ಕೋವಿಡ್ ವಿರುದ್ಧ ಹೋರಾಟ ನಿರಂತರ
ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಶಾಸಕ ಪಾಟೀಲ ಸಲಹೆ
Team Udayavani, Jun 5, 2020, 3:49 PM IST
ಸಾಂದರ್ಭಿಕ ಚಿತ್ರ
ಇಂಡಿ: ಕೋವಿಡ್ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದು ಈಗ ರಾಜ್ಯ ಸರ್ಕಾರ ಮಾರ್ಚ್ನಲ್ಲಿ ತಡೆಹಿಡಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ. 25, ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಜೂ. 18ರಂದು ನಡೆಯಲಿದ್ದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಶಿಕ್ಷಕರು ಮುಂದಾಗಬೇಕೆಂದು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಕರೆ ನೀಡಿದರು.
ಪಟ್ಟಣದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಗುರುಭವನದಲ್ಲಿ ನಡೆದ ತಾಲೂಕಿನ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಹಿನ್ನೆಲೆ ಕೇಂದ್ರ ಸರಕಾರ ದೇಶವ್ಯಾಪಿ ಲಾಕ್ಡೌನ್ ಮಾಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ಈಗ ರಾಜ್ಯ ಸರಕಾರ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಅನುಮತಿ ನೀಡಿದೆ. ಕೋವಿಡ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈಗ ಪ್ರತಿ ಶಿಕ್ಷಕರು ಸ್ವಚ್ಛತೆ ಜೊತೆಗೆ ವಿದ್ಯಾರ್ಥಿಗಳಿಗೂ ಕೋವಿಡ್ ವಿರುದ್ಧ ಹೋರಾಟ ಜಾಗೃತಿಯನ್ನು ಮೂಡಿಸಬೇಕು ಎಂದರು. ಪ್ರತಿಯೊಂದು ಹಂತದಲ್ಲೂ ಸಾಮಾಜಿಕ ಅಂತರ ಕುರಿತು ನಿರಂತರವಾಗಿ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನ, ಸಲಹೆ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳು ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಅಧೀಕ್ಷರುಗಳಿಗೆ ಸಲಹೆ ನೀಡಿದರು.
ತಾಲೂಕು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಸಾಕಷ್ಟು ಜನಪರ ಕಾರ್ಯ ಮಾಡುತ್ತಿದ್ದು ಉತ್ತಮ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಸಹಕಾರ ನೀಡಿದ್ದಾರೆ. ಈಗ ಕ್ಷೇತ್ರದ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯ ಮೆಚ್ಚುವಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ 38 ವರ್ಷ ಸೇವೆ ಸಲ್ಲಿಸಿ ನಿವೃತ್ತಯಾದ ಜಿಲ್ಲಾ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಜಿ. ಪೂಜೇರಿ, ಅವರ ಹುದ್ದೆಗೆ ಆಗಮಿಸಿದ ಆರ್.ಎ. ಜಾಗೀರದಾರ ಅವರನ್ನು ಸನ್ಮಾನಿಸಲಾಯಿತು. ಬಿಇಒ ವಸಂತ ರಾಠೊಡ, ಎಬಿವಿಪಿ ಸಂಚಾಲಕ ಶ್ರೀಧರ ಕ್ಷತ್ರಿ, ಮುಖ್ಯೋಪಾಧ್ಯಾಯರಾದ ಎಸ್.ಬಿ. ಪಾಟೀಲ, ಎಸ್.ಸಿ. ಹಿರೇಪಟ್ಟ ಸೇರಿದಂತೆ ಎಲ್ಲರಿಗೂ ಶಾಸಕರು ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಜೆ. ಪೂಜೇರಿ, ಹಾಲಿ ಉಪ ನಿರ್ದೇಶಕ ಆರ್.ಎ. ಜಾಗೀರದಾರ ಇದ್ದರು. ಆರ್.ಎ. ಗೊರನಾಳ ವಂದಿಸಿದರು.