ನಾನು ವಿಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ: ಎಂ.ಬಿ.ಪಾಟೀಲ
Team Udayavani, Oct 1, 2019, 12:33 PM IST
ವಿಜಯಪುರ: ಅಥಣಿ ಉಪಚುನಾವಣೆಯಲ್ಲಿ ನಮ್ಮ ಗೆಲವು ನಿಶ್ಚಿತ. ನಮ್ಮ ವಿರುದ್ಧ ಯಾರೇ ಸ್ಪರ್ಧಿಸಿದರೂ ಅವರ ಸೋಲು ಶತಸಿದ್ದ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಅಥಣಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದು, ಸ್ಥಳೀಯ ರಾಜಕೀಯದ ಅರಿವೂ ನನಗಿದೆ. ಹೀಗಾಗಿ ಕಾಂಗ್ರೆಸ್ ವಿರುದ್ದ ಯಾರೇ ಸ್ಪರ್ಧಿಸಿದರೂ ಅವರನ್ನು ಸೋಲಿಸಿಯೇ ತೀರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ರಾಜ್ಯದ ಉಪ ಚುನಾವಣೆ 12 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದ್ದು, ಜೆಡಿಎಸ್ 3, ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಹೀಗಾಗಿ ಬಿಜೆಪಿ ಸೋಲು ಖಚಿತ ಎಂದರು.
ಆರ್.ಎಸ್.ಎಸ್ ನಾಯಕರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನ ನೀಡುವುದು ದೊಡ್ಡ ವಿಷಯವೇ ಅಲ್ಲ.ಬಿಜೆಪಿ ಹುಟ್ಟಿದ್ದೇ ಆರ್ ಎಸ್ ಎಸ್ ಗರ್ಭಗುಡಿಯಲ್ಲಿ. ಒಳಗಡೆ ಯಾರಿಗೂ ಪ್ರವೇಶವಿಲ್ಲ ಎಂದು ಕುಟುಕಿದರು.
ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬವಾಗುತ್ತಿಲ್ಲ. ಹೈಕಮಾಂಡ್ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ನಾನು ಪ್ರತಿಪಕ್ಷದ ನಾಯಕ ಹಾಗೂ ರಾಜ್ಯಾದ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ತಾವು ತಂತಿ ಮೇಲೆ ನಡಿಗೆ ಹೇಳಿಕೆ ಬಗ್ಗೆ ನಾನೇನು ಹೇಳಲಿ. ತಂತಿ ಮೇಲೆ ನಡೆಯುತ್ತಾರೋ, ಬೆಂಕಿ ಮೇಲೆ ನಡೆಯುತ್ತಾರೋ ಅವರನ್ನೇ ಕೇಳಿ ಎಂದರು.
ಅನರ್ಹ ಶಾಸಕರ ಕುರಿತು ಉಮೇಶ ಕತ್ತಿ ಹೇಳಿರುವುದು ಬಿತ್ತಿದ್ದೇ ಬೆಳೆಯುತ್ತದೆ ಎಂಬುದಕ್ಕೆ ಸಾಕ್ಷಿ. ಅನರ್ಹರಿಗೂ ಈಗ ತಮ್ಮ ತಪ್ಪಿನ ಅರಿವಾಗಿದೆ ಎಂದರು.