಗ್ರಹದ ಹಗೆಗಳು ಈಗ ಬಳಕೆಯಲ್ಲಿ ಇಲ್ಲ. ಹೀಗಾಗಿ ಈಗಿನವರಿಗೆ ಈ ಕುರಿತು ಅರಿವೂ ಇಲ್ಲ. ಕುಸಿದ ಹಗೆಯಲ್ಲಿ ಬಿದ್ದ ಮೇಲೆಯೇ ಸುನಂದಾ ಕುಟುಂಬವರಿಗೆ ತಮ್ಮ ಮನೆಯಲ್ಲಿ ಹಗೆ ಇರುವುದು ತಿಳಿದಿದೆ.
ಸುಮಾರು ಏಳೆಂಟು ಅಡಿ ಆಳದಲ್ಲಿದ್ದ ಹಗೆ ಕುಸಿದಿದ್ದು, ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಕೊಂಡಿತ್ತು. ಮನೆ ಸ್ವಚ್ಛಗೊಳಿಸುವ ವೇಳೆ ಏಕಾಏಕಿ ಹಗೆ ಕುಸಿದು, ಸುನಂದಾ ಇದರಲ್ಲಿ ಮುಳುಗಿದ್ದಾರೆ. ಹತ್ತಿರದಲ್ಲಿದ್ದವರು ತಕ್ಷಣ ನೆರವಿಗೆ ಬಂದ ಕಾರಣ ಅಪಾಯಕ್ಕೆ ಸಿಲುಕಿದ್ದ ಸುನಂದಾ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ.