ಕೋವಿಡ್ ಅನುದಾನದಡಿ ನಡೆದ ಅವ್ಯವಹಾರದ ತನಿಖೆಯಾಗಲಿ
ತನಿಖೆ ನಡೆಸಲು ಎನ್ಎಸ್ಯುಐ ಆಗ್ರಹ
Team Udayavani, Jul 9, 2020, 4:23 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುದ್ದೇಬಿಹಾಳ: ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಿಡುಗಡೆ ಮಾಡಿರುವ 3,300 ಕೋಟಿ ಕೋವಿಡ್ ಅನುದಾನದಲ್ಲಿ ಅವ್ಯವಹಾರ ನಡೆದಿದೆ. ಇದರ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಪಡಿಸಲು ಕೇಂದ್ರ ಸರ್ಕಾರವು ಸಿಬಿಐ ಅಥವಾ ತನ್ನ ಯಾವುದೇ ಏಜನ್ಸಿಗಳ ಮೂಲಕ ತನಿಖೆ ನಡೆಸಬೇಕು ಎಂದು ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ)ನ ವಿಜಯಪುರ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಮತ್ತು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದೆ ಎನ್ನಲಾದ ಉಪಕರಣ ಖರೀದಿ ಪಟ್ಟಿ ಪ್ರದರ್ಶಿಸಿ ಮಾತನಾಡಿದ ಅವರು, ಕೋವಿಡ್-19 ನಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಇವರು ಜನರ ಜೊತೆ ಚಲ್ಲಾಟ ಆಡುತ್ತಿದ್ದಾರೆ. ವೈದ್ಯಕೀಯ ಉಪಕರಣ, ಸಾಮಗ್ರಿಗಳಿಗಾಗಿ ಸಾರ್ವಜನಿಕರು ಕೊಟ್ಟ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಪಾದಿಸಿದರು. ಈಗಾಗಲೇ ಕಾಂಗ್ರೆಸ್ ಪಕ್ಷ ಕೋವಿಡ್-19 ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಜೊತೆ ಕೈ ಜೋಡಿಸಿದೆ. ಎಲ್ಲ ರೀತಿಯ ಸಹಕಾರ ನೀಡಿದೆ. ಹೀಗಿದ್ದರೂ ಹಗರಣ ನಡೆದಿರುವುದನ್ನು ಖಂಡಿಸುತ್ತೇವೆ. ಇದನ್ನು ರಾಜ್ಯದ 6.5 ಕೋಟಿ ಜನರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂಥ ಸಂದರ್ಭ ಹಗರಣದ ಮೂಲಕ ಕೀಳು ರಾಜಕಾರಣಕ್ಕಿಳಿದಿರುವುದು ಖಂಡನೀಯ ಎಂದರು.
1,000 ವೆಂಟಿಲೇಟರ್ ಖರೀದಿಸಿದ್ದು, ಪ್ರತಿಯೊಂದಕ್ಕೆ 4 ಲಕ್ಷ ರೂ. ಮಾರುಕಟ್ಟೆ ಬೆಲೆ ಇದೆ. ಇದಕ್ಕೆ 40 ಕೋಟಿ ರೂ. ಹಣ ತಗಲುತ್ತದೆ. ಆದರೆ ರಾಜ್ಯ ಸರ್ಕಾರ ನೀಡಿದ್ದು 120 ಕೋಟಿ. 4.89 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದು, ಪ್ರತಿಯೊಂದಕ್ಕೆ 995 ರೂ. ಇದ್ದು ಒಟ್ಟು 48.65 ಕೋಟಿ ತಗಲುತ್ತದೆ. ಆದರೆ ಸರ್ಕಾರ ನೀಡಿದ್ದು 150 ಕೋಟಿ ಎಂದ ಅವರು, 11 ಸಾಮಗ್ರಿಗಳ ಮಾರುಕಟ್ಟೆ ಮತ್ತು ಸರ್ಕಾರದ ಖರೀದಿ ದರ ವ್ಯತ್ಯಾಸದ ಪಟ್ಟಿಯನ್ನು ಮಾಧ್ಯಮದವರ ಎದುರು ಪ್ರದರ್ಶಿಸಿದರು.