ಯೋಗದಿಂದ ಮೇರಾ ಭಾರತ ಮಹಾನ್
Team Udayavani, Jan 1, 2019, 7:38 AM IST
ವಿಜಯಪುರ: ಸದೃಢ ದೇಹದಿಂದ, ಹೃದಯದಿಂದ ಶ್ರದ್ಧಾವಾನ, ಆಚರಣೆಯಿಂದ ಚರಿತ್ರವಾನವಾದರೆ ಮೇರಾ ಭಾರತ ಮಹಾನ್ ಆಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ಎಲ್ಲ ರೀತಿಯ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಖ್ಯಾತ ಯೋಗ ಗುರು ಬಾಬಾ ರಾಮದೇವ ತಿಳಿಸಿದರು.
ಸೋಮವಾರ ಕಗ್ಗೋಡ ಗ್ರಾಮದಲ್ಲಿ ಭಾರತೀಯ ವಿಕಾಸ ಸಂಗಮದಲ್ಲಿ ಪಾಲ್ಗೊಂಡು ಯೋಗ, ಭಾರತೀಯ ಸಂಸ್ಕೃತಿಯ ಕುರಿತು ಮಾತನಾಡಿದ ಅವರು, ಯೋಗ ಜೀವನದ ದೈನಂದಿನ ಅಭ್ಯಾಸವಾಗಬೇಕು. ಬೇಗ ಮಲಗಬೇಕು, ಬೇಗ ಏಳಬೇಕು, ತಡವಾಗಿ ಏಳುವುದು ಪಾಪದ ಕೆಲಸ ಎಂದು ರಾಮಾಯಣ ಹೇಳುತ್ತದೆ.
ಪ್ರತಿಯೊಬ್ಬರು ಬೆಳಗ್ಗೆ ಯೋಗಿಯಾಗಬೇಕು, ದಿನವೀಡಿ ಕರ್ಮಯೋಗಿಯಾಗಬೇಕು. ನಾನು ಕಳೆದ 40 ವರ್ಷಗಳಿಂದ ಒಂದೇ ಒಂದು ದಿನ ವಿಶ್ರಾಂತಿ ಪಡೆದುಕೊಂಡಿಲ್ಲ, ಹಿಮಾಲಯಕ್ಕೂ ಹೋದರೂ ನನಗೆ ಚಳಿಯಾಗುವುದಿಲ್ಲ, ಇದಕ್ಕೆಲ್ಲ ನನಗೆ ಚೈತನ್ಯ ನೀಡಿದ್ದು ಯೋಗ ಹಾಗೂ ಪ್ರಾಣಾಯಾಮವೇ.
ಯೋಗ ಬಲದಿಂದಲೇ ಕೃಷಿ ಕುಟುಂಬದಿಂದ ಬಂದ ನಾನು ದೊಡ್ಡ ದೊಡ್ಡ ವಿದ್ವಾಂಸರ ಚಳಿ ಬಿಡಿಸುತ್ತಿದ್ದೇನೆ. ಯೋಗಾಭ್ಯಾಸ ಮಾಡುವ ಪರಿಪಾಠವುಳ್ಳ ಚಹಾ ಮಾರುವ ಬಾಲಕ ದೇಶದ ಪ್ರಧಾನಿಯಾಗಿದ್ದಾನೆ. ಯೋಗ ಮಾಡುವ ಯೋಗಿ ಮುಖ್ಯಮಂತ್ರಿಯಾಗಿದ್ದಾನೆ. ಹಾಗಾದರೆ ಯೋಗ ಮಾಡಿದರೆ ನೀವು ಏಕೆ ಎಂಪಿ, ಎಂಎಲ್ಎ ಆಗಬಾರದು ಎಂದು ಬಾಬಾ ಹಾಸ್ಯದ ಹೊನಲಿನ ಮೂಲಕ ಯೋಗದ ಮಹತ್ವ ವಿವರಿಸಿದರು.
ಪ್ರತಿಯೊಬ್ಬರು ವ್ಯಕ್ತಿಯಾಗಿ ಬದುಕದೇ ಭಾರತವಾಗಿ ಬದುಕಬೇಕು. ಹಿಮಾಲಯವೇ ನನ್ನ ಶಿರ, ಉಳಿದವುಗಳೆಲ್ಲ ನನ್ನ ಬಲ ಭುಜ, ದೇಹದ ಅಂಗಗಳು ಎಂದು ಭಾವಿಸಿ ಬದುಕಬೇಕು, ಈ ಸಂಕಲ್ಪ ಮಾಡಬೇಕು. ಇಂಥ ಮನೋಭಾವ ಇಲ್ಲದ ಇಂದಿನ ಸಂದರ್ಭದಲ್ಲಿ ಮಕ್ಕಳು ಅನಗತ್ಯ ಮಾನಸಿಕ ಒತ್ತಡದಿಂದ ಬಳಲು ಕಾರಣವಾಗಿದೆ. ಇದಕ್ಕೆಲ್ಲ ಮಕ್ಕಳಿಗೆ ಬಾಲ್ಯದಲ್ಲಿಯೇ ಯೋಗಾಭ್ಯಾಸ ರೂಡಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ದೂರ ಇರಿಸುವ ಜೊತೆಗೆ ಮಾಡುವ ಕೆಲಸವನ್ನು ಶ್ರದ್ಧೆಯಿಂಧ ಮಾಡಲು ಸಾಧ್ಯವಿದೆ ಎಂದು ವಿಶ್ಲೇಷಿಸಿದರು.
ಗೋ ಆಧಾರಿತ ಕೃಷಿಯಿಂದ ಸಮೃದ್ಧ ಭಾರತ ನಿರ್ಮಾಣ ಸಾಧ್ಯವಿದೆ. ಗೋವು ಕೇವಲ ಒಂದು ಜೀವವಲ್ಲ ಅದು ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ನೀಡುವ ದೈವಿ ಸ್ವರೂಪ. ಅವೈಜ್ಞಾನಿಕ ರಸಗೊಬ್ಬರ ಬಳಕೆಯಿಂದ ಭೂಮಿ ಬಂಜರಾಗಿದೆ. ಹೆಚ್ಚು ಉತ್ಪಾದನೆ ಹುಚ್ಚಿನಲ್ಲಿ ಪ್ರತಿ ಅನ್ನದ ಬೆಳೆಗೂ ವಿಷ ಬೆರೆಸುವ ವ್ಯವಸ್ಥೆ ತಂದುಕೊಂಡಿದ್ದೇವೆ. ಇದರಿಂದ ಹಲವು ದೈಹಿಕ ಸಮಸ್ಯೆಗಳು ಸೃಷ್ಟಿಯಾಗಿ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು.
ಭಾರತೀಯ ಸಂಸ್ಕೃತಿ, ಧರ್ಮ ಅತ್ಯಂತ ಶ್ರೇಷ್ಠ. ಭಾರತೀಯ ಸಂಸ್ಕೃತಿ ಇಬ್ಬರು ಅಥವಾ ಮೂವರು ವ್ಯಕ್ತಿಗಳಿಗೆ ಸೀಮಿತವಾಗುವುದಿಲ್ಲ. ಪ್ರಪಂಚ ಬೇರೆ ಧರ್ಮದ ಸಂಸ್ಕೃತಿಗಳು ಕೇವಲ ಮೂರು ಅಥವಾ ನಾಲ್ಕು ವ್ಯಕ್ತಿಗಳಿಗೆ ಸೀಮಿತವಾಗುತ್ತದೆ ಎಂದರು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಕೋಟಿ ಕೋಟಿ ಸಂತ ಗಣಗಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ವಿಜ್ಞಾನ, ಧರ್ಮ, ಅಧ್ಯಾತ್ಮಿಕತೆ ಹೀಗೆ ಎಲ್ಲ ವಿಷಯಗಳ ಹೂರಣವಿದೆ. ಕುರ್ ಆನ್, ಬೈಬಲ್ನಲ್ಲಿ ಹಲವಾರು ಒಳ್ಳೆಯ ವಿಷಯಗಳಿಗೆ, ಬದುಕುವ ದಾರಿ ಇದೆ, ಆದರೆ ವಿಜ್ಞಾನವಿಲ್ಲ, ಗಣಿತವಿಲ್ಲ, ವೈದ್ಯಕೀಯ ವಿಜ್ಞಾನವಿಲ್ಲ, ಈ ರೀತಿಯ ಯಾವುದೇ ಅಂಶಗಳು ಕುರ್ಆನ್, ಬೈಬಲ್ನಲ್ಲಿ ಕಂಡು ಬರುವುದಿಲ್ಲ ಎಂದು ಬಾಬಾ ವಿಶ್ಲೇಷಿಸಿದರು.
ಬಾಬಾ ರಾಮದೇವ ಕನ್ನಡ ಪ್ರೇಮ: ನಮಸ್ಕಾರ, ಚೆನ್ನಾಗಿದ್ದೀರಾ ಎಂದೆಲ್ಲ ಕನ್ನಡದಲ್ಲಿ ಕೆಲ ಪದಗಳನ್ನು ಕನ್ನಡದ ಸಮಸ್ತ ಸಹೋದರ-ಸಹೋದರಿಯರೇ ನಮಸ್ಕಾರ, ಕನ್ನಡಿಗರು ಸ್ವಭಾವ, ದೇಶಭಕ್ತಿ, ಅಧ್ಯಾತ್ಮಿಕವಾಗಿ ಶ್ರೀಮಂತರು… ಎಂದು ಕನ್ನಡದಲ್ಲಿಯೇ ಹೇಳಿದರು. ನನಗೂ ಕನ್ನಡ ಬರುತ್ತದೆ ಎಂದು ತಮ್ಮ ಕನ್ನಡ ಪ್ರೇಮ ಮೆರೆದರು. ಬಾಬಾ ರಾಮದೇವ ಕನ್ನಡದಲ್ಲಿ ಮಾತನಾಡುತ್ತಲೇ ಸಭಿಕರ ಚಪ್ಪಾಳೆ ಸುರಿಮಳೆ ಹಾಗೂ ಹರ್ಷೋದ್ಘಾರ ಕೇಳಿಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ