ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಸಿಡಿ ಇಲ್ಲ: ಮುಲಾಲಿ
Team Udayavani, Mar 7, 2021, 4:35 PM IST
ವಿಜಯಪುರ: ನನ್ನ ಬಳಿ ಯಾವ ಗಣ್ಯರು, ಸಚಿವರು, ಜನಪ್ರತಿನಿಧಿಗಳ ಲೈಂಗಿಕ ಹಗರಣದ ಯಾವುದೇ ಸಿ.ಡಿ, ದಾಖಲೆಗಳು ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರಮೇಶ ಜಾರಕಿಹೊಳಿ ಅವರ ಕುರಿತ ಲೈಂಗಿಕ ಹಗರಣ ಸಿಡಿ ಹೊರಬಂದಿರುವಂತೆ ಇನ್ನೂ ಹಲವಾರು ಜನಪ್ರತಿನಿಧಿಗಳ ಇಂತಹ ಸಿಡಿಗಳು ಇರಬಹುದು ಎಂದಿದ್ದೇನೆಯೇ ಹೊರತು, ನಿಖರವಾಗಿ ಯಾರ ಹೆಸರೂ ಹೇಳಿಲ್ಲ. ಯಾರದೇ ದಾಖಲೆ ಇದೆ ಎಂದೂ ಹೇಳಿಲ್ಲ. ಆದರೆ ಅಷ್ಟರಲ್ಲಿ ಏನೇನೋ ಬೆಳವಣಿಗೆಯಾಗಿದೆ ಎಂದರು.
ಈ ಮಧ್ಯೆ ಬೆಂಗಳೂರಿನ ಮಹಿಳೆಯೊಬ್ಬರು ನನ್ನನ್ನು ಬಂಧಿಸಿ, ವಿಚಾರಣೆ ನಡೆಸುವಂತೆ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯವಾಗಿ ಪೊಲೀಸರು ಮಾ.8 ರಂದು ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ. ಆದರೆ ಪೂರ್ವ ನಿರ್ಧಾರಿತ ಕಾರ್ಯಕ್ರಮ ಇರುವ ಕಾರಣ ಈ ಕುರಿತು ವಕೀಲರ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಇದನ್ನೂ ಓದಿ:ಮಾ.8ರಂದು ರಾಜಕಾರಣಿಗಳ ಹೊಸ ಗುಟ್ಟು ಬಹಿರಂಗಪಡಿಸುತ್ತೇನೆ: ಮತ್ತೊಂದು ಬಾಂಬ್ ಸಿಡಿಸಿದ ಮಲಾಲಿ
ಯಾರಾದರೂ ಸಂತ್ರಸ್ತ ಮಹಿಳೆಯರು ಇದ್ದರೆ ಅವರಿಗೆ ನೈತಿಕ ಮತ್ತು ಕಾನೂನು ಬೆಂಬಲ ನೀಡಲು ಸಿದ್ಧನಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಾಕಾಂಕ್ಷಿ ಆಗಿರುವ ಕಾರಣ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದರು.