ಅಪಘಾತಕ್ಕೀಡಾದ ಕಾರಿಗೆ ಬೈಕ್ ಢಿಕ್ಕಿ: ಮಹಿಳೆ ಸಾವು; ಇಬ್ಬರು ಚಿಂತಾಜನಕ
Team Udayavani, Jan 2, 2022, 10:40 AM IST
ಮುದ್ದೇಬಿಹಾಳ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕು ಹೊಕ್ರಾಣಿ ಕ್ರಾಸ್ ಬಳಿ ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ಮೃತಳನ್ನು ಮಾರುತಿ ಸ್ವಿಪ್ಟ್ ಕಾರಲ್ಲಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಿವಾಸಿ ದೀಪಾ ವೆಂಕಟೇಶ ಶಿವಣಗಿ (31) ಎಂದು ಗುರುತಿಸಲಾಗಿದೆ. ಸ್ವಿಫ್ಟ್ ಕಾರಲ್ಲಿದ್ದ ಇತರ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎರ್ಟಿಗಾ ಕಾರಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಅಪಘಾತದಿಂದ ಬೆದರಿ ಎರ್ಟಿಗಾದಲ್ಲಿದ್ದ ಏಳು ಜನರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಕಾರುಗಳನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಇದರ ಬೆನ್ನಲ್ಲೇ ನಸುಕಿನ ಜಾವ ಡಿಯೋ ಸ್ಕೂಟಿಯೊಂದು ರಸ್ತೆ ಪಕ್ಕ ನಿಲ್ಲಿಸಿದ್ದ ಕಾರು ಕಾಣದೆ ಅದಕ್ಕೆ ಡಿಕ್ಕಿ ಹೊಡೆದು ಮತ್ತೊಂದು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ:“ನಮ್ಮ ಪಕ್ಷದವರೇ ಪಿತೂರಿ ನಡೆಸುತ್ತಿದ್ದಾರೆ”: ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಆಕ್ರೋಶ
ಶಿನಾನಂದ ಬಿರಾದಾರ (21) ಮತ್ತು ಇಬ್ರಾಹಿಂ ಚಪ್ಪರಬಂದ (30) ಎಂದು ಗುರುತಿಸಲಾಗಿದೆ. ಎರಡೂ ಪ್ರಕರಣ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಮುದ್ದೇಬಿಹಾಳ ಸಿಪಿಐ ಆನಂದ ವಾಗ್ಮೋಡೆ, ತಾಳಿಕೋಟೆ ಪಿಎಸೈ ವಿನೋದ ದೊಡಮನಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಕಾಡು ಬೆಕ್ಕು ಸಾವನ್ನಪ್ಪಿದ್ದು ವಾಹನಗಳಿಗೆ ಅಡ್ಡ ಬಂದ ಬೆಕ್ಕನ್ನು ಉಳಿಸಲು ಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.