ಬೇರು ಮಟ್ಟದಲ್ಲಿ ಪಕ್ಷ ಬಲಗೊಳಿಸಲು ಕಾರ್ಯಕರ್ತರಿಗೆ ಪಾಟೀಲ ಕರೆ
Team Udayavani, Mar 4, 2018, 1:34 PM IST
ಚಡಚಣ: ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಲು ಜೆಡಿಎಸ್ ಕಾರ್ಯಕರ್ತರು ಬೇರು ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಬೇಕು ಎಂದು ಜೆಡಿಎಸ್ ಹಿರಿಯ ಮುಖಂಡ ಎಂ.ಆರ್. ಪಾಟೀಲ ಕರೆ ನೀಡಿದರು.
ಪಟ್ಟಣದ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಚಡಚಣ ಬ್ಲಾಕ್ ಜೆಡಿಎಸ್ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಅಲ್ಲಿರುವ ಮುಖಂಡರು ಜೈಲುವಾಸ ಅನುಭವಿಸಿದವರಾಗಿದ್ದಾರೆ. ರಾಜ್ಯದ ಜನರ, ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಅಧಿಕಾರಕ್ಕೆ ಬಂದರೆ ಒಬ್ಬರನ್ನೊಬರು ಜೈಲಿಗೆ ಕಳುಹಿಸುವ ಮಾತನ್ನಾಡುತ್ತಿರುವುದು ದುರದೃಷ್ಟಕರ ಎಂದು ಲೇವಡಿ ಮಾಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್. ಎಲ್. ಉಸ್ತಾದ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಮತ್ತು ಅನಿಷ್ಠ ಸರ್ಕಾರವನ್ನು ತಮ್ಮ 35 ವರ್ಷದ ರಾಜಕೀಯ ಜೀವನದಲ್ಲಿ ಎಂದು ನೋಡಿಲ್ಲ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರಚನೆಯಾದರೆ ಕಳಂಕ ರಹಿತ, ಪಾರದರ್ಶಕ ಹಾಗೂ ರೈತರ ಪರ ಆಡಳಿತ ನೀಡುವುದರಲ್ಲಿ ಸಂಶಯವಿಲ್ಲ ಎಂದರು.
ನಾಗಠಾಣ ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಾದಶೀವ ಜಿತ್ತಿ, ಮುಖಂಡ ಹನುಮಂತ ಹೂನಳ್ಳಿ, ವಿಠ್ಠಲ ವಡಗಾಂವ, ರಾಜು ಚವ್ಹಾಣ ಮಾತನಾಡಿ, ಜೆಡಿಎಸ್ ಅಭ್ಯರ್ಥಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡ ದೇವಾನಂದ ಚವ್ಹಾಣ ಪರ ಮತದಾರರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ.
ಮುಂಬರುವ ವಿಧಾನ ಸಭೆ ಚುನಾವಣೆ ಇನ್ನೂ ಕೇವಲ ಎರಡು ತಿಂಗಳಲ್ಲಿ ಜರುಗಲಿದ್ದು ಕಾರ್ಯಕರ್ತರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ದೇವೇಗೌಡರ, ಕುಮಾರಸ್ವಾಮಿ ಅವರ ಕೈ ಬಲಪಡಿಸಲು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಜೆಡಿಎಸ್ ತತ್ವ ಸಿದ್ಧಾಂತಗಳನ್ನು ತಿಳಿಸಿ ನಾಗಠಾಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ನಾಗಠಾಣ ಮತಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಮಾತನಾಡಿ, ಒಂದು ಬಾರಿ ಜನರ ಸೇವೆ ಮಾಡಲು ಅವಕಾಶ ನೀಡಿದರೆ ಅವರ ಋಣ ತಿರಿಸಲು ಬದ್ಧನಾಗಿರುವುದಾಗಿ ತಿಳಿಸಿದರು.
ಸಮಾವೇಶದಲ್ಲಿ ಮುಖಂಡರಾದ ಸಿಕಂದರ ಸಾವಳಸಂಗ, ಮುರ್ತುಜ್ ನದಾಫ್, ರಾಜು ಡೋಣಗಾಂವ, ಜಕ್ಕಣ್ಣ ಬಿರಾದಾರ, ಅಪ್ಪುಗೌಡ ಪಾಟೀಲ, ಸುರೇಶ ಬಗಲಿ, ಚಂದ್ರಕಾಂತ ಸಿಂಧೆ, ಲಾಲ್ ಸಾಬ ಅತ್ತಾರ, ಮಹಾದೇವ ಶಿಂಧೆ, ಭೀಮಾಶಂಕರ ವಾಳಿಖೀಂಡಿ, ರಫಿಕ್ ಮಕಾನದಾರ, ಮಲ್ಲು ಕಟ್ಟಿಮನಿ, ಸುಶೀಲಾಬಾಯಿ ಶಿಂಧೆ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.