ಕೊಳೆತ ಆಹಾರ ಧಾನ್ಯ ಚೀಲ ಸುಟ್ಟ ಅಂಗನವಾಡಿ ಕಾರ್ಯಕರ್ತೆ
Team Udayavani, Jun 26, 2020, 1:37 PM IST
ನಾಲತವಾಡ: ಲೊಟಗೇರಿ ಅಂಗನವಾಡಿಯಲ್ಲಿ ಕೊಳೆತಿದ್ದ ಆಹಾರ ದಾಸ್ತಾನು ಸುಟ್ಟು ಹಾಕಲಾಯಿತು.
ನಾಲತವಾಡ: ಸಮೀಪದ ಲೊಟಗೇರಿ ಅಂಗನವಾಡಿ ಕಾರ್ಯಕರ್ತೆಯ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಹಾರ ಧಾನ್ಯ ದುರ್ಬಳಕೆಗೆ ಕಾರಣ ಕೇಳಿ ಅಧಿಕಾರಿಗಳು ನೀಡಿದ ನೋಟಿಸ್ಗೆ ಕ್ಯಾರೆ ಅನ್ನದೆ ಗುರುವಾರ ಕೊಳೆತಿದ್ದ ಆಹಾರ ಚೀಲಗಳನ್ನು ಸುಟ್ಟು ಹಾಕಿದ್ದಾರೆ.
ಈಚೆಗಷ್ಟೇ ಅಂಗನವಾಡಿಗೆ ಭೇಟಿ ನೀಡಿ ಹೋಗಿದ್ದ ಸಿಡಿಪಿಒ ಸಾವಿತ್ರಿ ಗುಗ್ಗರಿ ಅವರು ಗುರುವಾರ ಕೊಳೆತು ಹೋಗಿದ್ದ ದಾಸ್ತಾನಿನ ಲೆಕ್ಕ ಮಾಡಿಕೊಂಡು ಬರಲು ಮೇಲ್ವಿಚಾರಕರನ್ನು ಕಳುಹಿಸಿದ್ದರು. ಅದರಂತೆ ಮೇಲ್ವಿಚಾರಕಿಯೊಬ್ಬರು ಅಂಗನವಾಡಿಗೆ ಬಂದು ಕೊಳೆತು ಹೋಗಿದ್ದ ಆಹಾರ ಧಾನ್ಯಗಳೆಷ್ಟು ಎಂಬುದನ್ನು ಪಟ್ಟಿ ಮಾಡಿಕೊಳ್ಳುವಲ್ಲಿ ನಿರತವಾಗಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅವರ ಕುಟುಂಬದವರು ಕಣ್ತಪ್ಪಿಸಿ ಕೊಳೆತಿದ್ದ ಆಹಾರ ಧಾನ್ಯ ಚೀಲಗಳನ್ನು ಸುಟ್ಟು ಹಾಕಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕೊಳೆತು ಹೋಗಿದ್ದ ಆಹಾರ ದಾಸ್ತಾನಿನ ಲೆಕ್ಕ ಮಾಡಿಕೊಂಡು ಬರಲು ಸಿಡಿಪಿಒ ಅವರು ತಿಳಿಸಿದ್ದರು. ಅದರಂತೆ ದಾಸ್ತಾನಿನ ಲೆಕ್ಕ ತೆಗೆದುಕೊಳ್ಳುವ ವೇಳೆ ಕಣ್ತಪ್ಪಿಸಿ ಅಂಗನವಾಡಿ ಹಿಂದೆ ಆಹಾರ ಸುಟ್ಟು ಹಾಕಿದ್ದಾರೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಂಗನವಾಡಿ ಕಾರ್ಯಕರ್ತೆ ಈ ಕುರಿತು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನು ಇಲ್ಲ.
ವಿಜಯಲಕ್ಷ್ಮೀ ಮಂಟೂರಕರ್,
ಮೇಲ್ವಾಚಾರಕಿ