ವಿಜಯಪುರ: ಖೈದಿ ಮೇಲೆ ಜೈಲರ್ ಹಲ್ಲೆ ಆರೋಪ; ಅಧಿಕಾರಿಗಳು ಸಮಜಾಯಿಷಿ
ರಾಖಿ ಕಟ್ಟಲು ತಂಗಿ ಬಂದಿದ್ದಾಳೆಂದು ಸುಳ್ಳು ಹೇಳಿದ್ದಾನೆ....
Team Udayavani, Aug 12, 2022, 8:46 PM IST
ವಿಜಯಪುರ : ನಗರದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬರ ಮೇಲೆ ಜೈಲಿನ ಸಿಬಂದಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ರಾಖಿ ಕಟ್ಟಲು ತಂಗಿ ಬಂದಿದ್ದಾಳೆಂದು ಸುಳ್ಳು ಹೇಳಿ ಹೊರ ಹೋಗಲು ಯತ್ನಿಸಿದ್ದನ್ನು ತಡೆದುದಕ್ಕೆ ಖೈದಿ ಸ್ವಯಂ ಗಾಯ ಮಾಡಿಕೊಂಡಿದ್ದಾನೆ ಎಂದು ಜೈಲು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ವಿಚಾರಣಾಧೀನ ಖೈದಿ ಮೇಲೆ ಜೈಲರ್ ಹಾಗೂ ಸಿಬಂದಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಕೈದಿ ತುಳಸಿರಾಮ ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ತುಳಸಿರಾಮ, ರಾಖಿ ಕಟ್ಟಲು ಜೈಲಿಗೆ ಬಂದಿದ್ದ ನನ್ನ ಸಹೋದರಿಯ ಭೇಟಿಗೆ ಜೈಲು ಸಿಬಂದಿ ಅವಕಾಶ ನೀಡದೇ, ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಮಾಧ್ಯಮಗಳ ಎದುರು ದೂರಿದ್ದಾನೆ.
ವಿಜಯಪುರ ಜೈಲಿನಲ್ಲಿ ನನಗೆ ಜೀವ ಭಯವಿದ್ದು, ಅಲ್ಲಿ ನನಗೆ ಏನಾದರೂ ಸಮಸ್ಯೆ ಆದಲ್ಲಿ ಕಾರಾಗೃಹ ಅಧಿಕಾರಿ-ಸಿಬಂದಿ ಹೊಣೆಗಾರರು ಎಂದು ಆರೋಪಿಸಿದ್ದಾನೆ.
ಖೈದಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜೈಲು ಅಧಿಕಾರಿಗಳು, ಜೈಲು ಅಧಿಕಾರಿ-ಸಿಬಂದಿ ಅನುಮತಿ ಇಲ್ಲದೇ ಖೈದಿ ತುಳಸಿರಾಮ ಬ್ಯಾರಕ್ನಿಂದ ಹೊರ ಬರಲು ಮುಂದಾಗ ಅಧಿಕಾರಿಗಳು ಆಕ್ಷೇಪಿಸಿದ್ದಾನೆ. ಆದರೆ ರಾಖಿ ಕಟ್ಟುವುದಕ್ಕಾಗಿ ಸಹೋದರಿ ಬಂದಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ನಿನಗೆ ಬಂಧುಗಳೊಂದಿಗಿನ ಸಂದರ್ಶನಕ್ಕೆ ಅವಕಾಶವಿಲ್ಲ, ಒಳಗಡೆ ಹೋಗು ಎಂದು ಸೂಚಿಸಿದ್ದಾರೆ.ಇದರಿಂದ ರೊಚ್ಚಿಗೆದ್ದ ತುಳಸಿರಾಮ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡಿದ್ದರಿಂದ, ಕೊಂಚ ರಕ್ತ ಬಂದಿದೆ ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜೆ.ಮ್ಯಾಗೇರಿ ಸಮಜಾಯಿಷಿ ನೀಡಿದ್ದಾರೆ.