ಕಾರ್ಮಿಕರಿಗೆ ಸಾಲಗಾರರು ಕಿರುಕುಳ ನೀಡಬೇಡಿ
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮನವಿ ಕಾರ್ಮಿಕರಿಗೆ ಹೋಮ್ ಕ್ವಾರಂಟೈನ್ನಲ್ಲಿರಲು ಸೂಚನೆ
Team Udayavani, May 3, 2020, 12:05 PM IST
ಮುದ್ದೇಬಿಹಾಳ: ಬಸ್ ನಿಲ್ದಾಣದಲ್ಲಿ ಕೂಲಿ ಕಾರ್ಮಿಕ ಕುಟುಂಬದ ಅಳಲು ಆಲಿಸಿದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ.
ಮುದ್ದೇಬಿಹಾಳ: ಬೇರೆ ಜಿಲ್ಲೆಗೆ ದುಡಿಯಲು ಗುಳೆ ಹೋಗಿ, ಲಾಕ್ಡೌನ್ದಿಂದಾಗಿ ಖಾಲಿ ಕೈಲಿ ತಮ್ಮೂರಿಗೆ ಮರಳಿದ ಬಡ ಕೂಲಿಕಾರರಿಗೆ ಸಾಲಗಾರರು ಯಾವುದೇ ರೀತಿ ಕಿರುಕುಳ ಕೊಡಬಾರದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮನವಿ ಮಾಡಿದ್ದಾರೆ.
ಧಾರವಾಡ ಸೇರಿ ವಿವಿಧ ಜಿಲ್ಲೆಗೆ ದುಡಿಯಲು ಹೋಗಿ ಶನಿವಾರ ಇಲ್ಲಿನ ಬಸ್ ನಿಲ್ದಾಣಕ್ಕೆ ಬಂದಿಳಿದ ತಾಳಿಕೋಟೆ ಭಾಗದ ಕಾರ್ಮಿಕರ ಅಳಲು ಆಲಿಸಿ ಅವರು ಮಾತನಾಡಿದರು. ಸಾಲಗಾರರು ಯಾರಿಗಾದರೂ ಕಿರುಕುಳ ಕೊಟ್ಟಲ್ಲಿ ನನ್ನ ಗಮನಕ್ಕೆ ತನ್ನಿ. ನಿಮ್ಮ ನೆರವಿಗೆ ನಾನಿದ್ದೇನೆ. ನೀವ್ಯಾರೂ ಕಣ್ಣೀರು ಸುರಿಸೋದು ಬೇಡ. ಕೋವಿಡ್ ಲಾಕಡೌನ್ ಬಹಳಷ್ಟು ಬಡವರ ಜೀವನ ತೊಂದರೆಗೆ ಸಿಲುಕುವಂತೆ ಮಾಡಿದೆ. ಆದರೂ ಕೆಲದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಅಲ್ಲಿವರೆಗೂ ತಾಳ್ಮೆಯಿಂದ ಇರಿ. ಯಾವುದೇ ಕಾರಣಕ್ಕೂ ದುಡುಕಬೇಡಿ ಎಂದು ಧೈರ್ಯ ತುಂಬಿದರು.
ಧಾರವಾಡದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಕುಟುಂಬ ಸಮೇತ ದುಡಿಯಲು ಹೋಗಿ ಮರಳಿ ಬಂದಿದ್ದ ವಿಠ್ಠಲ ಎಂಬಾತ ಶಾಸಕರ ಎದುರು ಕಣ್ಣೀರು ಸುರಿಸುತ್ತ, ಕೋವಿಡ್ ವೈರಸ್
ಬಂದು ನಮ್ಮಂಥವರ ಬದುಕನ್ನೇ ಕಸಿದುಕೊಂಡಿದೆ. ಉಟ್ಟ ಬಟ್ಟೆಯಲ್ಲೇ ನಮ್ಮೂರಿಗೆ ಹೋಗುತ್ತಿದ್ದೇವೆ. ದುಡಿಯಲು ಹೋಗುವಾಗ ಒಯ್ದಿದ್ದ ಕಾಳುಕಡಿ ಖಾಲಿಯಾಗಿದೆ. ಊರಿಗೆ ಹೋದ ಮೇಲೆ ದುಡಿಯಲು ಹೋಗುವಾಗ ಮಾಡಿದ್ದ ಸಾಲ ತಿರುಗಿಸುವಂತೆ ಸಾಲಗಾರರು ಕಾಟ ಕೊಟ್ಟಲ್ಲಿ ಅವರಿಗೆ ಕೊಡಲು ನಮ್ಮ ಬಳಿ ಹಣವೂ ಇಲ್ಲ. ಏನು ಮಾಡೋದೆಂದು ದಿಕ್ಕೇ ತೋಚದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ.
ಶಾಸಕರು ಆ ಕುಟುಂಬಕ್ಕೆ ತಮ್ಮ ಮನೆಯಿಂದ ಹೊಸ ಬಟ್ಟೆ ತರಿಸಿಕೊಟ್ಟರು. ಸಾಲಗಾರರು ಕಿರುಕುಳ ಕೊಟ್ಟರೆ ನನ್ನ ಮೊಬೈಲ್ಗೆ ಕರೆ ಮಾಡಿ ಎಂದು ಕುಟುಂಬಕ್ಕೆ ಧೈರ್ಯ ತುಂಬಿದರು. ಇಂಥ ಪ್ರಕರಣಗಳ ಬಗ್ಗೆ ಗಮನಹರಿಸುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿದರು. ಇದೇ ವೇಳೆ ಶಾಸಕರು ಸಾರಿಗೆ ಬಸ್ ಮೂಲಕ ಬಂದ ಎಲ್ಲ ಕಾರ್ಮಿಕರಿಗೆ ಮೊದಲು ಊಟಕ್ಕೆ ಅವಕಾಶ ಮಾಡಿಕೊಟ್ಟು ನಂತರ 5 ಕೆಜಿ ಗೋ ದಿ ಹಿಟ್ಟಿನ ಜೊತೆಗೆ ಕುಡಿವ ನೀರಿನ ಬಾಟಲಿ, ಆಹಾರ ಸಾಮಗ್ರಿ ಕಿಟ್ ವಿತರಿಸಿದರು. ಬಸ್ಗಳ ಚಾಲಕರಿಗೂ ಊಟ, ಆಹಾರ ಸಾಮಗ್ರಿ ಕಿಟ್ ನೀಡಿದರು. ಸಿಪಿಐ ಆನಂದ ವಾಗಮೋಡೆ, ಪಿಎಸ್ಐ ಮಲ್ಲಪ್ಪ ಮಡ್ಡಿ, ನಗರ ಕೋವಿಡ್-19 ತಂಡದ ಮೇಲ್ವಿಚಾರಕ ಎಂ.ಎಸ್.ಗೌಡರ ಮತ್ತಿತರರು ಇದ್ದರು.