ಪಾನಮತ್ತನಿಂದ ಜೀವ ಬೆದರಿಕೆ: ಭದ್ರತೆ ಕೋರಿ ವಕೀಲ ಮನವಿ
Team Udayavani, Jun 4, 2022, 3:57 PM IST
ವಿಜಯಪುರ: ನಗರದ ಸಜ್ಜನ ಗಾಣಿಗರ ಸೇವಾ ಸಂಘದ ಸಮಸ್ಯೆಗಳ ವಿಚಾರವಾಗಿ ವ್ಯಕ್ತಿಯೊಬ್ಬರು ಕುಡಿದ ಮತ್ತಿನಲ್ಲಿ ತಡರಾತ್ರಿ ತಮ್ಮ ಕಚೇರಿಗೆ ಆಗಮಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕೂಡಲೇ ತಮಗೆ ರಕ್ಷಣೆ ನೀಡುವಂತೆ ಕೋರಿ ನಗರದ ವಕೀಲ ಡಾ|ಬಾಬು ಸಜ್ಜನ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಡಾ| ಬಾಬು ಸಜ್ಜನ, ನನ್ನ ಸಹೋದರ ಬಸವರಾಜ ಸಜ್ಜನ ಜೊತೆ ಮೇ 28ರಂದು ನಗರದಲ್ಲಿರುವ ಸದಾಶಿವನಗರ ಬಡಾವಣೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ರಾತ್ರಿ 10:30ರ ಸುಮಾರಿಗೆ ನನ್ನ ಕಚೇರಿಗೆ ಆಗಮಿಸಿದ ಪಾನಮತ್ತ ಸಿದ್ದಲಿಂಗ ಕೊರಲೂರು (ಸಜ್ಜನ) ಎಂಬ ವ್ಯಕ್ತಿ ಸಜ್ಜನ ಗಾಣಿಗರ ಸೇವಾ ಸಂಘದವರು ಹೇಳಿದಂತೆ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.
ನನಗೆ ಪ್ರಾಣ ಬೆದರಿಕೆ ಹಾಕಿರುವ ವ್ಯಕ್ತಿಯ ಹಿಂದೆ ಕೆಲವರ ಸಂಚು ಅಡಗಿದ್ದು, ಜಲನಗರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ದೃಶ್ಯಾವಳಿ ಸಮೇತ ಪ್ರಕರಣ ದಾಖಲಿಸಿದ್ದೇನೆ. ಆದರೆ ಅನಾರೋಗ್ಯಕರ ಬೆಳವಣಿಗೆಯಿಂದ ನನಗೆ ಜೀವ ಭಯವಿದ್ದು ಸಂಬಂಧಿ ಸಿವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಗುರಲಿಂಗಪ್ಪ ಸಜ್ಜನ, ಶಿವಕುಮಾರ ಸಜ್ಜನ, ಡಾ| ಶ್ರೀಶೈಲಪ್ಪ ಸಜ್ಜನ, ವಿ.ಎಸ್. ನಾಸಿ, ಪಿ.ಪಿ. ಖ್ಯಾತನ, ಕೆ.ಎನ್. ಮೇಟಿ, ಮಹದೇವಪ್ಪ ದೇವರ ಸೇರಿದಂತೆ ಇತರರು ಇದ್ದರು.