ಮಲ್ಲಿಕಾರ್ಜುನ ಅವಟಿಗೆ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ
Team Udayavani, Sep 4, 2021, 9:18 PM IST
ವಿಜಯಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ವಿಜಯಪುರ ಜಿಲ್ಲೆಯ ಮಲ್ಲಿಕಾರ್ಜುನ ಅವರಿಗೆ ದಕ್ಕಿದೆ.
ಜಿಲ್ಲೆಯ ಬಬಲೇಶ್ವರ ಪಟ್ಟಣದ ಅನುದಾನಿತ ಶ್ರೀಶಾಂತವೀರ ಕಲಾ, ವಿಜ್ಞಾನ, ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳ ವಿಷಯ ಉಪನ್ಯಾಸಕರಾಗಿರುವ ಮಲ್ಲಿಕಾರ್ಜುನ ಅವಟಿ, 2021-22ನೇ ಸಾಲಿನ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಷಯ ಬೋಧನೆಯಲ್ಲಿ ಪರಿಣಾಮಕಾರಿ ಕ್ರಮಗಳ ಅನುಸರಣೆ ಕಾರಣ ಇವರ ವಿಷಯದಲ್ಲಿ ಹಲವು ವಿದ್ಯಾರ್ಥಿಗಳು ಶೇಕಡಾ ನೂರರಷ್ಟು ಅಂಕ ಪಡೆದಿರುವುದು ಮಲ್ಲಿಕಾರ್ಜುನ ಅವರ ಗುಣಮಟ್ಟದ ಬೋಧನೆಗೆ ಸಾಕ್ಷಿ.
ಉಪನ್ಯಾಸಕ ವೃತ್ತಿಪರತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ, ಸಮಾಜಸೇವೆ, ಸರ್ಕಾರಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.
ವಿವಿಧ ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿರುವ ಮಲ್ಲಿಕಾರ್ಜುನ ಅವಟಿ, ಜಿಲ್ಲೆಯ ಸಾಹಿತ್ಯ ಸಂದರ್ಭದಲ್ಲಿ ಹಲವು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ತಮ್ಮ ಸೇವೆ ನೀಡಿದ್ದಾರೆ.
ರಾಜ್ಯ ಮಟ್ಟದ ಹಲವು ಸ್ಪರ್ಧೆ, ಕಾರ್ಯಾಗಾರ, ಕಮ್ಮಟಗಳಂಥ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪ್ರಶಸ್ತಿಗಳನ್ನು ಬಾಚಿದ್ದಾರೆ.
ಇವರಲ್ಲಿರುವ ಬಹುಮುಖ ಪ್ರತಿಭಾ ವ್ಯಕ್ತಿತ್ವಕ್ಕೆ ಇದೀಗ ಸರ್ಕಾರ ಪ್ರಕಟಿಸಿರುವ ಉತ್ತಮ ಉಪನ್ಯಾಸಕ 10 ಪ್ರಶಸ್ತಿಗಳಲ್ಲಿ ಮಲ್ಲಿಕಾರ್ಜುನ ಸ್ಥಾನ ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿ.
ತಮಗೆ ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ, ಕರ್ತವ್ಯ ಬದ್ದತೆಗೆ ಪ್ರಶಸ್ತಿ ಸಂದಿರುವುದು ನನ್ನ ಹೊಣೆಗಾರಿಕೆ ಹೆಚ್ಚಿಸಿದೆ. ಬೋಧನೆಯಲ್ಲಿ ಇನ್ನೂ ಪರಿಣಾಮಕಾರಿ ಸೇವೆ ನೀಡುವ ಜವಾಬ್ದಾರಿಯನ್ನೂ ಹೇರಿದೆ ಎಂದು ಪ್ರತಿಕ್ರಿಯಿಸಿದ್ದಾರೆ.