ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ
Team Udayavani, Oct 21, 2021, 9:07 PM IST
ವಿಜಯಪುರ : ತನ್ನೊಂದಿಗೆ ಸರಿಯಾಗಿ ಸಂಸಾರ ಮಾಡದೇ ಆಸ್ತಿಗಾಗಿ ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಸುಪಾರಿ ನೀಡಿ ಹತ್ಯೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಪೊಲೀಸರು ಇದೀಗ ಸುಪಾರಿ ಹತ್ಯಾ ಸಂಚಿನ ರೂವಾರಿ ಪತ್ನಿ ಸೇರಿ ಇತರೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆಯಾದ ಟಕ್ಕಳಕಿ ತಾಂಡಾ-1 ರ ನಿವಾಸಿ ಪುನ್ನಪ್ಪ ಪವಾರನ ಹತ್ಯೆಗೆ ಸುಪಾರಿ ಹಣ ನೀಡಿದ ಹಂತಕ ಪತ್ನಿ ನಗರದ ಬಂಜಾರಾ ತಾಂಡಾ ನಿವಾಸಿ ಲಲಿತಾ ಪುನ್ನಪ್ಪ ಪವಾರ (41), ಸುಪಾರಿ ಹತ್ಯೆ ಮಾಡಿದ ಭೂತನಾಳ ತಾಂಡಾದ ಶಂಕರ ಉರ್ಫ ಸಂಕ್ರೆ ಠಾಕ್ರೂ ಪವಾರ (42), ಪ್ರಕಾಶ ಪೋಮಿ ಚವ್ಹಾಣ (35), ಅನಿಲ ಹೇಮು ರಾಠೋಡ (28), ಅಪ್ಪು ಉರ್ಫ ಗಣ್ಯಾ ಧರ್ಮು ರಾಠೋಡ (28) ಹಾಗೂ ಜಾಲಗೇರಿ ತಾಂಡಾದ ಸುನಿಲ ಉಮೇಶ ರಾಠೋಡ (25) ಇವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪತಿಯ ಹತ್ಯೆಗೆ ಪತ್ನಿ 8 ಲಕ್ಷ ರೂ. ಸುಪಾರಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂಗಡವಾಗಿ 1 ಲಕ್ಷ ರೂ. ನೀಡಿದ್ದಳು. ಪೊಲೀಸ್ ತನಿಖಾ ತಂಡ ಬಂಧಿತರಿಂದ ಸುಪಾರಿ ನೀಡಿದ್ದ ಮುಂಗಡ ಹಣ, ಕೃತ್ಯದ ಸಂಚು ರೂಪಿಸಲು ಬಳಸಿದ 5 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ತಿಂಗಳ 14 ರಂದು ತಿಕೋಟ ತಾಲೂಕಿನ ಜಾಲಗೇರಿ ತಾಂಡಾ-1 ರ ವ್ಯಾಪ್ತಿಯ ಅಮಸಿದ್ದ ಚವ್ಹಾಣ ಇವರ ಹೊಲದಲ್ಲಿ ಟಕ್ಕಳಕಿ ತಾಂಡಾದ ಪುನ್ನಪ್ಪ ಕಸನು ಪವಾರ (48) ಹತ್ಯೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:80 ಟನ್ ಹೆರಾಯಿನ್ ಯಾರದ್ದು ಎಂಬುದು ಕಟೀಲ್ ಉತ್ತರಿಸಲಿ : ಹರಿಪ್ರಸಾದ್
ಹತ್ಯೆಯ ಕುರಿತು ಹಂತಕರು ಯಾವುದೇ ಸುಳಿವನ್ನು ನೀಡಿರದ ಕಾರಣ ಪೊಲೀಸರಿಗೆ ಈ ಪ್ರಕರಣ ಬೇಧಿಸುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಎಸ್ಪಿ ಆನಂದಕುಮಾರ ಅವರು ಎಎಸ್ಪಿ ರಾಮ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಡಿಎಸ್ಪಿ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಎಸೈಗಳಾದ ಎ.ಎಸ್.ರಾಠೋಡ, ಎಸ್.ಕೆ.ಲಂಗೋಟಿ ಇವರೊಂದಿಗೆ ಸುಮಾರು 10 ಪೊಲೀಸ್ ಸಿಬ್ಬಂದಿಯ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಸದರಿ ತನಿಖಾ ತಂಡ ವಿಜಯಪುರ ಜಿಲ್ಲೆಯಲ್ಲಿ ಮಾತ್ರವಲ್ಲದೇ ಬಾಗಲಕೋಟೆ, ಕಲಬುರ್ಗಿ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಸಂಚರಿಸಿ, ಸುಪಾರಿ ಹತ್ಯಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ಆನಂದಕುಮಾರ ವಿವರಿಸಿದ್ದಾರೆ.