ನಕಲಿ ಜೈವಿಕ ಉತ್ಪನ್ನ ಮಾರಾಟ ಶಂಕೆ-ಅಧಿಕಾರಿಗಳಿಂದ ತಪಾಸಣೆ
Team Udayavani, Aug 30, 2020, 4:35 PM IST
ವಿಜಯಪುರ: ಜಿಲ್ಲೆಯ ವಿವಿಧ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳ ತಂಡ ಶಂಕಾಸ್ಪದ ರೀತಿಯಲ್ಲಿದ್ದ 9 ಉತ್ಪನ್ನಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.
2020ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಬೆಳವಣಿಗೆ ಹಂತದಲ್ಲಿದೆ. ಈ ಹಂತದಲ್ಲಿ ನೋಂದಣಿ ರಹಿತ ರೋಗ ನಾಶಕಕ್ಕಾಗಿ ನಕಲಿ ಜೈವಿಕ ಉತ್ಪನ್ನಗಳ ಮಾರಾಟ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಕೃಷಿ ಇಲಾಖೆ ಜಾರಿ ಕೋಶ ಬೆಳಗಾವಿ ವಿಭಾಗದ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೊಕಾಶಿ ನೇತೃತ್ವದ ತಂಡ ವಿಜಯಪುರ ಜಿಲ್ಲೆಯ ವಿವಿಧ ತಾಲೂಕುಗಳ ಪರಿಕರ ಮಾರಾಟ ಮಳಿಗೆಗೆ ಭೇಟಿ ನೀಡಿ ತಪಾಸಣೆ ನಡೆಸಿದೆ. ಈ ವೇಳೆ ಇಂಡಿ ಹಾಗೂ ಮುದ್ದೇಬಿಹಾಳ ತಾಲೂಕುಗಳಲ್ಲಿ ತಲಾ ಒಂದೊಂದು ಮಾರಾಟ ಮಳಿಗೆ ಮತ್ತು ನೋಂದಾಯಿತವಲ್ಲದ ಕೀಟನಾಶಕ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ. ಸಂಶಯಾತ್ಮಕ ಜೈವಿಕ ಉತ್ಪನ್ನಗಳಲ್ಲಿರುವ ಅಂಶದ ಕುರಿತು ನಿಖರತೆಗಾಗಿ 9 ಉತ್ಪನ್ನಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಹಿಸಲಾಗಿದೆ.
ಇದಲ್ಲದೇ ವಿಜಯಪುರ ತಾಲೂಕಿನ 6, ಇಂಡಿ ತಾಲೂಕಿನ 5, ಬಸವನಬಾಗೇವಾಡಿ ತಾಲೂಕಿನ 2 ಹಾಗೂ ಮುದ್ದೇಬಿಹಾಳ ತಾಲೂಕಿನ 1 ಮಾರಾಟ ಮಳಿಗೆಗಳಲ್ಲಿ ಕೀಟನಾಶಕದ ಕಾಯ್ದೆ ಉಲ್ಲಂಘನೆ ಸಂಬಂಧ ಮಾರಾಟ ತಡೆ ಆಜ್ಞೆ ನೀಡಲಾಗಿದೆ. ಇದಲ್ಲದೇ ಈ ಸಂಬಂಧ ಎರಡು ತಂಡಗಳನ್ನು ರಚಿಸಿ ವಿಜಯಪುರ, ಇಂಡಿ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ ಮಾರಾಟ ಮಳಿಗೆಗಳನ್ನು ತಪಾಸಣೆ ನಡೆಸಲಾಗಿದೆ.
ರೈತರು ಅಧಿ ಕೃತ ಮಾರಾಟ ಪರವಾನಿಗೆ ಪಡೆದ ಮಾರಾಟಗಾರರಿಂದಲೇ ಕ್ರಿಮಿನಾಶಕ ಖರೀದಿಸಬೇಕು. ಖರೀದಿಸುವ ಕೀಟನಾಶಕಗಳ ಮೇಲೆ ಮುದ್ರಿಸಿರುವ ಲೇಬಲ್ ಪರಿಶೀಲಿಸಿಕೊಳ್ಳಬೇಕು. ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಅನುಮಾನ ಕಂಡು ಬಂದಲ್ಲಿ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ. ಸದರಿ ಮಾರಾಟ ಮಳಿಗೆಗಳು ನ್ಯೂನ್ಯತೆ ಸರಿಪಡಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ. ಇದರೊಂದಿಗೆ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ ತಮ್ಮ ಪರಿಕರಗಳನ್ನು ಸಂಬಂಧಿಸಿದ ನಿಯಮ, ಕಾಯ್ದೆಗಳಂತೆ ಮಾರಾಟ ಮಾಡಬೇಕು. ಇದನ್ನು ಉಲ್ಲಂಘಿಸಿ ನೋಂದಾಯಿತವಲ್ಲದ ಕೀಟನಾಶಕ, ನಕಲಿ ಜೈವಿಕ ಉತ್ಪನ್ನ ಮಾರಾಟ ಮಾಡಿ ರೈತರಿಗೆ ವಂಚಿಸಿದಲ್ಲಿ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಸಲಾಗುತ್ತದೆ ಎಂದು ಕೃಷಿ ಜಂಟಿ ನಿರ್ದೇಶಕ ರಾಜಶೇಖರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ