ಕಾಪಾಡಮ್ಮ ಕೃಷ್ಣೆ
Team Udayavani, Aug 4, 2019, 1:31 PM IST
ವಿಜಯಪುರ: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಸೃಷ್ಟಿಸಿರುವ ಕೃಷ್ಣೆ ಜಮೀನುಗಳಿಗೆ ನುಗ್ಗಿ ವಿಜಯಪುರ ಜಿಲ್ಲೆಯ ಅನ್ನದಾತರಲ್ಲಿ ಆತಂಕ ಸೃಷ್ಟಿ ಮಾಡಿದ್ದಾಳೆ.
ಈ ಮಧ್ಯೆ ಮಹಾರಾಷ್ಟ್ರ ಹಾಗೂ ರಾಜ್ಯದ ಕೆಲ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಈ ಮಧ್ಯೆ ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಶನಿವಾರ ಸಂಜೆ ವಿಡಿಯೋ ಸಂವಾದ ಮಾಡಿ, ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆದಿದೆ.
ವಿಜಯಪುರ ಜಿಲ್ಲೆಯ ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳ ಗಡಿಯಲ್ಲಿ ಹರಿವ ಕೃಷ್ಣಾ ನದಿ ಹರಿಯುತ್ತಿದ್ದು, ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 2.36 ಲಕ್ಷ ಕ್ಯೂಸೆಕ್ ನೀರು ಒಳ ಹರಿವಿದೆ. ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಒಳಹರಿವಿಗಿಂತ ಸುಮಾರು 10-20 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಶಾಸ್ತ್ರಿ ಜಲಾಶಯದ 26 ಗೇಟ್ಗಳ ಮೂಲಕ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇಷ್ಟೇ ಪ್ರಮಾಣದ ನೀರು ಬಸವಸಾಗರಕ್ಕೆ ಸೇರುತ್ತಿದ್ದು, ಇಲ್ಲಿಂದಲೂ ಒಳಹರಿವಿನ ಪ್ರಮಾಣದಷ್ಟೇ ನೀರನ್ನು ಜಲಾಶಯದ 21ಗೇಟ್ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ. ಪರಿಣಾಮ ಜಲಾಶಯದ ಅಧಿಕಾರಿಗಳು ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಸಂಬಂಧಿಸಿದ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣದ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮುದ್ದೇಬಿಹಾಳ ತಾಲೂಕಿನ 10 ಹಾಗೂ ನಿಡಗುಂದಿ ತಾಲೂಕಿನ 5 ಹಳ್ಳಿಗಳ ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಇನ್ನೂ ಸುಮಾರು 20 ಹಳ್ಳಿಗಳ ಜಮೀನುಗಳಿಗೆ ಜಲಾಶಯಗಳ ಹಿನ್ನೀರು ನುಗ್ಗುವ ಭೀತಿ ಇದೆ. ಇದರಲ್ಲಿ ಜಲಾಶಯದ ಹಿನ್ನೀರಿಗೆ ಭೂಸ್ವಾಧೀನ ಆಗದ ರೈತರ ಜಮೀನಿನಲ್ಲಿ ಬೆಳೆ ಹಾನಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಸಮೀಕ್ಷೆಗೆ ಮುಂದಾಗಿದೆ. ಭೂಸ್ವಾಧೀನ ಪ್ರದೇಶದ ಸರ್ಕಾರಕ್ಕೆ ಸೇರಿದ್ದು, ಇಂಥ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಹಾನಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಗಡಿಯಲ್ಲಿ ಕೃಷ್ಣಾ ನದಿಗೆ ನಾರಾಯಣಪುರ ಹಾಗೂ ಆಲಮಟ್ಟಿ ಬಳಿ ಎರಡು ಜಲಾಶಯಗಳಿಗೆ ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ಹೊರ ಹರಿವು ಇರುವ ಹಾಗೂ ಕೊಯ್ನಾ ಮುಂಭಾಗದ ಕರ್ನಾಟಕ ಪ್ರದೇಶದಲ್ಲಿ ಸುರಿಯುವ ಮಳೆಯಿಂದ ನದಿಯಲ್ಲಿ ಹೆಚ್ಚುವರಿ ನೀರಿನಿಂದ ಉಂಟಾಗಬಹುದಾದ ಸಂಭಾವ್ಯ ಪ್ರವಾಹದ ಅಪಾಯ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಜಿಲ್ಲಾಡಳಿತ ಶುಕ್ರವಾರ ಸಂಜೆಯಿಂದಲೇ ಕೃಷ್ಣಾ ನದಿ ತೀರ ಪ್ರದೇಶದ ಹಳ್ಳಿಗಳಲ್ಲಿ ಡಂಗೂರ ಸಾರುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ಜಾನುವಾರು ನದಿ ತೀರಕ್ಕೆ ಹೋಗದಂತೆ ಜಾಗೃತಿ ಮೂಡಿಸುತ್ತಿದ್ದು, ನದಿಗೆ ಹೆಚ್ಚಿನ ನೀರು ಹರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ವಿಜಯಪುರ ಜಿಲ್ಲೆಯಲ್ಲಿ ಜಮೀನಿಗೆ ನೀರು ನುಗ್ಗಿದ್ದರೂ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಹಾಗೂ ನಡುಗಡ್ಡೆ ಪ್ರದೇಶಗಳು, ವಸ್ತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಇಲ್ಲ. ಆದಾಗ್ಯೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ವಿವಿಧ ತಹಶೀಲ್ದಾರ್ ಹಾಗೂ ಸಂಭಾವ್ಯ ಪ್ರವಾಹ ಪೀಡಿತ ಹಳ್ಳಿಗಳ ಕಂದಾಯ ಅಧಿಕಾರಿ-ಸಿಬ್ಬಂದಿಗೆ ರವಿವಾರ ಸೇರಿದಂತೆ ರಜೆ ರಹಿತವಾಗಿ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಇದಲ್ಲದೇ ಪ್ರವಾಹ ಪರಿಸ್ಥಿತಿ ಉಂಟಾಗಿ ಜನವತಿ ಪ್ರದೇಶಕ್ಕೆ ನೀರು ನುಗ್ಗಿದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಅಗ್ನಿಶಾಮಕ ಹಾಗೂ ತಾಲೂಕ ಆಡಳಿತದ ಬಳಿ 4 ಬೋಟ್ಗಳನ್ನು ಸಿದ್ಧವಾಗಿ ಇರಿಸಿಕೊಂಡಿವೆ.
ಮತ್ತೂಂದೆಡೆ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆ ದೋರಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ವಿಜಯಪುರ, ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಅಲ್ಲದೇ ಸಂಭಾವ್ಯ ಪ್ರವಾಹ ಎದುರಿಸಲು ಜಿಲ್ಲಾಡಳಿತಗಳು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು. ಆಗತ್ಯ ಎನಿಸಿದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಎನ್ಡಿಆರ್ಎಫ್ ತಂಡಗಳನ್ನು ನೆರವಿಗೆ ಕಳಿಸಲು ಸಿದ್ಧ ಎಂಬ ಸಂದೇಶವನ್ನೂ ನೀಡಿದ್ದಾರೆ.
• ನಿಡಗುಂದಿ, ಮುದ್ದೇಬಿಹಾಳ ತಾಲೂಕಿನ 15 ಹಳ್ಳಿ ಜಮೀನುಗಳಿಗೆ ನುಗ್ಗಿದ ಹಿನ್ನೀರು
• 20 ಹಳ್ಳಿ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ-ಜನವಸತಿ ಪ್ರದೇಶಕ್ಕಿಲ್ಲ ಅಪಾಯ
• ನಾಲ್ಕು ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಉನ್ನತ ಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದ
• ಜಿಲ್ಲೆಯಲ್ಲಿ 4 ಬೋಟ್ಗಳ ಸಹಿತ ಅಧಿಕಾರಿಗಳ ತಂಡ ಪರಿಸ್ಥಿತಿ ಎದುರಿಸಲು ಸನ್ನದ್ಧ
• ಪರಿಸ್ಥಿತಿ ಕೈ ಮೀರಿದರೆ ಎನ್ಡಿಅರ್ಎಫ್ ತಂಡ ಕರೆಯಿಸಲು ರಾಜ್ಯ ಸರ್ಕಾರ ಚಿಂತನೆ